ಡಿಜೆ ಹಳ್ಳಿ ಗಲಬೆ ಪೂರ್ವ ನಿಯೋಜಿತ; ಎಸ್ಡಿಪಿಐ ಹಾಗೂ ಪಿಎಫ್ಐ ಬ್ಯಾನ್ಗೆ ಶಿಫಾರಸ್ಸು!
ರಾಜಧಾನಿ ಬೆಂಗಳೂರಿನ ಡಿಜೆ ಹಳ್ಳಿ, ಕೆ.ಜಿ.ಹಳ್ಳಿಗಳಲ್ಲಿ ನಡೆದ ಗಲಭೆ ರಾಜಕೀಯ ಪ್ರೇರಿತವಲ್ಲ. ಅದು ಪೂರ್ವ ನಿಯೋಜಿತವಾಗಿ ನಡೆದ ಘಟನೆಯಾಗಿದೆ. ಈ ಗಲಬೆಗೆ ಎಸ್ಡಿಪಿಐ ಹಾಗೂ ಪಿಎಫ್ಐ ಸಂಘಟನೆಗಳೇ ಕಾರಣ. ಹಾಗಾಗಿ ಈ ಎರಡು ಸಂಘಟನೆಗಳನ್ನು ನಿಷೇಧಿಸಬೇಕು ಎಂದು ಸರ್ಕಾರಕ್ಕೆ ಶಿಫಾರಸ್ಸು ಮಾಡಿರುವುದಾಗಿ ಸಿಟಿಜನ್ ಫಾರ್ ಡೆಮಾಕ್ರಸಿ ಸದಸ್ಯ, ನಿವೃತ್ತ ಅಪರ ಮುಖ್ಯಕಾರ್ಯದರ್ಶಿ ಮದನ್ ಗೋಪಾಲ್ ಹೇಳಿದ್ದಾರೆ.
ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ವರದಿ ಸಲ್ಲಿಸಿರುವ ಮದನ್ ಗೋಪಾಲ್ ಅವರ ನೇತೃತ್ವದ ಸತ್ಯ ಶೋಧನಾ ಸಮಿತಿಯು, “ಡಿ.ಜೆ. ಹಳ್ಳಿ, ಕೆ.ಜಿ.ಹಳ್ಳಿ ಘಟನೆ ತಕ್ಷಣಕ್ಕೆ ನಡೆದ ಸಹಜ ಘಟನೆ ಅಲ್ಲ. ಪೂರ್ವಭಾವಿ ಸಿದ್ಧತೆ ಮಾಡಿಕೊಂಡಿರುವ ಘಟನೆಯಾಗಿದ್ದು, ಇದು ಕೇವಲ ಕೋಮುಗಲಭೆ ಮಾತ್ರವಲ್ಲ ವ್ಯವಸ್ಥೆಯ ವಿರುದ್ಧ ಆಕ್ರೋಶ ಹೊರಹಾಕುವ ಪ್ರಯತ್ನ ಮಾಡಿರುವುದು ಸ್ಪಷ್ಟವಾಗಿದೆ. ಸ್ಥಳೀಯ ಜನರಿಂದಲೇ ಈ ಘಟನೆ ನಡೆದಿದೆ” ಎಂದು ವರದಿಯಲ್ಲಿ ಹೇಳಲಾಗಿದೆ.
“ರಾಜ್ಯ ಸರ್ಕಾರದ ವಿರುದ್ಧದ ಸಾಮಾನ್ಯ ಜನರ ನಂಬಿಕೆಯನ್ನು ಕಡಿಮೆ ಮಾಡುವ” ಉದ್ದೇಶದಿಂದ ಈ ಗಲಬೆ ನಡೆಸಲಾಗಿದೆ ಎಂದು ವರದಿಯಲ್ಲಿ ಹೇಳಲಾಗಿದೆ.
ಹಿಂಸಾಚಾರದಲ್ಲಿ ಸುಮಾರು 36 ಸರ್ಕಾರಿ ವಾಹನಗಳು, ಸುಮಾರು 300 ಖಾಸಗಿ ವಾಹನಗಳು ಮತ್ತು ಅನೇಕ ಮನೆಗಳು ನಾಶವಾಗಿವೆ ಎಂದು ಅಂದಾಜಿಸಲಾಗಿದೆ ಒಟ್ಟಾರೆ ಹಾನಿಯು ಸುಮಾರು 10 ರಿಂದ 15 ಕೋಟಿ ರೂ ಎಂದು ಹೇಳಲಾಗಿದೆ.
ಇದನ್ನೂ ಓದಿ: ಡಿಜಿ ಹಳ್ಳಿ ದೇವಾಲಯ ರಕ್ಷಸಿದ ಮುಸ್ಲೀಂ ಯುವಕರು: ಯಾರು ಅವರು? ಅವರು ಹೇಳಿದ್ದೇನು?