ಅಂಪನ್ ಚಂಡಮಾರುತ : ಪಶ್ಚಿಮ ಬಂಗಾಳ, ಒಡಿಶಾದ ಕೆಲವೆಡೆ ಭಾರಿ ಮಳೆ, ಬಿರುಗಾಳಿ!
ಒಡಿಶಾದ ಭದ್ರಾಕ್ ಪ್ರದೇಶದಲ್ಲಿ ಬುಧವಾರ ಗುಡುಗು ಸಹಿತ ಭಾರಿ ಮಳೆ ಆಗಲಿದ್ದು, ಹಲವೆಡೆ ಈಗಾಗಲೇ ಭಾರೀ ಮಳೆ ಪ್ರಾರಂಭವಾಗಿದೆ. ಬಿರುಗಾಳಿ ಆರ್ಭಟಿಸಲು ಪ್ರಾರಂಭಿಸಿವೆ. ಅಂಪನ್ ಚಂಡಮಾರುತದ ಪೂರ್ವಭಾವಿಯಂತೆ ಪ್ರಬಲ ಗಾಳಿಯೂ ಬೀಸುತ್ತಿದೆ. ಸಮುದ್ರದ ಅಲೆಗಳು ಉಕ್ಕೇರುತ್ತಿವೆ.
ಭೂ ಕುಸಿತ ಸಂಭವಿಸುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದ್ದು,ಒಡಿಶಾ ಮತ್ತು ಪಶ್ಚಿಮ ಬಂಗಾಳದ ತೀರ ಪ್ರದೇಶದಲ್ಲಿರುವ ಲಕ್ಷಾಂತರ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸಾಗಿಸಲಾಗಿದೆ. ಬಂಗಾಳಕೊಲ್ಲಿ ವಾಯುಭಾರ ಕುಸಿತದಿಂದ ಉಂಟಾಗಿ ಅಂಫಾನ್ ಚಂಡ ಮಾರುತವು ಮುಂದಿನ 12 ಗಂಟೆಗಳಲ್ಲಿ ಪಶ್ಚಿಮ ಬಂಗಾಳದ ದಿಘಾ ಹಾಗೂ ಹಾಟಿಯ ಗಡಿಯನ್ನು ದಾಟಿ ಸುಂದರ್ ಬನ್ಸ್ ತಲುಪಲಿದೆ.
ಒಡಿಶಾದ ಪಾರದೀಪ್ ನಿಂದ ಗಂಟೆಗೆ 210 ಕಿಲೋ ಮೀಟರ್ ವೇಗದಲ್ಲಿ ಬೀಸುತ್ತಿರುವ ಅಂಫಾನ್ ಚಂಡಮಾರುತವು ಬುಧವಾರ ಸಂಜೆ ವೇಳೆಗೆ ಪಶ್ಚಿಮ ಬಂಗಾಳ ಗಡಿ ದಾಟಿ ಬಾಂಗ್ಲಾದೇಶಕ್ಕೆ ತಲುಪಲಿದೆ ಎಂದು ಹವಾಮಾನ ಇಲಾಖೆ ಸ್ಪಷ್ಟಪಡಿಸಿದೆ. ಇಂದು ಅಪ್ಪಳಿಸಲಿರುವ ಅಂಫನ್ ಚಂಡಮಾರುತದ ವೇಗ ಅದೃಷ್ಟವಶಾತ್ ಕೊಂಚ ಕಡಿಮೆಯಾಗಲಿದ್ದು, ಈಗ ಅದು ಸೂಪರ್ ಸೈಕ್ಲೋನ್ ಬದಲು ಅತ್ಯಂತ ತೀವ್ರ ವೇಗದ ಚಂಡಮಾರುತವಾಗಿ ಬದಲಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
1999ರಲ್ಲಿ ಒಡಿಶಾಕ್ಕೆ ಅಪ್ಪಳಿಸಿದ ಸೂಪರ್ ಸೈಕ್ಲೋನ್’ಗೆ 10,000ಕ್ಕೂ ಹೆಚ್ಚು ಜನರು ಬಲಿಯಾಗಿದ್ದರು. ಹೀಗಾಗಿ ಆತಂಕ ಹೆಚ್ಚಿತ್ತು. ಮಂಗಳವಾರ ಮಧ್ಯಾಹ್ನದ ವೇಳೆಗೆ ಚಂಡಮಾರುತ ಕೊಂಚ ವೇಗ ಕಳೆದುಕೊಂಡಿದೆ ಎಂದು ಹವಾಮಾನ ಇಲಾಖೆ ಹೇಳಿದೆ. ಈ ಚಂಡಮಾರುತದ ಪರಿಣಾಮ ಉಭಯ ರಾಜ್ಯಗಳ ಕರಾವಳಿ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುತ್ತಿದೆ.
ಒಡಿಶಾದ ಪಾರಾದೀಪ್, ಬಾಲಾಸೋರ್, ಚಂಡೀಪುರ್ ಸೇರಿದಂತೆ ಹಲವು ಕಡೆ ಬೆಳಗ್ಗೆ 4ರಿಂದಲೇ ಮಳೆ ಪ್ರಾರಂಭವಾಗಿದೆ. ಗಂಟೆಗೆ 195-200 ಕಿಲೋಮೀಟರ್ ವೇಗದ ಬದಲು ಅಂಫನ್ ಚಂಡಮಾರುತ 155-165 ಕಿಲೋಮೀಟರ್ ವೇಗದಲ್ಲಿ ಬಂಗಾಳ ಹಾಗೂ ಒಡಿಶಾದ ಕರಾವಳಿಗೆ ಅಪ್ಪಳಿಸುವ ಸಾಧ್ಯತೆಗಳಿವೆ.