ಮಂಗಳೂರು: ಚರಂಡಿಯಲ್ಲಿ ಬಾಲಕಿಯ ಮೃತದೇಹ ಪತ್ತೆ; ನಾಲ್ವರು ಕಾಮುಕರ ಬಂಧನ
ಮಂಗಳೂರಿನ ಉಳಾಯಿಬೆಟ್ಟು ಸಮೀಪದ ಪರಾರಿಯಲ್ಲಿ 8 ವರ್ಷದ ಬಾಲಕಿಯ ಮೃತದೇಹ ಚರಂಡಿಯಲ್ಲಿ ಪತ್ತೆಯಾಗಿದ್ದ ಪ್ರಕರಣದಲ್ಲಿ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ. ಬಾಲಕಿಯನ್ನು ಕೊಲೆ ಮಾಡುವ ಮುನ್ನ ಸಾಮೂಹಿಕ ಅತ್ಯಾಚಾರ ನಡೆಸಿರುವುದನ್ನು ಆರೋಪಿಗಳು ಒಪ್ಪಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿಗಳಲ್ಲಿ ಮೂವರು ಮಧ್ಯಪ್ರದೇಶದವರು ಓರ್ವ ಜಾರ್ಖಂಡ್ ರಾಜ್ಯದ ನಿವಾಸಿಯಾಗಿದ್ದಾರೆ. ಆರೋಪಿಗಳನ್ನು ಜಯಸಿಂಗ್ (21), ಮನೀಮ್ ಸಿಂಗ್ (20), ಮುಖೇಶ್ ಸಿಂಗ್ (33), ಮನೀಶ್ ತಿರ್ಕಿ(20) ಎಂದು ಗುರುತಿಸಲಾಗಿದೆ.
ಜಯಸಿಂಗ್ , ಮುಖೇಶ್ ಸಿಂಗ್ ಮತ್ತು ಮನೀಶ್ ತಿರ್ಕಿ ಪರಾರಿಯ ರಾಜ್ ಟೈಲ್ಸ್ ಫ್ಯಾಕ್ಟರಿಯಲ್ಲಿ ಕಾರ್ಮಿಕರಾಗಿದ್ದರು, ಮನೀಮ್ ಸಿಂಗ್ ಪುತ್ತೂರಿನಲ್ಲಿ ಕೆಲಸ ಮಾಡುತ್ತಿದ್ದ ಎಂದು ಮಂಗಳೂರು ನಗರ ಪೊಲೀಸ್ ಕಮಿಷನರ್ ಎನ್. ಶಶಿಕುಮಾರ್ ತಿಳಿಸಿದ್ದಾರೆ.
ಇದನ್ನೂ ಓದಿ: ಇಂದಿನಿಂದ ಮತ್ತೆ 10 ಜಿಲ್ಲೆಗಳಲ್ಲಿ ಮಳೆ ಆರ್ಭಟ ಹೆಚ್ಚಲಿದೆ: ಹವಾಮಾನ ಇಲಾಖೆ ಎಚ್ಚರಿಕೆ!
ಆರೋಪಿಗಳು ಭಾನುವಾರ ಕಾರ್ಖಾನೆ ಆವರಣದಲ್ಲಿ ಆಟವಾಡುತ್ತಿದ್ದ ಬಾಲಕಿಯನ್ನು ಎಳೆದೊಯ್ದು ಸಾಮೂಹಿಕ ಅತ್ಯಾಚಾರವೆಸಗಿದ್ದಾರೆ. ಬಳಿಕ ಆಕೆಯ ಕತ್ತು ಹಿಸುಕಿ ಕೊಲೆ ಮಾಡಿ ಚರಂಡಿಯಲ್ಲಿ ಎಸೆದಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಉಳಾಯಿಬೆಟ್ಟು ಸಮೀಪದ ಗುರುಪುರ ಸೇತುವೆಯ ಬಳಿಯ ಪರಾರಿ ಕ್ರಾಸ್ನಲ್ಲಿ ಕೇರಳ ಮೂಲದ ವ್ಯಕ್ತಿಗಳ ಮಾಲಿಕತ್ವದ ರಾಜ್ ಟೈಲ್ಸ್ ಫ್ಯಾಕ್ಟರಿ ಇದೆ. ಕಾರ್ಖಾನೆಯಲ್ಲಿ ಸುಮಾರು 25 ಮಂದಿ ಕೆಲಸ ಮಾಡುತ್ತಿದ್ದಾರೆ. ಇಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರ 8 ವರ್ಷದ ಬಾಲಕಿ ಭಾನುವಾರ ಸಂಜೆ ನಾಪತ್ತೆಯಾದ್ದರು. ಹುಡುಕಾಟ ನಡೆಸಿದಾಗ ಕಾರ್ಖಾನೆಯ ಸಮೀಪದ ಚರಂಡಿಯಲ್ಲಿ ಬಾಲಕಿಯ ಮೃತದೇಹ ಪತ್ತೆಯಾಗಿತ್ತು. ಪ್ರಕರಣ ಸಂಬಂಧ ಸುಮಾರು 20 ಮಂದಿ ಉತ್ತರ ಭಾರತದ ಕಾರ್ಮಿಕರನ್ನು ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸಿದ್ದರು.
ಇದನ್ನೂ ಓದಿ: ಹಣದಾಸೆಯಿಂದ ಸ್ನೇಹಿತನನ್ನೇ ಕಿಡ್ನಾಪ್ ಮಾಡಿದ ಸಹಪಾಠಿಗಳು; ಐವರ ಬಂಧನ