FACT CHECK | ಕನ್ನಡಿಗರಿಗೆ ಕುಡಿಯಲು ನೀರಿಲ್ಲದಿದ್ದರೂ ರಾಜ್ಯ ಸರ್ಕಾರ ತಮಿಳುನಾಡಿಗೆ ಕದ್ದು ಮುಚ್ಚಿ ಕಾವೇರಿ ನೀರು ಹರಿಸಿದೆಯೇ? ಈ ಸ್ಟೋರಿ ಓದಿ

ಬೆಂಗಳೂರಿನಲ್ಲಿ ಕುಡಿಯಲು ಹನಿ ನೀರು ಕೂಡ ಸಿಗುತ್ತಿಲ್ಲ. ಆದರೆ, ನಾಡ ದ್ರೋಹಿ @INCKarnataka ತಮಿಳುನಾಡಿಗೆ ಮಾತ್ರ ಕಳ್ಳತನದಿಂದ ಕಾವೇರಿ ನೀರು ಹರಿಸುತ್ತಲೇ ಇದೆ. ತಮಿಳುನಾಡಿನ ಮೆಟ್ಟೂರು ಜಲಾಶಯ ತುಂಬಿ ತುಳುಕುತ್ತಿದ್ದರೂ, ಬೆಂಗಳೂರಿನಲ್ಲಿ ಟ್ಯಾಂಕರ್ ಮಾಫಿಯಾವನ್ನು ಯಶಸ್ವಿಗೊಳಿಸಲು ಇರುವ ಕಾವೇರಿಯ ಒಡಲನ್ನು ಬಗೆಯುತ್ತಿದೆ ನಾಡ ದ್ರೋಹಿ ಕಾಂಗ್ರೆಸ್.

ಮಜಾವಾದಿ @siddaramaiah  ಹಾಗೂ @DKShivakumar ಅವರೇ, ಇದೇನಾ ನೀವು ಕನ್ನಡಿಗರಿಗೆ ಕೊಡುತ್ತಿರುವ ನಾಡ ದ್ರೋಹದ ಗ್ಯಾರಂಟಿ? ಕಾವೇರಿ ಒಡಲು ಬತ್ತಿ ಹೋಗುತ್ತಿದ್ದರೂ, ಅದನ್ನೂ ಹಿಂಡಿ ಹಿಪ್ಪೆ ಮಾಡಿ ತಮಿಳುನಾಡಿಗೆ ನೀರು ಬಿಡುತ್ತಿದ್ದೀರಿ ಎಂದರೆ, ಟ್ಯಾಂಕರ್ ಮಾಫಿಯಾದಿಂದ ಕಮಾಯಿ ಸಿಕ್ಕಾಪಟ್ಟೆ ಬರುತ್ತಿದೆ ಎಂದೇ ಅರ್ಥ. ಕನ್ನಡಿಗರ ಮೇಲೆ ಅದೆಷ್ಟು ದ್ವೇಷ ಸಾಧಿಸುತ್ತಿರಬೇಡ ಈ #ಸ್ಲೀಪಿಂಗ್_ಸರ್ಕಾರ! ಎಂಬ ಪ್ರತಿಪಾದನೆಯೊಂದಿಗೆ BJP ತನ್ನ ಎಕ್ಸ್‌ ಖಾತೆಯ ಮೂಲಕ ಪೋಸ್ಟ್‌ಅನ್ನು ಹಂಚಿಕೊಂಡಿದೆ.

ಮುಖ್ಯವಾಗಿ  NDA ಮೈತ್ರಿಯೊಂದಿಗೆ ಬಿಜೆಪಿ ಭಾಗವಾಗಿರುವ ಜೆಡಿ (ಎಸ್) ಕೂಡ ಇದೇ ರೀತಿ ಪೋಸ್ಟ್‌ಅನ್ನು ಹಂಚಿಕೊಂಡಿದೆ. ಹಲವು ಸಾಮಾಜಿಕ ಮಾಧ್ಯಮಗಳ ಬಳಕೆದಾರರು, ಬೆಂಬಲಿಗರು ಇದೇ ಪ್ರತಿಪಾದನೆಯೊಂದಿಗೆ ತಮ್ಮ ಸೋಶಿಯಲ್ ಮೀಡಿಯಾಗಳಲ್ಲಿ ಪೋಸ್ಟ್‌ಅನ್ನು ಹಂಚಿಕೊಂಡಿದ್ದಾರೆ.

ಹಾಗಿದ್ದರೆ ರಾಜ್ಯದ ಜನರಿಗೆ ನೀರಿಲ್ಲದಿದ್ದರೂ ಕರ್ನಾಟಕದ ಕಾಂಗ್ರೆಸ್‌ ಸರ್ಕಾರ ಪ್ರಸ್ತುತ ತಮಿಳುನಾಡಿಗೆ ಕಾವೇರಿ ನೀರನ್ನು ಹರಿಸುತ್ತಿದೆ ಎಂಬುದು ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಸದ್ಯ ಕರ್ನಾಟಕದ ಪರಿಸ್ಥಿತಿ ಸೋಚನೀಯವಾಗಿದ್ದು ಬರದಿಂದ ತತ್ತರಿಸಿ ಹೋಗಿದೆ, ಬೆಂಗಳೂರು ಮತ್ತು ಸುತ್ತಮುತ್ತಲಿನ ಜನರಿಗೆ ಕುಡಿಯುವ ನೀರನ್ನು ಪೂರೈಸಲು ಸಾದ್ಯವಾಗ ಸ್ಥಿತಿಗೆ ತಲುಪಿದೆ. ನೀರಿನ ಅಭಾವ ನೀಗಿಸಲು ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡಲಾಗುತ್ತಿದೆ. ಹೀಗಿರುವಾಗ ಕಾವೇರಿ ನೀರನ್ನು ತಮಿಳುನಾಡಿಗೆ ಹರಿಸಲಾಗುತ್ತಿದೆ ಎಂಬ ಅರೋಪ ಕೇಳಿಬರುತಿದ್ದು ಇದು ನಿಜವೇ ಎಂದು ಪರಿಶೀಲಿಸಲು ಕೀವರ್ಡ್ ಮೂಲಕ ಗೂಗಲ್ ಸರ್ಚ್ ಮಾಡಿದಾಗ,ಈ ವೇಳೆ ಕೆಲವೊಂದು ಮಾಧ್ಯಮ ವರದಿಗಳು ಲಭ್ಯವಾಗಿವೆ.

11 ಮಾರ್ಚ್ 2024ರ ವರದಿಗಳ ಪ್ರಕಾರ, ಕೃಷ್ಣರಾಜಸಾಗರ (ಕೆಆರ್​​ಎಸ್) ಜಲಾಶಯದಿಂದ ತಮಿಳುನಾಡಿಗೆ ನೀರು ಹರಿಸಿಲ್ಲ. ಬೆಂಗಳೂರು ನಗರಕ್ಕೆ ಕುಡಿಯುವ ನೀರಿನ ಪೂರೈಕೆಗಾಗಿ ಹರಿಸಲಾಗಿದೆ ಎಂದು ನೀರಾವರಿ ಇಲಾಖೆ ಸ್ಪಷ್ಟೀಕರಣ ನೀಡಿದೆ ಎಂದು  ಇಟಿವಿ ಭಾರತ್ ವರದಿ ಪ್ರಕಟಿಸಿದೆ.

ಬೆಂಗಳೂರಿಗೆ ನೀರಿನ ಬರ ಇದ್ದರೂ ತಮಿಳುನಾಡಿಗೆ‌ ಕಾವೇರಿ ನೀರು ಹರಿಸಲಾಗುತ್ತಿದೆ ಎಂದು ಪ್ರತಿಪಕ್ಷಗಳ ಆರೋಪ ಹಿನ್ನೆಲೆಯಲ್ಲಿ ನೀರಾವರಿ ಇಲಾಖೆ ಪ್ರತಿಕಾ ಪ್ರಕಟಣೆ ಹೊರಡಿಸಿದೆ. ”ಇಲಾಖೆಯ ಮೈಸೂರು ವಿಭಾಗ ಹಾಗೂ ಬೆಂಗಳೂರು ನಗರಕ್ಕೆ ಕುಡಿಯಲು ನೀರು ಸರಬರಾಜು ಮಾಡುವ ಉದ್ದೇಶಕ್ಕಾಗಿ ಮಳವಳ್ಳಿ ತಾಲೂಕಿನ ಶಿವಾ ಅಣೆಕಟ್ಟೆಯನ್ನು ಉಪಯೋಗಿಸಲಾಗುತ್ತಿದೆ. ಕಾವೇರಿ ನದಿಯಿಂದ ಬೆಂಗಳೂರು, ಮೈಸೂರು ಮತ್ತು ಇತರೆ ಪಟ್ಟಣ ಹಾಗೂ ಗ್ರಾಮಗಳಿಗೆ ಕುಡಿಯಲು ಹಾಗೂ ಕೈಗಾರಿಕೆಗಳಿಗೆ ಸರಬರಾಜು ಮಾಡಲು ಪ್ರತಿದಿನ ಒಟ್ಟಾರೆ 1000 ಕ್ಯೂಸೆಕ್​ನಷ್ಟು ನೀರಿನ ಅಗತ್ಯತೆ ಇದೆ” ಎಂದು ನೀರಾವರಿ ಇಲಾಖೆ ತಿಳಿಸಿದೆ ಹೇಳಿದೆ.

Fact Check: ಕುಡಿಯಲು ನೀರಿಲ್ಲದಿದ್ದರೂ ತಮಿಳುನಾಡಿಗೆ ಕಾವೇರಿ ನೀರು ಹರಿಸಲಾಗುತ್ತಿದೆಯೇ?

ಬೆಂಗಳೂರು ಜಲ ಮಂಡಳಿ (ಬಿಡಬ್ಲ್ಯೂಎಸ್​​ಎಸ್​​ಬಿ) ನೀಡಿರುವ ಮಾಹಿತಿಯಂತೆ ಮಳವಳ್ಳಿ ತಾಲೂಕಿನ ಶಿವಾ ಅಣೆಕಟ್ಟೆ ಬಳಿಯಿಂದ ನೀರನ್ನು ತೊರೆಕಾಡನಹಳ್ಳಿವರೆಗೆ ಹರಿಸಿ, ತೊರೆಕಾಡನಹಳ್ಳಿಯಲ್ಲಿ ಸ್ಥಾಪಿಸಿರುವ ಜಲಸ್ಥಾವರ ಮುಖಾಂತರ ಸುಮಾರು 1470 ಎಂಎಲ್​ಡಿ (600 ಕ್ಯೂಸೆಕ್​ನಷ್ಟು) ನೀರನ್ನು ಬೆಂಗಳೂರಿಗೆ ಸರಬರಾಜು ಮಾಡಲಾಗುತ್ತಿದೆ. ಮಾರ್ಚ್​ 6ರಿಂದ 8ವರೆಗೆ ಶಿವಾ ಅಣೆಕಟ್ಟಿನಲ್ಲಿನ ನೀರಿನ ಮಟ್ಟವು ದಿನದಿಂದ ದಿನಕ್ಕೆ ಗಣನೀಯವಾಗಿ ಕಡಿಮೆಯಾಗಿ ಅಣೆಕಟ್ಟೆಯ ಮೇಲ್ಭಾಗದಿಂದ 36 ಇಂಚಿನಷ್ಟು ಕೆಳಮಟ್ಟ ತಲುಪಿದೆ. ಇದರಿಂದ, ಬೆಂಗಳೂರು ನಗರಕ್ಕೆ ಕುಡಿಯುವ ನೀರಿನ ಪ್ರಮಾಣವನ್ನು ಸರಬರಾಜು ಮಾಡಲು ವ್ಯತ್ಯಯವಾಗಿದೆ ಎಂದಿದೆ.

ಮಾರ್ಚ್​ 9ರಂದು ಬೆಂಗಳೂರು ಜಲ ಮಂಡಳಿ ಅಧಿಕಾರಿಗಳು ಕೆಆರ್​​ಎಸ್ ಜಲಾಶಯಕ್ಕೆ ಭೇಟಿ ನೀಡಿ, ನೀರಿನ ಹರಿವಿನ ಪ್ರಮಾಣವನ್ನು ಹೆಚ್ಚಿಸಲು ಕೋರಿದ್ದಾರೆ. ಅದರಂತೆ ಕೆಆರ್​​ಎಸ್ ಜಲಾಶಯದಿಂದ ಹಂತ ಹಂತವಾಗಿ ನೀರನ್ನು ಏರಿಕೆ ಮಾಡಿ, ಸುಮಾರು 4780 ಕ್ಯೂಸೆಕ್​ಗಳಷ್ಟು ನೀರನ್ನು ಹರಿಬಿಡಲಾಗಿದೆ. ನಂತರ, ಕೆಆರ್​ಎಸ್ ಡ್ಯಾಂನಿಂದ ಕಾವೇರಿ ಪಾತ್ರದುದ್ದಕ್ಕೂ ಬೆಂಗಳೂರು ಜಲ ಮಂಡಳಿ ಮತ್ತು ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ಜಂಟಿಯಾಗಿ ಸ್ಥಳ ಪರಿಶೀಲನೆ ನಡೆಸಿದ್ದಾರೆ ಎಂದು ಇಲಾಖೆ ವಿವರಿಸಿದೆ.

ಇನ್ನು ಈ ಕುರಿತಂತೆ ವರದಿಗಳ ಬಗ್ಗೆ ಕೃಷ್ಣರಾಜಸಾಗರ ಆಧುನೀಕರಣ ಮತ್ತು ಮಧ್ಯಮ ನೀರಾವರಿ ಯೋಜನಾ ವೃತ್ತ, ಮಂಡ್ಯದ ಅಧೀಕ್ಷಕ ಇಂಜಿನಿಯರ್ ರಘುರಾಮ್‌ ಮತ್ತು ಮುಖ್ಯ ಇಂಜಿನಿಯರ್ ಆರ್.ಎಲ್‌.ವೆಂಕಟೇಶ್ಅವರು ಸ್ಪಷ್ಟನೆ ನೀಡಿದ್ದು, “ಮಾರ್ಚ್ 9 ಮತ್ತು ಮಾರ್ಚ್ 10, 2024ರಂದು ಸುದ್ದಿ ಮಾಧ್ಯಮಗಳಲ್ಲಿ ಪ್ರಕಟವಾಗಿರುವಂತೆ ಕೆಆರ್ ಎಸ್‌ ಜಲಾಶಯದಿಂದ 4000 ಕ್ಯೂಸೆಕ್ಸ್ ಗೂ ಹೆಚ್ಚು ನೀರನ್ನು ತಮಿಳುನಾಡಿಗೆ ಹರಿಸಿಲ್ಲ. ಬೆಂಗಳೂರು ನಗರಕ್ಕೆ ಕುಡಿಯುವ ನೀರಿನ ಬಳಕೆಗೆ ಮಳವಳ್ಳಿಯ ಶಿವಾ ಅಣೆಕಟ್ಟೆಗೆ ನೀರು ಹರಿಸಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.” ಈ ಕುರಿತ ಪತ್ರಿಕಾ ಪ್ರಕಟಣೆಯನ್ನು ಕೆಳಗೆ ನೋಡಬಹುದು.

ಒಟ್ಟಾರೆಯಾಗಿ ಹೇಳುವುದಾದರೆ, ಬೆಂಗಳೂರಿನ ಜನರಿಗೆ ನೀರು ಪೂರೈಸಲು ಕಾವೇರಿ ನದಿ ಪಾತ್ರದಲ್ಲಿ ನೀರು ಹರಿಸಲಾಗಿದೆ. ಇದನ್ನು ನೀರಾವರಿ ಇಲಾಖೆಯು ಸಪಷ್ಟಪಡಿಸಿದೆ.ಆದರೆ ಇದನ್ನು ತಿರುಚಿರುವ ಬಿಜೆಪಿ ಮತ್ತು ಜೆಡಿ(ಎಸ್) ಪಕ್ಷಗಳು, ರಾಜ್ಯ ಸರ್ಕಾರ ಕನ್ನಡಿಗರಿಗೆ ದ್ರೋಹ ಮಾಡಿ ತಮಿಳುನಾಡಿಗೆ ನೀರು ಹರಿಸಲಾಗಿದೆ ಎಂದು ಸುಳ್ಳು ಪ್ರತಿಪಾದನೆಯೊಂದಿಗೆ ಪೋಸ್ಟ್‌ಅನ್ನು ಹಂಚಿಕೊಂಡಿದೆ.

ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ: FACT CHECK | ಮೋದಿ ನಾಯಕತ್ವವನ್ನು ಮೆಚ್ಚಿ ಪಾಕ್ ಆಕ್ರಮಿತ ಕಾಶ್ಮೀರದ ಜನ ಭಾರತಕ್ಕೆ ಸೇರಲು ಬಯಸಿದ್ದಾರೆ ಎಂಬುದು ಸುಳ್ಳು


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights