ಸಿಡಿ 100% ನಕಲಿ; ಇದಕ್ಕಾಗಿ ಯುವತಿಗೆ 05 ಕೋಟಿ ನೀಡಿದ್ದಾರೆ: ರಮೇಶ್ ಜಾರಕಿಹೊಳಿ
ನಾನು ಯಾವುದೇ ತಪ್ಪು ಮಾಡಿಲ್ಲ. ಈ ಸಿಡಿ 100% ನಕಲಿ. ಇದಕ್ಕಾಗಿ ಆ ಹುಡುಗಿಗೆ 5 ಕೋಟಿ ಹಣ ನೀಡಲಾಗಿದೆ. ನನ್ನ ರಾಜಕೀಯ ಬೆಳವಣಿಗೆಯನ್ನು ಸಹಿಸಲಾಗದ ವಿರೋಧಿಗಳು ಈ ಸಿಡಿ ಬಿಡುಗಡೆ ಮಾಡಿದ್ದಾರೆ ಎಂದು ಮಾಜಿ ಸಚಿವ ರಮೇಶ್ ಜಾರಕಿಹೊಳಿ ಹೇಳಿದ್ದಾರೆ.
ಯುವತಿಯೊಬ್ಬಳನ್ನು ಲೈಂಗಿಕವಾಗಿ ದುರ್ಬಳಕೆ ಮಾಡಿಕೊಂಡಿದ್ದಾರೆ ಎಂಬ ತಮ್ಮ ಮೇಲಿನ ಆರೋಪದ ಬಗ್ಗೆ ತುರ್ತು ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ಸಿಡಿ ವಿಚಾರ ನನಗೆ ನಾಲ್ಕು ತಿಂಗಳ ಮೊದಲೇ ಗೊತ್ತಿತ್ತು. ಆದರೆ, ನಾನು ಯಾವ ತಪ್ಪು ಮಾಡಿರದ ಕಾರಣ ತಲೆ ಕೆಡಿಸಿಕೊಂಡಿರಲಿಲ್ಲ. ಅಲ್ಲದೆ, ಸಿಡಿ ಬಿಡುಗಡೆಯಾಗುವ 26 ಗಂಟೆಗಳ ಮೊದಲೇ ಬಿಜೆಪಿ ಹೈಕಮಾಂಡ್ ಈ ಬಗ್ಗೆ ನನಗೆ ಕರೆ ಮಾಡಿ ತಿಳಿಸಿತ್ತು. ಈ ವಿಚಾರವಾಗಿ ಭಯಪಡಬೇಡ, ಕಾನೂನು ಹೋರಾಟ ಮಾಡೋಣ ಎಂದು ಹೈಕಮಾಂಡ್ ಹೇಳಿತ್ತು. ಈ ಸಿಡಿ 100% ನಕಲಿ ಮತ್ತು ಷಡ್ಯಂತ್ರ ಎಂದು ಹೇಳಿದ್ದಾರೆ.
ನನ್ನನ್ನು ರಾಜಕೀಯವಾಗಿ ಮುಗಿಸಲು ಈ ಷಡ್ಯಂತ್ರ ನಡೆದಿದೆ. ಕೆಲವು ರಾಜಕೀಯ ನಾಯಕರು ನನ್ನ ವಿರುದ್ದ ಷಡ್ಯಂತ್ರ ರೂಪಿಸಿದ್ದಾರೆ. ಅವರನ್ನು ನಾನು ಸುಮ್ಮನೆ ಬಿಡುವುದಿಲ್ಲ. ಅವರಿಗೆ ಶಿಕ್ಷೆ ಕುಡಿಸಿಯೇ ತೀರುತ್ತೇನೆ. ಈ ವಿಚಾರದಲ್ಲಿ ನನ್ನ ಬೆನ್ನಿಗೆ ನಿಂತ ನಾಯಕರಿಗೆ, ಅದರಲ್ಲೂ ಕುಮಾರಸ್ವಾಮಿ ಅವರಿಗೆ ಧನ್ಯವಾದ ಹೇಳುತ್ತೇನೆ ಎಂದು ಅವರು ಹೇಳಿದ್ದಾರೆ.
ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಯುವತಿಗೆ 5 ಕೋಟಿ ಮತ್ತು ಅಪಾರ್ಟ್ಮೆಂಟ್ ವೊಂದರಲ್ಲಿ 2 ಫ್ಲಾಟ್ ನೀಡಲಾಗಿದೆ. ಇದಕ್ಕಾಗಿ ನೂರಾರು ಕೋಟಿ ಖರ್ಚು ಮಾಡಿದ್ದಾರೆ. ಒಬ್ಬ ಮಹಾನ್ ವ್ಯಕ್ತಿಗಳ ಕುರಿತಂತೆ ಹೀಗೆಲ್ಲಾ ನಡೆಯೋದು ಸಹಜವಾಗಿದೆ. ನನ್ನ ವಿರುದ್ಧದ ನಕಲಿ ಸಿಡಿ ಬಿಡುಗಡೆಯ ಬಗ್ಗೆ ನಾನು ಯಾವುದೇ ತನಿಖೆಗೂ ಸಿದ್ಧನಿದ್ದೇನೆ ಎಂದು ಜಾರಕಿಹೊಳಿ ಹೇಳಿದ್ದಾರೆ.
Read Also: Karnataka Budget: ಬಜೆಟ್ ಮೊತ್ತ 2.5 ಲಕ್ಷ ಕೋಟಿ; ರಾಜ್ಯದ ಸಾಲ 03 ಲಕ್ಷ ಕೋಟಿ!