ಉನ್ನಾವ್ ಅತ್ಯಾಚಾರ, ಅಪಹರಣ ಪ್ರಕರಣದ ಆರೋಪಿಗೆ ಜೀವಾವಧಿ ಶಿಕ್ಷೆ..!

ಉನ್ನಾವ್ ಅತ್ಯಾಚಾರ ಮತ್ತು ಅಪಹರಣ ಪ್ರಕರಣದ ಆರೋಪಿ ಬಿಜೆಪಿಯ ಮಾಜಿ ಶಾಸಕ ಕುಲದೀಪ್ ಸಿಂಗ್ ಸೆಂಗಾರ್ ಗೆ ಜೀವಾವಧಿ ಶಿಕ್ಷೆಯನ್ನು ದೆಹಲಿಯ ಟಿಸ್ ಹಜಾರಿಯ ನ್ಯಾಯಾಲಯ ಘೋಷಿಸಿದೆ.  2017 ರಲ್ಲಿ ಉನ್ನಾವೊದಲ್ಲಿ ಅಪ್ರಾಪ್ತ ಹುಡುಗಿಯ ಮೇಲೆ ಅತ್ಯಾಚಾರ ಎಸಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸೆಂಗಾರ್ ಅವರನ್ನು ದೆಹಲಿ ವಿಚಾರಣಾ ನ್ಯಾಯಾಲಯ ಶಿಕ್ಷೆಗೊಳಪಡಿಸಿದೆ.

ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯ್ದೆ (ಪೊಕ್ಸೊ ಕಾಯ್ದೆ) ಯ ಸೆಕ್ಷನ್ 5 (ಮಗುವಿನ ಮೇಲೆ ಉಲ್ಬಣಗೊಳ್ಳುವ ಲೈಂಗಿಕ ಕಿರುಕುಳ) ಯೊಂದಿಗೆ, ಭಾರತೀಯ ದಂಡ ಸಂಹಿತೆಯ ಸೆಕ್ಷನ್ 376 (ಅತ್ಯಾಚಾರ) ಅಡಿಯಲ್ಲಿ ಸೆಂಗಾರ್ ಶಿಕ್ಷೆಗೊಳಗಾಗಿದ್ದಾನೆ.

2017ರಲ್ಲಿ 17ವರ್ಷದ ಬಾಲಕಿ ಕೆಲಸ ಮುಗಿಸಿ ಬರುವಾಗ ಬಿಜೆಪಿ ಶಾಸಕ ಕುಲದೀಪ್ ಸಿಂಗ್ ಸೆಂಗಾರ್ ನಿಂದ ಲೈಂಗಿಕ ದೌರ್ಜನ್ಯವಾಗಿದೆಯೆಂದು ದೂರಿದ್ದಳು. ಈ ಕುರಿತು ವಿಚಾರಣೆ ನಡೆಸಿದ ನ್ಯಾಯಾಲಯ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 376 ಮತ್ತು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯ್ದೆ (ಪೊಕ್ಸೊ) 5 (ಸಿ) ಮತ್ತು 6 ಸೆಕ್ಷನ್ ಅಡಿಯಲ್ಲಿ ಶಿಕ್ಷೆಗೊಳಪಡಿಸಲಿದೆ.

ಆತನ ಸಹವರ್ತಿ ಶಸಿ ಸಿಂಗ್‌ ಕೂಡ ಅಪರಾಧಿಯೆಂದು ಘೋಷಿಸಿರುವ ನ್ಯಾಯಾಲಯ ಡಿಸೆಂಬರ್‌ 19 ಶಿಕ್ಷೆಯ ಪ್ರಮಾಣವನ್ನು ಘೋಷಿಸುವ ಸಾಧ್ಯತೆಯಿದೆ.

2017ರಲ್ಲಿಯೇ ಸಂತ್ರಸ್ತೆ ದೂರು ನೀಡಿದ್ದರು ಸಹ ಪೊಲೀಸರ ಸಮರ್ಪಕವಾಗಿ ವಿಚಾರಣೆ ನಡೆಸಿರಲಿಲ್ಲ. ಬದಲಿಗೆ ಅಂದಿನಿಂದ ಆಕೆಯ ಮತ್ತು ಆಕೆಯ ಕುಟುಂಬದ ಮೇಲೆ ನಿರಂತರ ದೌರ್ಜನ್ಯ ನಡೆದಿದೆ. ಆಕೆಯ ತಂದೆಯನ್ನು ಕಾನೂನುಬಾಹಿರವಾಗಿ ಶಶಸ್ತ್ರ ಹೊಂದಿದರೆಂಬ ಆರೋಪದಿಂದ ಬಂಧಿಸಲಾಗಿತ್ತು. ತದನಂತರ ಸಂತ್ರಸ್ತೆಯ ತಂದೆ ಜೈಲಿನಲ್ಲಿಯೇ ಅನುಮಾನಸ್ಪದವಾಗಿ ಸಾವನಪ್ಪಿದ್ದರು. ಅದಕ್ಕೂ ಮೊದಲು ಅವರಿಗೆ ಶಾಸಕನ ತಮ್ಮ ಅತುಲ್ ಸೆಂಗಾರ್ ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದರು.

ಇನ್ನು ಸಂತ್ರಸ್ತೆಯು ಉನ್ನಾವೊದಿಂದ ನ್ಯಾಯಾಲಯಕ್ಕೆ ಕಾರಿನಲ್ಲಿ ಪ್ರಯಾಣಿಸುತ್ತಿರುವಾಗ ರಾಯ್ ಬರೇಲಿಯಲ್ಲಿ ಅಪಘಾತಕ್ಕೀಡಾಗಿದ್ದಳು. ಆಗ ಆಕೆಯ ಇಬ್ಬರು ಚಿಕ್ಕಮ್ಮಂದಿರು ಸಾವನಪ್ಪಿದ್ದಾರೆ. ಆಕೆಯು ಸಹ ಸದ್ಯ ಆಸ್ಪತ್ರೆಯಲ್ಲಿದ್ದಾಳೆ.

ಇಲ್ಲಿ ಪೊಲೀಸರ ಪಕ್ಷಪಾತಿತನ, ಅಧಿಕಾರಿಗಳ ನಿರ್ಲಕ್ಷ್ಯ, ಶಾಸಕನ ಹಣಬಲದಿಂದ ಆರೋಪವನ್ನು ಮುಚ್ಚಿಹಾಕಲು ಪ್ರಯತ್ನಿಸಲಾಗುತ್ತಿದೆ ಎಂದು ಆಕೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ರವರ ಮನೆ ಮುಂದೆ ಪ್ರತಿಭಟಿಸಿದ್ದಳು. ಸಾರ್ವಜನಿಕರ ಆಕೆಗೆ ಬೆಂಬಲ ನೀಡಿದ್ದರು. ಆನಂತರವಷ್ಟೇ ಪೊಲೀಸರು ಎಫ್‌ಐಆರ್‌ ದಾಖಲಿಸಿದ್ದರು.

ಆತನ ಬಂಧನವಾದ ನಂತರವಷ್ಟೇ ಸಾಕಷ್ಟು ಪ್ರತಿಭಟನೆಗಳು ನಡೆದ ಹಿನ್ನೆಲೆಯಲ್ಲಿ ಬಿಜೆಪಿ ಪಕ್ಷವು ಆತನ ಶಾಸಕ ಸ್ಥಾನದಿಂದ ಉಚ್ಚಾಟಿಸಿತ್ತು. ಈ ವರ್ಷ ಸುಪ್ರೀಂ ಕೋರ್ಟ್‌ 45 ದಿನದಲ್ಲಿ ವಿಚಾರಣೆ ನಡೆಸಬೇಕು ಮತ್ತು ಉತ್ತರ ಪ್ರದೇಶ ಸರ್ಕಾರ 25 ಲಕ್ಷ ಪರಿಹಾರ ನೀಡಬೇಕು ಎಂದು ಆದೇಶ ನೀಡಿತ್ತು.

ಅದರಂತೆ ತನಿಖೆ ಪೂರ್ಣಗೊಂಡಿದೆ. ಸಿಬಿಐ ನ್ಯಾಯಾಲಯದ ತನಿಖೆಯು ಅಂತಿಮ ಹಂತದಲ್ಲಿದ್ದು ಸಂತ್ರಸ್ತೆಗೆ ಕೊನೆಗೂ ನ್ಯಾಯ ಸಿಕ್ಕಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights