ನೆರೆ ಸಂತ್ರಸ್ಥರ ಸಂಕಷ್ಟ ನೀಗಿಸಲು ಸರ್ಕಾರ ವಿಫಲ: ಚುನಾವಣೆ ಬಹಿಷ್ಕರಿಸುವುದಾಗಿ ಎಚ್ಚರಿಕೆ!
ಉತ್ತರ ಕರ್ನಾಟಕ ಮತ್ತು ಮಲೆನಾಡು ಭಾಗಗಳಲ್ಲಿ ಭಾರೀ ಮಳೆಯಾದ್ದರಿಂದ ಪ್ರವಾಹ ಉಂಟಾಗಿದ್ದು, ಸಾಕಷ್ಟು ಆಸ್ತಿ-ಪಾಸ್ತಿ ನಷ್ಟವಾಗಿದೆ. ಆದರೆ, ಕಳೆದ ವರ್ಷ(2019)ರಲ್ಲಿ ಎದುರಾದ ಪ್ರವಾಹದಿಂದ ಬೀದಿ ಪಾಲಾದ ಜನರಿಗೆ ಇನ್ನೂ ಪರಿಹಾರ ದೊರಕಿಲ್ಲ. ಇಂತಹ ಸಂದರ್ಭದಲ್ಲಿ ಮತ್ತೆ ಈ ವರ್ಷವೂ ಪ್ರವಾಹ ಎದುರಾಗಿದ್ದರಿಂದಾಗಿ ಅಕ್ಷರಸಃ ಜನರ ಬದುಕು ಬೀದಿಗೆ ಬಿದ್ದಿದೆ. ಆದರೆ, ಸರ್ಕಾರ ಆಶ್ವಾಸನೆಗಳನ್ನಷ್ಟೇ ನೀಡತ್ತಿದ್ದು, ಬೇಜವಾಬ್ದಾರಿತನದಿಂದ ವರ್ತಿಸುತ್ತಿದೆ.
ಪ್ರವಾಹದಿಂದಾಗಿ ಬೆಳಗಾವಿ ಜಿಲ್ಲೆಯ 4 ಸಾವಿರಕ್ಕೂ ಹೆಚ್ಚು ಮನೆಗಳಿಗೆ ಇನ್ನೂ ಪರಿಹಾರ ಸಿಕ್ಕಿಲ್ಲ. ಹೀಗಾಗಿ ಸಂತ್ರಸ್ತರು ಮುಂಬರುವ ಜಿಲ್ಲಾ ಪಂಚಾಯತ್ ಚುನಾವಣೆ, ತಾಲೂಕು ಪಂಚಾಯತ್ ಚುನಾವಣೆ ಹಾಗೂ ಗ್ರಾಮ ಪಂಚಾಯತ್ ಚುನಾವಣೆಗಳನ್ನು ಬಹಿಷ್ಕಾರಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ.
2019ರಲ್ಲಿ ಘಟಪ್ರಭಾ, ಮಲಪ್ರಭಾ, ಕೃಷ್ಣ, ದೂಧಗಂಗಾ, ವೇದಗಂಗಾ, ಹಿರಣ್ಯಕೇಶಿ ಹಾಯ ಮಾರ್ಕಂಡೇಯ ನದಿಗಳಲ್ಲಿ ಭೀಕರ ಪ್ರವಾಹ ಉಂಟಾಗಿತ್ತು. ಹೀಗಾಗಿ ಬೆಳಗಾವಿ ಜಿಲ್ಲೆಯ ಸಾವಿರಾರು ಮನೆಗಳು ಹಾನಿಯಾಗಿದ್ದು, ಲಕ್ಷಾಂತರ ಹೆಕ್ಟೇರ್ ಪ್ರದೇಶದಲ್ಲಿ ಬೆಳೆದ ಬೆಳೆ ಹಾನಿಯಾಗಿದೆ. ಆದರೆ ಇನ್ನೂ ಸರ್ಕಾರ ಸಂತ್ರಸ್ತರಿಗೆ ಮನೆ ನಿರ್ಮಾಣ ಮಾಡುವಲ್ಲಿ ವಿಫಲವಾಗಿದೆ.
ಅನೇಕರು ದೇವಸ್ಥಾನ, ಸಮುದಾಯ ಭವನದಲ್ಲಿ ಜೀವನ ನಡೆಸುತ್ತಿದ್ದಾರೆ. ರಾಮದುರ್ಗ ತಾಲೂಕಿನ ಪ್ರವಾಹ ಸಂತ್ರಸ್ತರು ಎರಡು ತಿಂಗಳ ಹಿಂದೆ ತಹಸೀಲ್ದಾರ್ ಕಚೇರಿ ಮುಂಭಾಗದಲ್ಲಿ ಅಹೋರಾತ್ರಿ ಧರಣಿ ನಡೆಸಿದ್ದರು.
ಮನೆ ಕಳೆದುಕೊಂಡವರಿಗೆ ಕಳೆದ ಮೈತ್ರಿ ಸರ್ಕಾರ, ರಾಜೀವ ಗಾಂಧಿ ವಸತಿ ಯೋಜನೆ ಅಡಿಯಲ್ಲಿ ಮನೆ ನಿರ್ಮಾಣ ಮತ್ತು ಪರಿಹಾರದ ಭರವಸೆ ನೀಡಿತ್ತು. ಆದರೆ ಇನ್ನೂ ಬೇಡಿಕೆ ಈಡೇರಿಲ್ಲ, ಸದ್ಯ ಸೈಟ್ ಓಪನ್ ಆಗಿದ್ದು, ಕೇವಲ 2020ರಲ್ಲಿ ಆಗಿರೋ ಮನೆ ಹಾನಿಯ ದಾಖಲೆಗಳನ್ನು ಸಂಗ್ರಹಿಸುತ್ತಿದ್ದಾರೆ. ಇದರಿಂದ 2019ರ ಸಂತ್ರಸ್ತರಿಗೆ ಅನ್ಯಾಯವಾಗಿದೆ ಎಂದು ಅಲ್ಲಿಯ ಜನರು ಅಳಲು ತೋಡಿಕೊಂಡಿದ್ದಾರೆ.
ಇದನ್ನೂ ಓದಿ: ಮಳೆಯಿಂದ ಹಾನಿಗೊಳಗಾದ ಕುಟುಂಬಗಳಿಗೆ 25,000 ಪರಿಹಾರ: ಸಿಎಂ ಯಡಿಯೂರಪ್ಪ