ಉಳುಮೆ ಮಾಡುತ್ತಿದ್ದ ರೈತನಿಗೆ ಸಿಕ್ಕಿತು ಚಿನ್ನ-ಬೆಳ್ಳಿ ತುಂಬಿದ ಮಡಕೆ!
ಹೊಲದಲ್ಲಿ ಉಳುಮೆ ಮಾಡುತ್ತಿದ್ದ ರೈತನಿಗೆ ಚಿನ್ನ ಹಾಗೂ ಬೆಳ್ಳಿ ಆಭರಣ ತುಂಬಿದ ಎರಡು ಮಡಕೆಗಳು ಸಿಕ್ಕಿದ್ದು, ಅದರಲ್ಲಿ 25ಕ್ಕೂ ಹೆಚ್ಚು ಒಡವೆಗಳು ಪತ್ತೆಯಾಗಿವೆ.
ತೆಲಂಗಾಣದ ವಿಕಾರಬಾದ್ ಜಿಲ್ಲೆಯ ಸುಲ್ತಾನ್ ಪುರ್ ಗ್ರಾಮದ ಮೊಹಮ್ಮದ್ ಸಿದ್ದಿಕ್ ಎಂಬುವವರ ಜಮೀನಿನಲ್ಲಿ ಆಭರಣ ತುಂಬಿದ ಮಡಕೆಗಳು ಸಿಕ್ಕಿವೆ.
ಮೊಹಮ್ಮದ್ ಸಿದ್ಧಿಕಿ ಅವರು ಎರಡು ವರ್ಷಗಳ ಹಿಂದೆ ತುಂಡು ಭೂಮಿಯನ್ನು ಖರೀದಿಸಿದ್ದರು. ಮುಂಗಾರು ಆರಂಭವಾಗಿರುವ ಹಿನ್ನೆಲೆಯಲ್ಲಿ ಬಿತ್ತನೆ ಮಾಡಲು ಹೊಲಗಳನ್ನು ಸಿದ್ಧಗೊಳಿಸುತ್ತಿದ್ದರು. ಈ ವೇಳೆ ಚಿನ್ನ ಹಾಗೂ ಬೆಳ್ಳಿ ಆಭರಣ ತುಂಬಿದ ಎರಡು ಮಡಕೆಗಳು ಸಿಕ್ಕಿದ್ದು, ರೈತ ಕೂಡಲೇ ಸರ್ಕಾರಿ ಅಧಿಕಾರಿಗಳಿಗೆ ತಿಳಿಸಿದ್ದಾರೆ.
ಕಂದಾಯ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದು, ಆಭರಣಗಳು ಚಿನ್ನ ಮತ್ತು ಬೆಳ್ಳಿಯ ವಸ್ತುಗಳೇ ಎಂಬುದನ್ನು ಅಕ್ಕಸಾಲಿಗನಿಂದ ಪರೀಕ್ಷಿಸಿ ಖಾತರಿ ಪಡಿಸಿಕೊಂಡಿದ್ದಾರೆ.
“ಈ ಸ್ಥಳವು ಯಾವುದೇ ನಿಧಿ ಪತ್ತೆಯಾಗುವ ಇತಿಹಾಸವನ್ನು ಹೊಂದಿಲ್ಲ. ಈ ಬಗ್ಗೆ ನಾವು ಪುರಾತತ್ವ ಇಲಾಖೆಗೆ ತಿಳಿಸುತ್ತೇವೆ” ಎಂದು ಕಂದಾಯ ಅಧಿಕಾರಿ ವಿದ್ಯಾಸಾಗರ್ ರೆಡ್ಡಿ ಹೇಳಿದ್ದಾರೆ.