ನೆರೆ ಸಂತ್ರಸ್ತರಿಗೆ ಸ್ಪಂದಿಸದ ಸಿಎಂ ದೆಹಲಿ ಟು ಬೆಂಗಳೂರು ಅಲೆದಾಟ – ಸಿದ್ದರಾಮಯ್ಯ ಕಿಡಿ
ನೆರೆ ಸಂತ್ರಸ್ತರಿಗೆ ಸ್ಪಂದಿಸದ ಸಿಎಂ ದೆಹಲಿ ಟು ಬೆಂಗಳೂರು ಅಲೆದಾಡುತ್ತಿದ್ದಾರೆಂದು ಮಾಜಿ ಸಿಎಂ ಸಿದ್ದರಾಮಯ್ಯ ಕಿಡಿ ಕಾರಿದ್ದಾರೆ. ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ, ಆದರೆ ರಾಜ್ಯ ಸರ್ಕಾರ ಜನರಿಗೆ ಸ್ಪಂದಿಸುತ್ತಿಲ್ಲ.
ಬೆಳಗಾವಿಯ ಸರ್ಕ್ಯೂಟ್ ಹೌಸಿನಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಕೇಂದ್ರ ಗೃಹ ಸಚಿವರ ಕೈಯಲ್ಲಿ ರಾಜ್ಯ ಸರ್ಕಾರದ ಆಡಳಿತವಿದೆ. ಜನರ ನಿಜವಾದ ಸಮಸ್ಯೆಗಳ ಬಗ್ಗೆ ಈ ರಾಜ್ಯ ಸರ್ಕಾರ ಸ್ಪಂದಿಸುತ್ತಿಲ್ಲ.
ಪ್ರವಾಹಕ್ಕೋಸ್ಕರ ಕೇಂದ್ರ ಎಷ್ಟು ಹಣ ಬಿಡುಗಡೆ ಮಾಡಿದೆ ಎನ್ನುವುದನ್ನ ಹೇಳಲಿ. 25 ಮಂದಿ ಸಂಸದರು ಏನು ಮಾಡುತ್ತಿದ್ದಾರೆ? ಸಂಸದರು ಪ್ರವಾಹ ಪೀಡಿತ ಪ್ರದೇಶಕ್ಕೆ ಕಾಟಾಚಾರದ ಭೇಟಿ ನಿಡುತ್ತಿದ್ದಾರೆ. ರಾಜ್ಯಕ್ಕೆ ಎಕ್ಸಪರ್ಟ್ ಟೀಮ್ ಬರಬೇಕು ಅಂತ ಏನಿಲ್ಲ. ಈಗ ಮಾಡಿರುವ ಟೀಮ್ಗಳ ವರದಿಯನ್ನ ಇಟ್ಟುಕ್ಕೊಂಡು ಕೇಂದ್ರ ಪರಿಹಾರ ಕೊಡಬೇಕು.
ಪ್ರವಾಹ ಬಂದು 20 ದಿನ ಕಳೆದಿದೆ ಒಂದೇ ಒಂದು ಪೈಸೆ ಪರಿಹಾರ ಹಣವನ್ನು ಕೇಂದ್ರ ಬಿಡುಗಡೆ ಮಾಡಿಲ್ಲ. ಮಲತಾಯಿ ಧೋರಣೆ ತೋರುತ್ತಿದೆ. ಆದಷ್ಟು ಬೇಗ ಕೇಂದ್ರ ಸರ್ಕಾರ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು. ಈ ಸರ್ಕಾರಕ್ಕೆ ಬಡವರು, ಪ್ರವಾಹ ಪೀಡಿತರು ಹಾಗೂ ರೈತರನ್ನು ಕಂಡರೆ ಗೌರವವಿಲ್ಲ. ಪ್ರಧಾನಿ ಅವರು ಸಬ್ ಕಾ ಸಾಥ್, ಸಬ್ ಕಾ ವಿಕಾಸ್ ಎಂದು ಬಾಯಿಮಾತಿಗೆ ಹೇಳುತ್ತಾರೆ ಎಂದು ಟಾಂಗ್ ಕೊಟ್ಟರು.