ಕೆಂಪೇಗೌಡ 100 ಅಡಿ, ಬಸವ 325 ಅಡಿ : ಬಜೆಟ್ ನಲ್ಲಿ ಪ್ರತಿಮೆಗಳಿಗೆ ಅನುದಾನ ಘೋಷಣೆ
ಇಂದು ಕರ್ನಾಟಕದ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪನವರು ತಮ್ಮ ಏಳನೇ ಬಜೆಟ್ ಮಂಡಿಸಿದ್ದು, ಪ್ರವಾಸೋದ್ಯಮ ಮತ್ತು ಸಂಸ್ಕೃತಿ ಸಂಬಂಧಿಸಿದಂತೆ ಹಲವು ಯೋಜನೆಗಳನ್ನು ಘೋಷಿಸಿದ್ದಾರೆ.
ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಗರ ನಿರ್ಮಾತೃ ನಾಡಪ್ರಭು ಕೆಂಪೇಗೌಡರ 100 ಅಡಿ ಎತ್ತರದ ಪ್ರತಿಮೆಯನ್ನು ನಿರ್ಮಿಸುವುದಾಗಿ ಘೊಷಣೆ ಮಾಡಿದ್ದಾರೆ. ಇದಕ್ಕೆ 66 ಕೋಟಿಯನ್ನು ಘೋಷಿಸಿದ್ದು, ಚಿತ್ರದುರ್ಗದ ಶ್ರೀ ಮುರುಘಾಮಠದಲ್ಲಿ 325 ಆಡಿಯ ಕಂಚಿನ ಪುತ್ಥಳಿ ನಿರ್ಮಿಸಲಾಗುತ್ತಿದ್ದು ಅದಕ್ಕೆ ಸರ್ಕಾರದ ವತಿಯಿಂದ 20ಕೋಟಿ ನೆರವನ್ನು ಘೋಷಿಸಿದ್ದಾರೆ.
12ನೇ ಶತಮಾನ ಬಸವ ಚಳವಳಿಯ ಮತ್ತು ವಚನಗಳ ಪ್ರಚಾರ ಯೋಜನೆಗಾಗಿ 500 ಕೋಟಿ ವೆಚ್ಚದಲ್ಲಿ ಅನುಭವ ಮಂಟಪ ನಿರ್ಮಿಸುವುದಾಗಿ ಪ್ರಸಕ್ತ ಬಜೆಟ್ ನಲ್ಲಿ ಘೋಷಿಸಲಾಗಿದೆ.
ವಿಶ್ವಕರ್ಮ ಅಮರಶಿಲ್ಪಿ ಜಕಣಾಚಾರಿ ಸಂಸ್ಮರಣಾ ದಿನಾಚರಣೆಯನ್ನು ಪ್ರತಿವರ್ಷ ಜನವರಿ 1ರಂದು ಸರ್ಕಾರಿ ವತಿಯಿಂದ ವಿಜೃಂಭಣೆಯಿಂದ ಆಚಾರಿಸಲಾಗುವುದು. 60 ಕೋಟಿ ರೂ ವೆಚ್ಚದಲ್ಲಿ ಬೆಂಗಳೂರಿನ ನಾಲ್ಕೂ ದಿಕ್ಕಿನಲ್ಲಿ ರವೀಂದ್ರ ಕಲಾಕ್ಷೇತ್ರ ಮಾದರಿಯಲ್ಲಿ ಕಲಾಕ್ಷೇತ್ರಗಳನ್ನು ನಿರ್ಮಾಣ ಮಾಡಲಾಗುವುದು.
ಸಾಹಿತಿ ಎಸ್ ಎಲ್ ಭೈರಪ್ಪನವರ ಹುಟ್ಟೂರಾದ ಹಾಸನ ಜಿಲ್ಲೆಯ ಸಂತೆಶಿವರ ಗ್ರಾಮದ ಅಭಿವೃದ್ಧಿಗಾಗಿ ಐದು ಕೋಟಿ ರೂ ಅನುದಾನವನ್ನು ಘೋಷಿಸಲಾಗಿದೆ. ಐತಿಹಾಸಿಕ ಪ್ರವಾಸಿ ತಾಣವಾದ ಬಾದಾಮಿಯನ್ನು ಅಭಿವೃದ್ಧಿಪಡಿಸಲು 25ಕೋಟಿ ರೂಗಳ ಯೋಜನೆಯನ್ನು ಸಿದ್ಧಪಡಿಸಿ ಅನುಷ್ಠಾನಗೊಳಿಸಲಾಗುವುದು ಎಂದು ತಿಳಿಸಲಾಗಿದೆ.