ಲಖಿಂಪುರ್ ಖೇರಿ ಹಿಂಸಾಚಾರ : ಸೀತಾಪುರದಲ್ಲಿ ಮೊಬೈಲ್ ಇಂಟರ್ನೆಟ್ ಸೇವೆ ಸ್ಥಗಿತ..!
ಉತ್ತರ ಪ್ರದೇಶದ ಲಖಿಂಪುರ್ ಖೇರಿ ಜಿಲ್ಲೆಯಲ್ಲಿ ಹಿಂಸಾತ್ಮಕ ಘರ್ಷಣೆಯಲ್ಲಿ ಸಾವನ್ನಪ್ಪಿದ ನಾಲ್ವರು ಕೃಷಿ ಪ್ರತಿಭಟನಾಕಾರರ ಪೈಕಿ ಮೂವರ ಅಂತ್ಯಕ್ರಿಯೆಯನ್ನು ಮಂಗಳವಾರ ನಡೆಸಲಾಯಿತು. ನಾಲ್ಕನೇ ರೈತನ ಮರಣೋತ್ತರ ಪರೀಕ್ಷೆಯನ್ನು ಎರಡನೇ ಬಾರಿಗೆ ಮಾಡಲಾಯಿಗಿದ್ದು ಅವರ ಅಂತ್ಯಕ್ರಿಯೆ ಇಂದು (ಬುಧವಾರ) ನಡೆಯುವ ನಿರೀಕ್ಷೆಯಿದೆ. ಈ ನಡುವೆ ಸೀತಾಪುರದಲ್ಲಿ ಮೊಬೈಲ್ ಇಂಟರ್ನೆಟ್ ಸೇವೆ ಸ್ಥಗಿತಗೊಳಿಸಲಾಗಿದೆ.
ಕಳೆದ ವರ್ಷ ಕೇಂದ್ರದ ಕೃಷಿ ಕಾನೂನುಗಳ ವಿರುದ್ಧ ರೈತರ ಪ್ರತಿಭಟನೆ ಭಾಗವಾಗಿ ಭಾನುವಾರ ನಡೆದ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿ ಘರ್ಷಣೆಯಲ್ಲಿ ನಾಲ್ಕು ರೈತರು ಸೇರಿದಂತೆ ಒಟ್ಟು ಎಂಟು ಜನರು ಲಖಿಂಪುರ್ ಖೇರಿಯಲ್ಲಿ ಸಾವನ್ನಪ್ಪಿದ್ದರು.
ಕೇಂದ್ರ ಸಚಿವ ಅಜಯ್ ಮಿಶ್ರಾ ಅವರ ಪುತ್ರ ಆಶಿಶ್ ಮಿಶ್ರಾ ಅವರ ಹೆಸರನ್ನು ಉತ್ತರ ಪ್ರದೇಶ ಪೊಲೀಸರು ಲಖಿಂಪುರ್ ಖೇರಿ ಪ್ರಕರಣದಲ್ಲಿ ದಾಖಲಿಸಿದ್ದಾರೆ. ಆಶಿಶ್ ಅಲಿಯಾಸ್ ಮೋನು ಕಾರಿನಲ್ಲಿ ಕುಳಿತಿದ್ದ ಎಂದು ಎಫ್ಐಆರ್ ಹೇಳಿದೆ. ಹೀಗಾಗಿ ಅದು ಪ್ರತಿಭಟನಾ ನಿರತ ರೈತರನ್ನು ಕೆಣಕಿತು.
ಮಿಶ್ರಾ ಅವರ ಪುತ್ರನನ್ನು ಕೂಡಲೆ ಬಂಧಿಸುವಂತೆ ಒತ್ತಾಯಿಸಿ ಕಾಂಗ್ರೆಸ್ ಮುಖಂಡ ಪ್ರಿಯಾಂಕಾ ಗಾಂಧಿ ಮತ್ತು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಸೇರಿದಂತೆ ಕೆಲವು ಉನ್ನತ ನಾಯಕರು ಪ್ರತಿಭಟನೆ ನಡೆಸಿ ಹಿಂಸಾಚಾರ ಪೀಡಿತ ಜಿಲ್ಲೆಗೆ ಭೇಟಿ ನೀಡಲು ಯತ್ನಿಸಿದಾಗ ಅವರನ್ನು ಪೊಲೀಸರು ಬಂಧಿಸಿದರು.
ಲಖಿಂಪುರ್ ಖೇರಿಗೆ ಭೇಟಿ ನೀಡುವ ನಿಷೇಧಾಜ್ಞೆಗಳನ್ನು ಧಿಕ್ಕರಿಸಿ ಸೋಮವಾರ ಬಂಧನಕ್ಕೊಳಗಾಗಿದ್ದ ಪ್ರಿಯಾಂಕಾ ಗಾಂಧಿ ವಾದ್ರಾ ತನ್ನ ಬಂಧನವನ್ನು “ಕಾನೂನುಬಾಹಿರ” ಎಂದು ಕೆರಳಿದ್ದಾರೆ. ಈ ಎಲ್ಲಾ ಘರ್ಷಣೆಗಳ ಮಧ್ಯೆ ಸೀತಾಪುರದಲ್ಲಿ ಮೊಬೈಲ್ ಇಂಟರ್ನೆಟ್ ಸೇವೆ ಸ್ಥಗಿತಗೊಳಿಸಲಾಗಿದೆ.