FACT CHECK | ಹಿಂದೂ ಧರ್ಮದ ವ್ಯಕ್ತಿಯೊಬ್ಬನನ್ನು ತನ್ನ ಮಕ್ಕಳ ಮುಂದೆಯೇ ಮುಸ್ಲಿಂ ವ್ಯಕ್ತಿ ಹತ್ಯೆ ಮಾಡಿದ್ದು ನಿಜವೇ?
ವ್ಯಕ್ತಿಯೊಬ್ಬನ ಹಣೆಗೆ ಶೂಟ್ ಮಾಡುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಮೀರತ್ನಲ್ಲಿ ಮುಸ್ಲಿಂನೊಬ್ಬ ತನ್ನ ಮಕ್ಕಳ ಎದುರೇ ಹಿಂದೂ ವ್ಯಕ್ತಿಯನ್ನು ಕೊಂದಿದ್ದಾನೆ ಎಂಬ ಹೇಳಿಕೆಯೊಂದಿಗೆ ಸಿಸಿಟಿವಿ ಕ್ಲಿಪ್ಗಳನ್ನು ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ.
ಹೀಗಾಗಿ ಇದು ಕೋಮು ಬಣ್ಣವನ್ನು ಪಡೆದುಕೊಂಡಿದ್ದು ಹಲವರು ಕೋಮು ದ್ವೇಷ ಹರಡುವ ರೀತಿಯಲ್ಲಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಆದರೆ ವಾಸ್ತವದಲ್ಲಿ ಘಟನೆಗೆ ಮೂಲ ಕಾರಣದ ಕುರಿತು ವೈರಲ್ ಪೋಸ್ಟ್ನಲ್ಲಿ ಬರೆಯಲಾಗಿಲ್ಲ. ಹಾಗಾಗಿ ವೈರಲ್ ಪೋಸ್ಟ್ನಲ್ಲಿ ಮಾಡಲಾದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.
ಫ್ಯಾಕ್ಟ್ಚೆಕ್ :
ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿರುವ ಪೋಸ್ಟ್ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸಲು ವಿಡಿಯೋದ ಕೀ ವರ್ಡ್ಗಳನ್ನು ಬಳಸಿ ಗೂಗಲ್ ಸರ್ಚ್ ಮಾಡಿದಾಗ, ಘಟನೆಗೆ ಸಂಬಂಧಿಸಿದ ಹಲವು ವರದಿಗಳು ಲಭ್ಯವಾಗಿದೆ. ಈ ವರದಿಗಳ ಪ್ರಕಾರ, ಉತ್ತರ ಪ್ರದೇಶದ ಮೀರತ್ನ ಲೋಹಿಯಾ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಜೈದಿ ಫಾರ್ಮ್ನ ಬಟ್ಟೆ ವ್ಯಾಪಾರಿ ಅರ್ಷದ್ ತನ್ನ ಇಬ್ಬರು ಮಕ್ಕಳ ಮುಂದೆ ಹತ್ಯೆಯಾಗಿದ್ದಾರೆ ಎಂದು ವರದಿಯಾಗಿದೆ. ಹಾಗೆಯೇ ಕ್ರಿಮಿನಲ್ ಹಿನ್ನಲೆಯ ಇದ್ದ ಒಬ್ಬ ವ್ಯಕ್ತಿಯನ್ನು ಇನ್ನೊಬ್ಬ ಕ್ರಿಮಿನಲ್ ಗುಂಡಿಕ್ಕಿ ಕೊಂದಿದ್ದಾನೆ ಎಂದು ಉಲ್ಲೇಖಿಸಲಾಗಿದೆ.
ಪೊಲೀಸರು ಆರೋಪಿಯನ್ನು ಬಿಲಾಲ್ ಎಂದು ಗುರುತಿಸಿದ್ದು, ಕ್ರಿಮಿನಲ್ ದಾಖಲೆಯೂ ಇದೆ. ಅರ್ಷದ್ ಮತ್ತು ಬಿಲಾಲ್ ನಡುವೆ ವಾಗ್ವಾದ ನಡೆದಿದ್ದು, ಬಳಿಕ ಬಿಲಾಲ್ ಅರ್ಷದ್ಗೆ ಗುಂಡು ಹಾರಿಸಿದ್ದಾನೆ. ಈ ಘಟನೆಯು ಹಳೆಯ ವೈಷಮ್ಯದ ಹಿನ್ನೆಲೆಯಲ್ಲಿ ನಡೆದಿದೆ.. ಈ ಇಬ್ಬರೂ ಕೂಡ ಒಂದೇ ಮತಕ್ಕೆ ಸೇರಿದವರು ಎಂಬುದು ಅವರ ಹೆಸರುಗಳು ಕೂಡ ಸೂಚಿಸುತ್ತಿವೆ
ಇನ್ನು, ಘಟನೆಯಲ್ಲಿ ಯಾವುದೇ ಕೋಮು ಆಯಾಮವಿಲ್ಲ ಎಂದು ಮೀರತ್ ಪೊಲೀಸರು ವಿಶ್ವಾಸ್ ಎಂಬ ಸುದ್ದಿ ಸಂಸ್ಥೆಗೆ ಖಚಿತಪಡಿಸಿದ್ದಾರೆ. ಘಟನೆಯಲ್ಲಿ ಹತನಾದ ವ್ಯಕ್ತಿ ಮತ್ತು ಆರೋಪಿ ಇಬ್ಬರೂ ಒಂದೇ ಸಮುದಾಯಕ್ಕೆ ಸೇರಿದವರು ಮತ್ತು ಅಪರಾಧ ಚಟುವಟಿಕೆಯಲ್ಲಿ ಭಾಗಿಯಾಗಿರುವವರೇ ಎಂದು ಸುದ್ದಿ ಸಂಸ್ಥೆಗೆ ಮಾಹಿತಿ ನೀಡಿದ್ದಾರೆ. ಬಳಿಕ ಇದೇ ಮೀರತ್ ಪೋಲೀಸರು ತಮ್ಮ X ಪೋಸ್ಟ್ನಲ್ಲಿ ಈ ಕುರಿತು ಮಾಹಿತಿಯನ್ನು ಹಂಚಿಕೊಂಡಿದ್ದಾರೆ.
ಒಟ್ಟಾರೆಯಾಗಿ ಹೇಳುವುದಾದರೆ, ಹಿಂದೂ ತಂದೆಯನ್ನು ತನ್ನ ಮಕ್ಕಳ ಎದುರೇ ಗುಂಡು ಹಾರಿಸಿ ಮುಸ್ಲಿಂಮನೊಬ್ಬ ಕೊಲೆ ಮಾಡಿದ್ದಾನೆ ಎಂದು ಸುಳ್ಳು ಪ್ರತಿಪಾದನೆಯೊಂದಿಗೆ ಪೋಸ್ಟ್ಅನ್ನು ಹಂಚಿಕೊಳ್ಳಲಾಗಿದೆ. ವಾಸ್ತವವಾಗಿ ಈ ಪ್ರಕರಣದಲ್ಲಿ ಯಾವುದೇ ಕೋಮು ಆಯಾಮವಿಲ್ಲ ಮತ್ತು ಈ ಪ್ರಕರಣದಲ್ಲಿ ಇಬ್ಬರೂ ಒಂದೇ ಸಮುದಾಯದವರು ಎಂಬುದನ್ನು ಪೊಲೀಸರೇ ಸ್ಪಷ್ಟಪಡಿಸಿದ್ದಾರೆ. ಹಾಗಾಗಿ ಪೋಸ್ಟ್ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.
ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್ ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ
ಇದ್ದನ್ನು ಓದಿರಿ : FACT CHECK | ಕ್ಯಾಪ್ಸಿಕಮ್ ಕೊಯ್ಯುವಾಗ ಅತ್ಯಂತ ವಿಷಕಾರಿ ಹಾವು ಪತ್ತೆಯಾಗಿದ್ದು ನಿಜವೇ?