ರಾಜಕೀಯ ಅವಲೋಕನವಷ್ಟೇ; ಈಗಲೇ ರಾಜಕೀಯಕ್ಕೆ ಬರುವುದಿಲ್ಲ: ಜೆಡಿಎಸ್ ಸೇರುವ ಬಗ್ಗೆ ವಿಜೇತಾ ಅನಂತ್ ಕುಮಾರ್ ಸ್ಪಷ್ಟನೆ!
ಕರ್ನಾಟಕದ ರಾಜಕೀಯ ಕುತೂಹಲಕರವಾಗಿದೆ ಏಕೆ ಗೊತ್ತೆ…? ಜೆಡಿಎಸ್ ಇನ್ನು ಬಲಿಷ್ಠ ರಾಜಕೀಯ ಶಕ್ತಿಯಾಗಿರುವುದರಿಂದ.. ಎಂದು ಟ್ವೀಟ್ ಮಾಡಿ ರಾಜ್ಯ ರಾಜಕೀಯದಲ್ಲಿ ಸಂಚಲನ ಮೂಡಿಸಿದ್ದ ಬಿಜೆಪಿ ಮುಖಂಡ, ಮಾಜಿ ಕೇಂದ್ರ ಸಚಿವ ದಿವಂಗತ ಅನಂತ್ ಕುಮಾರ್ ರವರ ಮಗಳು ವಿಜೇತಾ ಅನಂತ್ ಕುಮಾರ್ ಅವರು ಜೆಡಿಎಸ್ ಸೇರಲಿದ್ದಾರೆ ಎಂಬ ಊಹಾಪೋಹಗಳು ಎದ್ದಿದ್ದವು. ಇದಕ್ಕೆ ತೆರೆಎಳೆದಿರುವ ವಿಜೇತಾ, ನಾನು ಈಗಲೇ ರಾಜಕೀಯಕ್ಕೆ ಬರುವುದಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.
ಒಂದು ಸಿದ್ಧಾಂತ ಮತ್ತು ಒಂದು ರಾಜಕೀಯ ವಿಶ್ಲೇಷಣೆ ಅಥವಾ ಅವಲೋಕನವಿರುತ್ತದೆ. ಇವುಗಳು ಸಾಮಾನ್ಯವಾಗಿ ಒಂದೇ ಆಗಿ ಗೊಂದಲಕ್ಕೊಳಗಾಗುತ್ತವೆ. ಒಬ್ಬ ಉತ್ತಮ ಕಲಿಕಾರ್ಥಿಯಾಗಿ ಇದು ನನ್ನ ರಾಜಕೀಯ ಅವಲೋಕನವೇ ಹೊರತು ನನ್ನ ಸೈದ್ಧಾಂತಿಕ ಅನುಮೋದನೆಯಲ್ಲ. ನನ್ನ ಆಲೋಚನೆಗಳು ಮತ್ತು ಅಭಿಪ್ರಾಯಗಳನ್ನು ನನ್ನ ಕುಟುಂಬ ಸದಸ್ಯರ ಅನಿಸಿಕೆಗಳೊಂದಿಗೆ ತಳುಕು ಹಾಕುವುದು ಅನ್ಯಾಯವಾಗಿದೆ ಎಂದು ನಿನ್ನೆ ವಿಜೇತಾ ಬರೆದಿದ್ದಾರೆ.
ಪರಸ್ಪರ ಗೌರವವು ಪ್ರಜಾಪ್ರಭುತ್ವ ವ್ಯವಸ್ಥೆಗೆ ಮೂಲಭೂತವಾದುದು ಎಂದು ಅಪ್ಪ ನನಗೆ ಕಲಿಸಿದ್ದಾರೆ. ನನ್ನ ಗೌರವದ ಅಭಿವ್ಯಕ್ತಿಯನ್ನು ತಪ್ಪಾಗಿ ಅರ್ಥೈಸಿಕೊಳ್ಳಬಾರದು. ಈಗಲೇ ನಾನು ಯಾವುದೇ ರಾಜಕೀಯ ಪಕ್ಷ ಸೇರುವುದಿಲ್ಲ. ಹೆಚ್ಚಿನದನ್ನು ಕಲಿಯಲು ಬಯಸುತ್ತೇನೆ ಎಂದು ಅವರು ತಿಳಿಸಿದ್ದಾರೆ.
ಇದನ್ನೂ ಓದಿ: ಪಿಎಂಎವೈ ಹಗರಣ: ಸರ್ಕಾರಿ ಕಚೇರಿಗೆ ನುಗ್ಗಿ ಬಿಜೆಪಿ ಕಾರ್ಯಕರ್ತರ ದಾಂದಲೆ!
ನನ್ನ ತಂದೆ ಕರ್ನಾಟಕದಲ್ಲಿ 35 ವರ್ಷಗಳ ಅವಧಿಯಲ್ಲಿ ಲಕ್ಷಾಂತರ ಕಾರ್ಯಕರ್ತರೊಂದಿಗೆ ಸೇರಿ ಒಂದೊಂದೆ ಇಟ್ಟಿಗೆ ಜೋಡಿಸುವ ಹಾಗೆ ಬಿಜೆಪಿಯನ್ನು ಕಟ್ಟಿದರು. ಅಮ್ಮ ಹಸಿವು, ಪೋಷಣೆ ಮತ್ತು ಪರಿಸರ ಕ್ಷೇತ್ರದಲ್ಲಿ ಮತ್ತು ಪಕ್ಷಕ್ಕಾಗಿ ಅತ್ಯಂತ ಅವಿರತವಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಸಹ ಅವರು ಬರೆದಿದ್ದಾರೆ.
https://twitter.com/vijeta_at/status/1422103837100285952?s=20
ಒಂದು ಪಕ್ಷಕ್ಕೆ ಸೇವೆ ಸಲ್ಲಿಸುವ ಮೂಲಕ ಮತ್ತು ಕಾರ್ಯಕರ್ತನಾಗಿ ಕೆಲಸ ಮಾಡುವ ಮೂಲಕ ರಾಜಕೀಯ ಆರಂಭವಾಗಬೇಕು. ದೇಶಕ್ಕಾಗಿ ಸೇವೆ ಸಲ್ಲಿಸಲು ನಾನಿನ್ನು ಕಲಿಯುತ್ತಿದ್ದೇನೆ ಎಂದು ಅವರು ಹೇಳಿದ್ದಾರೆ.
ವಿಜೇತಾ ಹೇಳಿಕೆಗೆ ಪ್ರತಿಕ್ರಿಯಿಸಿದ್ದ ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿ ‘ಅನಂತಕುಮಾರ್ ಪುತ್ರಿಯವರ ಹೇಳಿಕೆಗೆ ನಾನು ಅಭಿನಂದನೆ ಸಲ್ಲಿಸಿದ್ದೇನೆ. ವಿಜೇತಾ ನನಗೆ ಸಹೋದರಿ ಸಮಾನ. ಅವರ ಮಾತು ಪಕ್ಷದ ಕಾರ್ಯಕರ್ತರಲ್ಲಿ ಉತ್ಸಾಹ ತುಂಬಿದೆ. ವಿಜೇತಾ ಮತ್ತು ಅವರ ತಾಯಿ ತೇಜಸ್ವಿನಿ ಅನಂತಕುಮಾರ್ ಪಕ್ಷಕ್ಕೆ ಬಂದರೇ ಸ್ವಾಗತ” ಎಂದಿದ್ದರು.
ಇದನ್ನೂ ಓದಿ: ಬೆಂಗಳೂರಿನಲ್ಲಿ ಇಂದಿನಿಂದಲೇ ರಾತ್ರಿ ಕರ್ಫ್ಯೂ ಜಾರಿ; ನಿಯಮ ಉಲ್ಲಂಘಿಸಿದ್ರೆ ವಾಹನಗಳು ಸೀಜ್!