FACT CHECK | ಮೋದಿ ನಾಯಕತ್ವವನ್ನು ಮೆಚ್ಚಿ ಪಾಕ್ ಆಕ್ರಮಿತ ಕಾಶ್ಮೀರದ ಜನ ಭಾರತಕ್ಕೆ ಸೇರಲು ಬಯಸಿದ್ದಾರೆ ಎಂಬುದು ಸುಳ್ಳು

ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ವಾಸಿಸುವ ಜನರು ಭಾರತವನ್ನು ಸೇರುವ ಇಚ್ಚೆಯನ್ನು ವ್ಯಕ್ತಪಡಿಸಿದ್ದಾರೆ, ಭಾರತದೊಂದಿಗೆ ಒಂದಾಗುವ ಪ್ರತಿಜ್ಞೆ ಮಾಡಿದ್ದಾರೆ ಮತ್ತು ಹಿಂದೂಸ್ತಾನ್ ಜಿಂದಾಬಾದ್ ಎಂದು ಘೋಷಣೆ ಕೂಗುತ್ತಿದ್ದಾರೆ ಎಂದು ಹೇಳುವ 1.39 ನಿಮಿಷಗಳ ವೀಡಿಯೊವನ್ನು ಹಲವು ಬಿಜೆಪಿ ಸದಸ್ಯರು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿದ್ದಾರೆ.

 

ಪಾಕ್ ಆಕ್ರಮಿತ ಪ್ರದೇಶಗಳಲ್ಲಿ ಭಾರತದೊಂದಿಗೆ ಒಂದಾಗಲು ಜನರು ಪ್ರತಿಜ್ಞೆ ಮಾಡುತ್ತಾರೆ. ಹಿಂದೂಸ್ತಾನ್ ಜಿಂದಾಬಾದ್ ಎಂದು ಘೋಷಣೆ ಕೂಗುತ್ತಿರುವ ದೃಶ್ಯವನ್ನು ನೋಡಿ ಎಂಬ ಪ್ರತಿಪಾದನೆಯೊಂದಿಗೆ ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್‌ಅನ್ನು ಹಂಚಿಕೊಳ್ಳಲಾಗಿದೆ. ಹಾಗಿದ್ದರೆ ಈ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಪಿಒಕೆಯ(ಪಾಕ್ ಆಕ್ಯೂಪೈಡ್ ಕಾಶ್ಮೀರ್) ಜನರು ಮೋದಿ ನಾಯಕತ್ವವನ್ನು ಮೆಚ್ಚಿ ಭಾರತಕ್ಕೆ ಸೇರಲು ಬಯಸಿ ಪ್ರತಿಜ್ಞೆ ಮಾಡುತ್ತಿದ್ದಾರೆ ಎಂಬ ಹೇಳಿಕೆಯೊಂದಿಗೆ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ವಿಡಿಯೋವನ್ನು ಪರಿಶೀಲಿಸಿದಾಗ, ಕಾಶ್ಮೀರದ ಗುಜ್ಜರ್ ಭಗರ್ವಾಲ್ ಸಮುದಾಯದ ಜನರು ಆಗಸ್ಟ್ 15 ರಂದು ಹಿಂದೂಸ್ತಾನದ ಕಾನೂನುಗಳು ಮತ್ತು ಸಂವಿಧಾನವನ್ನು ರಕ್ಷಿಸಲು, ನಮ್ಮ ಸರ್ಕಾರಕ್ಕೆ ಅಗತ್ಯ ಬಿದ್ದಾಗ ದೇಶದ ಗಡಿ ರಕ್ಷಣೆಯಲ್ಲಿ ಸೇನೆಗೆ ಬೆಂಬಲ ನೀಡುತ್ತೇವೆ ಎಂಬ ಪ್ರತಿಜ್ಞೆ ಮಾಡಿದರು ಎಂದು jammu_24x7 ಎಂಬ Instagram ಪೇಜ್‌ನಲ್ಲಿ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ.

ಭಾರತದ ಜಮ್ಮು ಮತ್ತು ಕಾಶ್ಮೀರದ ಗುಜ್ಜರ್ ಭಗರ್ವಾಲ್ ಬುಡಕಟ್ಟು ಜನರ ಪುಟ X ನಲ್ಲಿ, ‘ಜಮ್ಮು ಮತ್ತು ಕಾಶ್ಮೀರದ ಗುಜ್ಜರ್ ಭಾಗರ್ವಾಲ್‌ಗಳು ತಮ್ಮ ಬುಡಕಟ್ಟು ಸ್ಥಾನಮಾನದ ರಕ್ಷಣೆಗೆ ಸಂಬಂಧಿಸಿದಂತೆ ತಮ್ಮ ಸಾಂವಿಧಾನಿಕ ಹಕ್ಕುಗಳನ್ನು ರಕ್ಷಿಸುವ ಪ್ರತಿಜ್ಞೆಯನ್ನು ತೆಗೆದುಕೊಳ್ಳುತ್ತಿದ್ದಾರೆ. ಭದ್ರತಾ ಪಡೆಗಳೊಂದಿಗೆ ಶತ್ರುಗಳಿಂದ ದೇಶವನ್ನು ರಕ್ಷಿಸುವ ಪ್ರತಿಜ್ಞೆಯನ್ನು ಅವರು ಆಗಸ್ಟ್ 19 ರಂದು ತೆಗೆದುಕೊಂಡಿದ್ದಾರೆ ಎಂದು ವರದಿಯಾಗಿದೆ.

ಇತ್ತೀಚೆಗೆ, ಜಮ್ಮು ಮತ್ತು ಕಾಶ್ಮೀರದಲ್ಲಿ ಬಹಾರಿಗಳನ್ನು ಪರಿಶಿಷ್ಟ ಪಂಗಡಕ್ಕೆ (ಎಸ್‌ಟಿ)  ಸೇರಿಸುವುದನ್ನು ಗುಜ್ಜರ್ ಭಾಗರ್ವಾಲ್‌ಗಳು ಪ್ರತಿಭಟಿಸುತ್ತಿದ್ದಾರೆ. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಸಂಸತ್ತಿನಲ್ಲಿ ಮಂಡಿಸಿರುವ ಮಸೂದೆಗಳನ್ನು ಹಿಂಪಡೆಯಲು ವಿಫಲವಾದರೆ ರಸ್ತೆಗಿಳಿದು ದನಕರುಗಳೊಂದಿಗೆ ಹೋರಾಟ ನಡೆಸುವುದಾಗಿ ಬೆದರಿಕೆ ಹಾಕಿರುವುದು ಸುದ್ದಿಯಲ್ಲಿದೆ.

ಒಟ್ಟಾರೆಯಾಗಿ ಹೇಳುವುದಾದರೆ, ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ವಾಸಿಸುವ ಜನರು ಪ್ರಧಾನಿ ಮೋದಿ ನಾಯಕತ್ವವನ್ನು ಮೆಚ್ಚಿ ಭಾರತಕ್ಕೆ ಸೇರಲು ಪ್ರತಿಜ್ಞೆ ಮಾಡಿದ್ದಾರೆ ಎಂಬುದು ಸುಳ್ಳು. ವಿಡಿಯೋದಲ್ಲಿರುವವರು ಜಮ್ಮು ಮತ್ತು ಕಾಶ್ಮೀರದ ಬುಡಕಟ್ಟು ಜನಾಂಗದ ಗುಜ್ಜರ್ ಭಗರ್ವಾಲ್‌ಗಳು. ತಮ್ಮ ಬುಡಕಟ್ಟು ಸ್ಥಾನಮಾನಕ್ಕೆ ಸಂಬಂಧಿಸಿದ ಸಾಂವಿಧಾನಿಕ ಹಕ್ಕುಗಳನ್ನು ರಕ್ಷಿಸುವುದಾಗಿ ಅವರು ಪ್ರಮಾಣ ವಚನ ಸ್ವೀಕರಿಸಿದ್ದಾರೆ ಎಂದು ತಿಳಿದುಬಂದಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ಕೃಪೆ : ಯೂಟರ್ನ್

ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ: ಫ್ಯಾಕ್ಟ್‌ಚೆಕ್ : ಪ್ರಧಾನಿ ಮೋದಿಯನ್ನು ಟೀಕಿಸಿ RBI ಮಾಜಿ ಗವರ್ನರ್ ರಘುರಾಮ್ ರಾಜನ್ ಹೇಳಿಕೆ ನೀಡಿದ್ದಾರೆಯೇ?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights