ಉತ್ತರಾಖಂಡದಲ್ಲಿ ಮತ್ತೊಂದು ಭೂಕುಸಿತ : 7 ಜನ ಸಾವು – ಮೂವರ ಶವ ಪತ್ತೆ!
ಉತ್ತರಾಖಂಡದ ಪಿಥೋರಘರ್ ಜಿಲ್ಲೆಯಲ್ಲಿ ಭೂಕುಸಿತವಾಗಿದ್ದು ಮನೆಗಳು ಮಣ್ಣಿನಿಂದ ಮುಚ್ಚಿಹೋಗಿ ಏಳು ಜನರು ಸಾವನ್ನಪ್ಪಿದ್ದಾರೆ.
ಜುಮ್ಮಾ ಹಳ್ಳಿಯ ಜಮ್ರಿ ಮತ್ತು ತರ್ಕೋಟ್ ಕುಗ್ರಾಮಗಳಲ್ಲಿ ಈ ದುರಂತ ಸಂಭವಿಸಿದೆ. ಭಾರೀ ಮಳೆಯಿಂದಾಗಿ ಮನೆಗಳಿಗೆ ಭಗ್ನಾವಶೇಷಗಳು ಸೇರಿಕೊಂಡಿವೆ. ಇಲ್ಲಿಯವರೆಗೆ ಮೂರು ಶವಗಳನ್ನು ಪತ್ತೆ ಮಾಡಲಾಗಿದ್ದು ರಾಜ್ಯ ವಿಪತ್ತು ಪ್ರತಿಕ್ರಿಯೆ ಪಡೆ (ಎಸ್ಡಿಆರ್ಎಫ್) ತಂಡ ಇತರ ನಾಪತ್ತೆಯಾದವರಿಗಾಗಿ ಶೋಧ ನಡೆಸುತ್ತಿದೆ ಎಂದು ಪಿಥೋರಘರದ ಜಿಲ್ಲಾ ಮ್ಯಾಜಿಸ್ಟ್ರೇಟ್ ಆಶಿಶ್ ಚೌಹಾಣ್ ಹೇಳಿದ್ದಾರೆ.
“ರಕ್ಷಣಾ ಕಾರ್ಯಾಚರಣೆಯನ್ನು ತೀವ್ರಗೊಳಿಸಲು ಜಿಲ್ಲಾಧಿಕಾರಿಗಳಿಗೆ ಸೂಚನೆಗಳನ್ನು ನೀಡಲಾಗಿದೆ. ಅಲ್ಲಿ ಸಿಲುಕಿರುವ ಜನರ ಸುರಕ್ಷತೆಗಾಗಿ ನಾನು ದೇವರನ್ನು ಪ್ರಾರ್ಥಿಸುತ್ತೇನೆ “ಎಂದು ಉತ್ತರಾಖಂಡದ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಟ್ವೀಟ್ ಮಾಡಿದ್ದಾರೆ.
ಎಸ್ಟಿಆರ್ಎಫ್ ಮತ್ತು ಶಾಸ್ತ್ರ ಸೀಮಾ ಬಾಲ್ (ಎಸ್ಎಸ್ಬಿ) ತಂಡಗಳನ್ನು ಜುಮ್ಮಾ ಗ್ರಾಮಕ್ಕೆ ಕಳುಹಿಸಲಾಗಿದೆ ಎಂದು ಪಿಥೋರಘರ್ ಜಿಲ್ಲಾ ಮ್ಯಾಜಿಸ್ಟ್ರೇಟ್ ಚೌಹಾಣ್ ಸುದ್ದಿ ಸಂಸ್ಥೆಗೆ ತಿಳಿಸಿದರು. ಪಿಥೋರಘರ್ ಜಿಲ್ಲೆಯಲ್ಲಿ ಕಳೆದ ನಾಲ್ಕೈದು ದಿನಗಳಿಂದ ನಿರಂತರ ಮಳೆಯಾಗುತ್ತಿದ್ದು, ಇದು ಹಲವಾರು ಭೂಕುಸಿತಗಳಿಗೆ ಕಾರಣವಾಗಿದೆ.
ಉತ್ತರಾಖಂಡದ ನೈನಿತಾಲ್, ಬಾಗೇಶ್ವರ್ ಮತ್ತು ಪಿತೋರಘರ್ ಜಿಲ್ಲೆಗಳಲ್ಲಿ ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಶನಿವಾರ ಹಳದಿ ಎಚ್ಚರಿಕೆಯನ್ನು ನೀಡಿದ್ದು ಈ ಪ್ರದೇಶಗಳಲ್ಲಿ ಭಾರೀ ಮಳೆಯಾಗುವ ಮುನ್ಸೂಚನೆ ನೀಡಿದೆ. ರಾಜ್ಯದಲ್ಲಿ ಭಾರೀ ಮಳೆಯಿಂದಾಗಿ ಹತ್ತಾರು ರಸ್ತೆಗಳು ಹಾಳಾಗಿವೆ. ಸೇತುವೆಗಳು ಕೊಚ್ಚಿಹೋಗಿವೆ ಮತ್ತು ಅನೇಕ ಪ್ರದೇಶಗಳು ಮುಳುಗಡೆಯಾಗಿವೆ.
ಮುಖ್ಯಮಂತ್ರಿ ಧಾಮಿ ಭಾನುವಾರ ರಾಜ್ಯದ ಗರ್ವಾಲ್ ದೇವಪ್ರಯಾಗ, ತೋಟಾಘಾಟಿ, ತಿಂಧರ, ಕೌಡಿಯಾಲ, ಋಷಿಕೇಶ್, ರಾಣಿಪೋಖರಿ, ನರೇಂದ್ರನಗರ, ಫಕೋಟ್ ಮತ್ತು ಗರ್ವಾಲ್ ವಿಭಾಗದ ಚಂಬಾಗಳ ಪೀಡಿತ ಪ್ರದೇಶಗಳಲ್ಲಿ ಸಮೀಕ್ಷೆ ಮಾಡಿದರು.
ಉತ್ತರಾಖಂಡದಲ್ಲಿ ಸುರಿದ ಭಾರೀ ಮಳೆಯಿಂದ ಸಾಕಷ್ಟು ನಾಶವಾಗಿದೆ ಮತ್ತು ಬದರಿನಾಥ ಮತ್ತು ಗಂಗೋತ್ರಿ ಹೆದ್ದಾರಿಗಳು ಸೇರಿದಂತೆ ರಾಜ್ಯದ 166 ರಸ್ತೆಗಳನ್ನು ಮುಚ್ಚಲಾಗಿದೆ. ನಿರಂತರ ಮಳೆಯಿಂದಾಗಿ ಋಷಿಕೇಶ್-ಬದರಿನಾಥ್ ರಸ್ತೆಯನ್ನು ರೆಡ್ ಅಲರ್ಟ್ ಮಾಡಲಾಗಿದೆ ಎಂದು ಸುದ್ದಿ ಸಂಸ್ಥೆ ANI ವರದಿ ಮಾಡಿದೆ.