ಇತಿಹಾಸದ ಪುಟ ಸೇರಿದ ಸಿಎಂ ಆಡಳಿತ : ರಾಜ್ಯದಲ್ಲಿ ಏಕ ಚಕ್ರಾಧಿಪತ್ಯ
ಶ್ರೀ ಬಿ ಎಸ್ ಯಡಿಯೂರಪ್ಪ ಈ ರಾಜ್ಯದ ಮುಖ್ಯಮಂತ್ರಿ ಆಗಿ ಇಂದಿಗೆ ಒಂದು ತಿಂಗಳು. ಹಿಂದಿನ ಸಮ್ಮಿಶ್ರ ಸರ್ಕಾರದ ಮೇಲೆ ಕಾರಣ ಇಲ್ಲದೆ ಆರೋಪಗಳನ್ನು ಮಾಡುತ್ತಿದ್ದ ಇವರು ಇನ್ನೂ ಪೂರ್ಣ ಪ್ರಮಾಣದ ಸರ್ಕಾರ ರಚನೆ ಮಾಡಲು ಸಾಧ್ಯ ಆಗದೇ ಇರುವುದು ವೈಫಲ್ಯದ ಸಂಕೇತ.
ರಾಜ ಪ್ರಭುತ್ವದಲ್ಲಿ ಏಕ ಚಕ್ರಾಧಿಪತ್ಯದ ಆಡಳಿತವನ್ನು ನಾವು ಇತಿಹಾಸದಲ್ಲಿ ಓದಿದ್ದೆವು. ಬಿಜೆಪಿ ನಮ್ಮ ರಾಜ್ಯಕ್ಕೆ ಶ್ರೀ ಬಿ ಎಸ್ ಯಡಿಯೂರಪ್ಪ ಅವರ ಏಕ ಚಕ್ರಾಧಿಪತ್ಯದ ಆಡಳಿತವನ್ನು ನೀಡುವ ಮೂಲಕ ಜನತಂತ್ರದಲ್ಲೂ ಇದು ಸಾಧ್ಯ ಎಂದು ರುಜುವಾತು ಮಾಡಿದೆ. ಇದಕ್ಕಾಗಿ ಬಿಜೆಪಿಗೆ ಮತ್ತು ಸಂಘ ಪರಿವಾರಕ್ಕೆ ಅಭಿನಂದನೆಗಳು.
ಶ್ರೀ ಬಿ ಎಸ್ ಯಡಿಯೂರಪ್ಪ ರವರು ಒಂದು ತಿಂಗಳಿಂದ ಏಕ ವ್ಯಕ್ತಿ ಆಡಳಿತದ ಮೂಲಕ ಸಮೃದ್ಧಿಯಾಗಿ ಊಟ ಮಾಡುತ್ತಿದ್ದಾರೆ. ಬಿಜೆಪಿ ಅಥವಾ ಸಂಘ ಪರಿವಾರ ಪೂರ್ಣ ಪ್ರಮಾಣದ ಸಚಿವ ಸಂಪುಟದ ರಚನೆ ಅಥವಾ ಖಾತೆಗಳ ಹಂಚಿಕೆ ಮುಖಾಂತರ ಅವರ ಸಮೃದ್ಧಿಯ ಭೋಜನಕ್ಕೆ ಅಡೆ ತಡೆ ಮಾಡುವುದಿಲ್ಲ. ಕರ್ನಾಟಕದ ಸಮಸ್ಯೆಗಳು ಬಿಜೆಪಿ ಪಕ್ಷದ ಆದ್ಯತೆಗಳು ಆಗದೇ ಇರುವುದರಿಂದ ನಮ್ಮ ರಾಜ್ಯದಲ್ಲಿ ಏಕ ಚಕ್ರಾಧಿಪತ್ಯದ ಆಡಳಿತ ಮತ್ತು ಭ್ರಷ್ಟಾಚಾರದ ಮೂಲಕ ಮುಖ್ಯಮಂತ್ರಿಗಳ ಸಮೃದ್ಧ ಭೋಜನ ಯಾರ ಹಂಗೂ ಇಲ್ಲದೆ ನಡಿಯುತ್ತಿದೆ. ಇವರ ಒಂದು ತಿಂಗಳ ಆಡಳಿತ ಇತಿಹಾಸದ ಪುಟಗಳಿಗೆ ಸೇರಿದೆ. ಅದಕ್ಕಾಗಿ ಶ್ರೀ ಬಿ ಎಸ್ ಯಡಿಯೂರಪ್ಪ ಅವರಿಗೆ ಅಭಿನಂದನೆಗಳು.