FACT CHECK | ಗ್ಯಾರೆಂಟಿ ಯೋಜನೆಯ ಹಣ ಕೇಳಲು ಬಂದಿದ್ದ ಮಹಿಳೆಯನ್ನುದ್ದೇಶಿಸಿ ‘ಹುಚ್ಚಿಯನ್ನು ಓಡಿಸಿ’ ಎಂದು ಹೇಳಿದ್ರಾ ದಿಗ್ವಿಜಯ ಸಿಂಗ್
ಕಾಂಗ್ರೆಸ್ ಪಕ್ಷದ ನಾಯಕ, ಮಧ್ಯ ಪ್ರದೇಶದ ಮಾಜಿ ಮುಖ್ಯಮಂತ್ರಿ ದಿಗ್ವಿಜಯ ಸಿಂಗ್ ಅವರನ್ನು ಭೇಟಿ ಮಾಡಲು ಬಂದಿದ್ದ ಮಹಿಳೆಯನ್ನು ತಡೆಯುವ ಸಣ್ಣ ವಿಡಿಯೋ ಕ್ಲಿಪ್ ಒಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಮಹಿಳೆಯೊಬ್ಬರು ಕಾಂಗ್ರೆಸ್ ‘ಗ್ಯಾರೆಂಟಿ ಕಾರ್ಡ್ಸ್‘ ಯೋಜನೆಯಡಿ ಹಣವನ್ನು ಕೇಳಲು ಬಂದಾಗ, ಮಹಿಳೆಯನ್ನು ತಡೆದು ‘ಹುಚ್ಚಿ’ ಎಂದು ಲೇವಡಿ ಮಾಡಿದ ಸಿಂಗ್, ಆಕೆಯನ್ನು ಓಡಿಸಿದ್ದಾರೆ ಎಂದು ಪ್ರತಿಪಾದಿಸಿ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ.
ಎಕ್ಸ್ನಲ್ಲಿ (ಟ್ವಿಟ್ಟರ್) ಬಳಕೆದಾರರೊಬ್ಬರು ಇದೀಗ ವೈರಲ್ ಆಗಿರುವ ಕ್ಲಿಪ್ ಪ್ರಕಟಿಸುವ ಜೊತೆ ಹಿಂದಿಯಲ್ಲಿ ವಿವರಣೆಯನ್ನೂ ಬರೆದಿದ್ದಾರೆ. ‘ಮಹಿಳೆಯೊಬ್ಬರು ದಿಗ್ವಿಜಯ್ ಸಿಂಗ್ ಅವರ ಬಳಿ 8,500 ರೂ. ತೆಗೆದುಕೊಳ್ಳಲು ಹೋದಾಗ ಅವರು ಏನು ಮಾಡಿದರೆಂದು ನೋಡಿ’ ಎಂದು ಬರೆದುಕೊಂಡಿದ್ದಾರೆ.
‘ಕಾಂಗ್ರೆಸ್ನವರು ಈಗ ಮಹಿಳೆಯರನ್ನು ‘ಹುಚ್ಚಿ’ ಎಂದು ಕರೆದು ಓಡಿಸುತ್ತಿದ್ದಾರಾ? ಹಾಗಾದ್ರೆ 1 ಲಕ್ಷದ ‘ಗ್ಯಾರೆಂಟಿ ಕಾರ್ಡ್’ ಏಕೆ ನೀಡಲಾಯಿತು? ಕೂಡಲೇ ಹಣ ಕೊಡಿ. ಮಹಿಳೆಯರಿಗೆ ಅವಮಾನ ಮಾಡಿದರೆ ದೇಶ ಸಹಿಸುವುದಿಲ್ಲ ಎಂದು X ಬಳಕೆದಾರರು ದಿಗ್ವಿಜಯ್ ಸಿಂಗ್ ವಿರುದ್ಧ ಆರೋಪಿಸಿ ಮಾಡಿದ್ದಾರೆ ವಿಡಿಯೋವನ್ನು ಹಂಚಿಕೊಂಡಿದ್ದಾರೆ. (ಈ ಪೋಸ್ಟ್ಗಳ ಸಂಗ್ರಹ ಮಾಡಿದ ಆವೃತ್ತಿಗಳನ್ನು ಇಲ್ಲಿ ಮತ್ತು ಇಲ್ಲಿ ನೋಡಬಹುದು) ಹಾಗಿದ್ದರೆ ಪೋಸ್ಟ್ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.
ಫ್ಯಾಕ್ಟ್ಚೆಕ್ :
ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ಪೋಸ್ಟ್ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸಲು ಗೂಗಲ್ ರಿವರ್ಸ್ ಇಮೇಜಸ್ನಲ್ಲಿ ಸರ್ಚ್ ಮಾಡಿದಾಗ, ಮುಖ್ಯವಾಹಿನಿ ಮಾಧ್ಯಮಗಳಲ್ಲಿ ಪ್ರಕಟವಾದ ಹಲವು ವರದಿಗಳು ಲಭ್ಯವಾಗಿವೆ. 21 ಫೆಬ್ರವರಿ, 2024 ರಂದು ಮಧ್ಯ ಪ್ರದೇಶ ರಾಜ್ಯದ ಗ್ವಾಲಿಯರ್ನಲ್ಲಿ ವರದಿಯಾದ ಘಟನೆ ಇದು ಎಂದು ಎನ್ಡಿ ಟಿವಿ ವರದಿ ಮಾಡಿದೆ.
NDTV MPCG ವರದಿಯ ಪ್ರಕಾರ, ಗ್ವಾಲಿಯರ್ನಲ್ಲಿ ಸಿಂಗ್ ಅವರ ರಾಜಕೀಯ ಪ್ರವಾಸದ ಸಮಯದಲ್ಲಿ ಅವರು ಪಕ್ಷದ ಸ್ಥಳೀಯ ಕಾರ್ಯಕರ್ತರನ್ನು ಭೇಟಿಯಾಗುತ್ತಿದ್ದಾಗ ಈ ಘಟನೆ ಸಂಭವಿಸಿದೆ. ಭದ್ರತಾ ಸಿಬ್ಬಂದಿ ಮಹಿಳೆಯನ್ನು ತಡೆಯಲು ಪ್ರಯತ್ನಿಸಿದರೂ, ಮಹಿಳೆಯೊಬ್ಬರು ಸಿಂಗ್ ಅವರನ್ನು ಭೇಟಿಯಾಗಲು ಪದೇ ಪದೇ ಪ್ರಯತ್ನಿಸಿದರು, ಇದು ಅವರ ಕೋಪಕ್ಕೆ ಕಾರಣವಾಯಿತು ಎಂದು ವರದಿ ಹೇಳಿದೆ. ‘ಅವಳು ಹುಚ್ಚಿ. ಅವಳನ್ನು ಹೊರ ಹಾಕಿ (ಹಿಂದಿಯಿಂದ ಅನುವಾದಿಸಲಾಗಿದೆ)’ ಎಂದು ಸಿಂಗ್ ಕೂಗಿದ್ದು, ಆಕೆಗೆ ಪ್ರವೇಶಾವಕಾಶ ನೀಡದಂತೆ ಭದ್ರತಾ ಸಿಬ್ಬಂದಿಗೆ ಹೇಳಿದರು ಎಂದು ವರದಿಯಾಗಿದೆ.
ವೈರಲ್ ವಿಡಿಯೋದಲ್ಲಿ ಕಂಡು ಬರುವ ಮಹಿಳೆ ತಮ್ಮನ್ನು ತಾವು ಕಾಂಗ್ರೆಸ್ ನಾಯಕಿ ಎಂದು ಹೇಳಿಕೊಂಡಿದ್ದಾರೆ. ಅವರ ಹೆಸರು, ಡಾ. ಲೀನಾ ಶರ್ಮಾ. ವಾರಣಾಸಿಯಿಂದ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಸ್ಪರ್ಧಿಸಲು ಪಕ್ಷದ ಟಿಕೆಟ್ ಕೇಳಲು ಬಂದಿದ್ದೇನೆ ಎಂದು ಅವರು ಹೇಳುತ್ತಾರೆ. ಸಿಂಗ್ ಅವರೊಂದಿಗಿನ ಈ ಅಹಿತಕರ ಘಟನೆಯ ಬಳಿಕವೂ ಆಕೆ ಸಿಂಗ್ ಅವರನ್ನು ಟೀಕಿಸಲಿಲ್ಲ. ಜೊತೆಗೆ ಅವರ ಪರವಾಗಿಯೇ ಮಾತನಾಡುತ್ತಾರೆ. ಮಾಧ್ಯಮಗಳ ಜೊತೆ ಮಾತನಾಡುವ ವೇಳೆ ಸಿಂಗ್ ಅವರನ್ನು ತಮ್ಮ ಕುಟುಂಬಸ್ಥರು ಎಂದು ಉಲ್ಲೇಖಿಸಿದ್ದಾರೆ.
ಒಟ್ಟಾರೆಯಾಗಿ ಹೇಳುವುದಾದರೆ, 2024ರ ಲೋಕಸಭಾ ಚುನಾವಣೆಯಲ್ಲಿ ನರೇಂದ್ರ ಮೋದಿ ವಿರುದ್ಧ ಸ್ಪರ್ಧಿಸಲು ಟಿಕೆಟ್ ಬಯಸಿ ಮಹಿಳೆಯೊಬ್ಬರು ಕಾಂಗ್ರೆಸ್ ನಾಯಕ ದಿಗ್ವಿಜಯ ಸಿಂಗ್ ಅವರನ್ನು ಭೇಟಿ ಮಾಡಲು ಪ್ರಯತ್ನಿಸಿದ್ದರು. ಈ ವಿಡಿಯೋವನ್ನು ಕಾಂಗ್ರೆಸ್ನ ‘ಗ್ಯಾರಂಟಿ ಕಾರ್ಡ್’ ಯೋಜನೆಯಡಿ ಹಣಕ್ಕಾಗಿ ವಿನಂತಿಸಿದರು ಎಂದು ಬಿಂಬಿಸಲಾಗಿತ್ತು. ಜೊತೆಗೆ ಅವರನ್ನು ಓಡಿಸಲಾಯಿತು ಎಂದು ತಪ್ಪಾಗಿ ಹಂಚಿಕೊಳ್ಳಲಾಗಿದೆ.
ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್ ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ
ಇದನ್ನು ಓದಿರಿ : FACT CHECK | ಮುಸ್ಲಿಮರಿಗೆ ಈ ದೇಶದ ಸಂಪತ್ತಿನ ಮೇಲೆ ಅಧಿಕಾರವಿದೆ ಎಂದು ಹೇಳಿದರೆ ಯೋಗಿ ಆದಿತ್ಯನಾಥ್