‘ನನ್ನ ಮನೆ ಮೇಲೆ ದಾಳಿ ರಾಜಕೀಯ ಪ್ರೇರಿತ’ : ಹೆಚ್ಡಿಕೆ ವಿರುದ್ಧ ಜಮೀರ್ ಆರೋಪ..?
ನೂರಾರು ಕೋಟಿ ಲೂಟಿ ಹೊಡೆದು ಅಕ್ರಮ ಸಂಪತ್ತು ಗಳಿಸಿರುವ ಶಾಸಕ ಜಮೀರ್ ಅಹ್ಮದ್ ಈಗ ಜಾರಿ ನಿರ್ದೇಶನಾಲಯದ ಬಲೆಗೆ ಬಿದ್ದಿದ್ದಾರೆ. ಮಾತ್ರವಲ್ಲದೇ ನನ್ನ ಮನೆ ಮೇಲೆ ದಾಳಿ ರಾಜಕೀಯ ಪ್ರೇರಿತ ಎಂದು ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ವಿರುದ್ಧ ಶಾಸಕ ಜಮೀರ್ ಆರೋಪ ಮಾಡಿದ್ದಾರೆ.
ಜಾರಿ ನಿರ್ದೇಶನಾಲಯದ ದಾಳಿ ಕುರಿತು ಇಂದು ಮಾತನಾಡಿದ ಶಾಸಕ ಜಮೀರ್ ಅಹ್ಮದ್,”ನನ್ನ ಬೆಳವಣಿಗೆ ಸಹಿಸಲಾರದೆ ಈ ರೀತಿ ಮಾಡಿದ್ದಾರೆ. ನಾನು ಬಿಟ್ಟು ಬಂದ ಪಕ್ಷದವರೇ ಈ ರೀತಿ ಮಾಡಿಸಿದ್ದಾರೆ. ಕಾಂಗ್ರೆಸ್ ಗೆ ಬಂದು ಈ ಮಟ್ಟಕ್ಕೆ ಬೆಳೆಯುತ್ತೇನೆಂದು ಅವರು ನಿರೀಕ್ಷಿಸಿರಲಿಲ್ಲ. ಹೀಗಾಗಿ ನನ್ನ ಮನೆ ಮೇಲೆ ಇಡಿ ದಾಳಿ ಮಾಡಿಸಿದ್ದಾರೆ. ಇದರಲ್ಲಿ ನಾನು ಬಿಟ್ಟು ಬಂದ ಹಳೆ ಪಕ್ಷ ಜೆಡಿಎಸ್ ನ ಕೈವಾಡವಿದೆ. ಈ ದಾಳಿ ರಾಜಕೀಯ ಪ್ರೇರಿತವಾಗಿದೆ” ಎಂದು ಶಾಸಕ ಜಮೀರ್ ಅಹ್ಮದ್ ಆರೋಪ ಮಾಡಿದ್ದಾರೆ.
‘ಇಡಿ ಅಧಿಕಾರಿಗಳು ನನಗೆ ಖುದ್ದು ಹೇಳಿದ್ದಾರೆ ನನ್ನ ವಿರುದ್ಧ ದೂರು ಇದೆ ಎಂದು. ನಮ್ಮ ದುಡಿಮೆಯಿಂದ ನಾವು ಮನೆ ಕಟ್ಟಿದ್ದೇವೆ. ಯಾರ ಹಣದಲ್ಲೂ ನಾವು ಮನೆ ಕಟ್ಟಿಲ್ಲ. ಇದಕ್ಕೆ ಬೇಕಾದ ದಾಖಲೆಗಳನ್ನು ಇಡಿಗೆ ಕೊಟ್ಟಿದ್ದೇವೆ. ಬರೀ ನೀವು ಮಾತ್ರ ಬೆಳೆಯಬೇಕಾ..? ನಾವು ಬೆಳಿಯಬಾರದಾ..?’ ಎಂದು ಪ್ರಶ್ನಿಸಿದ್ದಾರೆ.
ಜೊತೆಗೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ವಿರುದ್ಧವೂ ಗರಂ ಆಗಿದ್ದಾರೆ. ನಿಮ್ಮ ಮನೆ ಮೇಲೂ ಈ ಹಿಂದೆ ಇಡಿ ಐಟಿ ದಾಳಿ ಆಗಿದ್ದು. ಹಾಗಾದ್ರೆ ನಿಮಗೂ ಐಎಂಎ ಸಂಬಂಧವಿದಿಯಾ..? ಎಂದು ಟೀಕಿಸಿದ್ದಾರೆ.
ಜಮೀರ್ ಹೇಳಿಕೆಗೆ ರಾಮನಗರದಲ್ಲಿ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಪ್ರತಿಕ್ರಿಯೆ ನೀಡಿದ್ದಾರೆ. ‘ನನ್ನ ಅವರ ರಾಜಕೀಯ ಸಂಬಂಧ ಕಳೆದ ವರ್ಷವೇ ಮುಗಿದು ಹೋಗಿದೆ. ಯಾರ್ ಕೊಟ್ಟು ಮಾಡಿಸಿದ್ದಾರೋ ಅವರನ್ನ ಕೇಳಲಿ. ನನಗ್ಯಾಕೆ ಅದರೊಳಗೆ ಎಳಿತಾರೆ. ನಮಗೂ ಇದಕ್ಕೂ ಯಾವುದೇ ಸಂಬಂಧವಿಲ್ಲ’ ಎಂದಿದ್ದಾರೆ.
ಇನ್ನೂ ಮೇಕೆದಾಟು ಯೋಜನೆ ಬಗ್ಗೆ ಮಾತನಾಡಿದ ಅವರು, ‘ಮೇಕೆದಾಟಿಗೆ ಯಾವುದೇ ಅನುಮತಿ ಬೇಕಿಲ್ಲ ಎಂದು ಸರ್ಕಾರ ಹೇಳುತ್ತದೆ. ಹಾಗಾದ್ರೆ ನಾಳೆಯಿಂದ ಕೆಲಸ ಆರಂಭಿಸಲು ಏನ್ ತೊಂದರೆ?’ ಎಂದು ಹೆಚ್ ಡಿ ಕುಮಾರಸ್ವಾಮಿ ಪ್ರಶ್ನೆಸಿದ್ದಾರೆ.