ಮಾನವನ್ನೂ ಲೆಕ್ಕಿಸದೆ, ನೀರಿಗೆ ಬಿದ್ದಿದ್ದ ಬಾಲಕನ ಜೀವ ಉಳಿಸಿದ ಮಹಿಳೆ!
ಆಟವಾಡುವ ಸಮಯದಲ್ಲಿ ಕಾಲುಜಾರಿ ಕಾಲುವೆಗೆ ಬಿದ್ದ ಬಾಲಕನನ್ನು ಮಹಿಳೆಯೊಬ್ಬರು ತನ್ನ ಸೀರೆಯ ಸಹಾಯದಿಂದ ಬದುಕಿಸಿರುವ ಘಟನೆ ವಿಜಯಪುರ ಜಿಲ್ಲೆ ನಿಡಗುಂದಿ ತಾಲೂಕಿನ ಆಲಮಟ್ಟಿ ಬಳಿಯ ಎಡದಂಡೆ ಕಾಲುವೆಯಲ್ಲಿ ನಡೆದಿದೆ.
ಸಹೋದರನೊಂದಿಗೆ ಆಡಲು ಹೋಗಿದ್ದ ವೇಳೆ ಕಾಲುಜಾರಿ ಕಾಲುವೆಗೆ ಬಿದ್ದಿದ್ದ ಬಾಲಕ ಅರುಣ ದೊಡ್ಡಮನಿ ಎಂಬ ಬಾಲಕನನ್ನ ಸಕೀನಾ ಬೇಗಂ ಕೊಡೆಕಲ್ಲ ಎಂಬ ಮಹಿಳೆ ಬದುಕಿಸಿದ್ದಾರೆ.
ಕಾಲುವೆ ಬಳಿ ಹೋಗಬೇಡಿ ಏನಾದರೂ ಅಪಾಯವಾದೀತು ಎಂದು ಆಕೆ ಆ ಬಾಲಕರಿಗೆ ಹೇಳಿದರೂ ಅಲ್ಲಿಯೇ ಆಟವಾಡುತ್ತಿದ್ದ ಬಾಲಕ ಕಾಲುವೆ ನೀರಿಗೆ ಬಿದ್ದಿದ್ದಾನೆ. ಆ ಸಮಯದಲ್ಲಿ ಬಾಲಕನನ್ನು ಮೇಲೆತ್ತಲೂ ಮಹಿಳೆ ಸಕೀನಾ ಬೇಗಂ ರಸ್ತೆ ಬದಿ ಕೂಗಿದ್ದಾರೆ. ಈ ವೇಳೆ ಬೈಕ್ ಮೇಲೆ ಹೊರಟಿದ್ದ ಖಾಸಗಿ ಶಾಲಾ ಶಿಕ್ಷಕ ಮಹೇಶ ಗಾಳಪ್ಪಗೋಳ ತಮಗೆ ಈಜು ಬರದ ಕಾರಣ ಕಾಲುವೆಗೆ ಹಾರಲು ಹಿಂದೇಟು ಹಾಕಿದ್ದಾರೆ.
ಈ ವೇಳೆ ಆತನನ್ನು ಮೇಲೆತ್ತಲು ಹಗ್ಗದಂತಹ ಯಾವುದೇ ವಸ್ತುಗಳು ಸಿಗದಿದ್ದಾಗ, ಆಕೆ ತಾನು ಧರಿಸಿದ್ದ ಸೀರೆಯನ್ನೇ ತೆಗೆದು ಸೀರೆಯ ಒಂದು ತುದಿಯನ್ನು ನೀರಿಗೆ ಎಸೆದು ಬಾಲಕನನ್ನು ಮೇಲೆತ್ತಿದ್ದಾರೆ.
ತನ್ನ ಮಾನವನ್ನು ಲೆಕ್ಕಿಸದೇ ಬಾಲಕನನ್ನು ರಕ್ಷಿಸಿದ ಮಹಿಳೆಯ ಬಗ್ಗೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.
Read Also: ವಿಡಿಯೋ: ಆಸ್ಪತ್ರೆಯಲ್ಲಿ ಹಾಸಿಗೆಗಳ ಕೊರತೆಯ ಬಗ್ಗೆ ಪ್ರಶ್ನಿಸಿದ ವೈದ್ಯರನ್ನೇ ಬಂಧಿಸಿದ ಜಿಲ್ಲಾಧಿಕಾರಿ