ಬಂಗಾಳ: ಟಿಎಂಸಿ ಕಾರ್ಯಕರ್ತರ ಮೇಲೆ ಬಾಂಬ್ ದಾಳಿ; ಒಬ್ಬ ಸಾವು – ಇಬ್ಬರ ಸ್ಥಿತಿ ಗಂಭೀರ!
ತೃಣಮೂಲ ಕಾಂಗ್ರೆಸ್ ಕಾರ್ಯಕರ್ತರ ಮೇಲೆ ಮಂಗಳವಾರ ರಾತ್ರಿ ಬಾಂಬ್ ಮತ್ತು ಗುಂಡುಗಳ ದಾಳಿ ನಡೆದಿದ್ದು, ಇದರಿಂದಾಗಿ ಟಿಎಂಸಿ ಪಕ್ಷದ ಒಬ್ಬ ಕಾರ್ಯಕರ್ತ ಸಾವನ್ನಪ್ಪಿರುವ ಘಟನೆ ಪಶ್ಚಿಮ ಬಂಗಾಳದ ಪಶ್ಚಿಮ ಮೇದಿನಿಪುರ ಜಿಲ್ಲೆಯಲ್ಲಿ ನಡೆದಿದೆ.
ಮೇದಿನಿಪುರ ಜಿಲ್ಲೆಯ ನಾರಾಯಣಗಡ್ ಪೊಲೀಸ್ ಠಾಣೆ ವ್ಯಾಪ್ತಿಯ ಅಭಿರಾಂಪುರ ಗ್ರಾಮದಲ್ಲಿ ರಾತ್ರಿ 09 ಗಂಟೆಯ ಆಸುಪಾಸಿನ ಸಮಯದಲ್ಲಿ ಬೈಕಿನಲ್ಲಿ ಬಂದ ದುಷ್ಕರ್ಮಿಗಳು ಮೂವರು ಟಿಎಂಸಿ ಕಾರ್ಯಕರ್ತರ ಮೇಲೆ ಬಾಂಬ್ ಮತ್ತು ಗುಂಡಿನ ದಾಳಿ ನಡೆಸಿದ್ದು, ಒಬ್ಬ ಸಾವನ್ನಪ್ಪಿದ್ದಾನೆ. ಇಬ್ಬರು ಗಾಯಗೊಂಡಿದ್ದಾರೆ. ಮೃತ ಪಟ್ಟವರನ್ನು ಶೌಭಿಕ್ ದೋಲುಯಿ ಎಂದು ಗುರುತಿಸಲಾಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಮೂವರನ್ನು ಖರಗ್ಪುರದ ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ, ಶೌಭಿಕ್ ಅದಾಗಲೆ ಮೃತಪಟ್ಟಿದ್ದರೆಂದು ತಿಳಿದು ಬಂದಿದ್ದು, ಇನ್ನಿಬ್ಬರ ಸ್ಥಿತಿಯು ಗಂಭೀರವಾಗಿದೆ. ಅವರನ್ನು ಮೇದಿನಿಪುರ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ ಎಂದು ಅವರು ಹೇಳಿದ್ದಾರೆ.
ಟಿಎಂಸಿ ನಾಯಕರು ಈ ದಾಳಿಯಲ್ಲಿ ಬಿಜೆಪಿಯ ಕೈವಾಡ ಇದೆ ಎಂದು ಆರೋಪಿಸಿದ್ದಾರೆ. ಆದರೆ ಬಿಜೆಪಿ ಇದನ್ನು ತಳ್ಳಿಹಾಕಿದ್ದು, ಘಟನೆಯು ಟಿಎಂಸಿಯ ಒಳಜಗಳದ ಪರಿಣಾಮದಿಂದಾಗಿ ಆಗಿದೆ ಎಂದು ಪ್ರತಿಕ್ರಿಯಿಸಿದ್ದಾರೆ.
ಪಶ್ಚಿಮ ಬಂಗಾಳದಲ್ಲಿ ಎಪ್ರಿಲ್-ಮೆ ತಿಂಗಳಲ್ಲಿ ಚುನಾವಣೆ ನಡೆಯಲಿದೆ.
ಇದನ್ನೂ ಓದಿ: ಮಹಾರಾಷ್ಟ್ರ: BJP ಸದಸ್ಯರ ಅಡ್ಡ ಮತದಾನ; NCP ಪಾಲಿಗೆ ಮೇಯರ್ ಹುದ್ದೆ!