ಕಾವೇರಿ ಕೂಗು ಎಂಬುದು ಮೋಸದ ನಾಟಕ: ಜಗ್ಗಿ ವಾಸುದೇವ್ ನಡೆಗೆ ಪರಿಸರ ಕಾರ್ಯಕರ್ತರ ವಿರೋಧ

ಈಶಾ ಪ್ರತಿಷ್ಠಾನದ “ಕಾವೇರಿ ಕೂಗು” ಯೋಜನೆಗೆ ರೈತರಿಂದ ಉತ್ತಮ ಸ್ಪಂದನೆ ಸಿಕ್ಕಿದೆ ಎಂದು ಈಶ ಪ್ರತಿಷ್ಠಾನದ ಮುಖ್ಯಸ್ಥ ಜಗ್ಗಿ ವಾಸುದೇವ್ ಹೇಳಿದ್ದಾರೆ. ಆದರೆ ವರ್ಷಾಂತ್ಯಕ್ಕೆ 2.5 ಕೋಟಿ ಸಸಿಗಳನ್ನು ವಿತರಿಸುವ ಗುರಿ ಹೊಂದಿದ್ದ ಯೋಜನೆಯು ಕೊರೊನಾ ಕಾರಣಕ್ಕೆ 1.2 ಕೋಟಿ ಸಸಿಗಳಿಗೆ ಇಳಿಸಲಾಗಿದೆ. ಈಗಾಗಲೆ 60 ಲಕ್ಷದಷ್ಟು ಸಸಿಗಳನ್ನು ವಿತರಿಸಿ ಆಗಿದೆ ಎಂದು ಅವರು ಹೇಳಿದ್ದಾರೆ.

ಈಶಾ ಫೌಂಡೇಷನ್‌ನ ಜಗ್ಗಿ ವಾಸುದೇವ್, ಒಣಗುತ್ತಿರುವ ನದಿಯ ಪುನಶ್ಚೇತನಕ್ಕಾಗಿ ಹಾಗೂ ಮಣ್ಣಿನಲ್ಲಿರುವ ಪೌಷ್ಟಿಕಾಂಶ ಹೆಚ್ಚಿಸಲು ಕಾವೇರಿಯ ದಡದಾದ್ಯಂತ 242 ಕೋಟಿ ಮರಗಳನ್ನು ನೆಡುವ ಯೋಜನೆಯನ್ನು ಈಶ ಫೌಂಡೇಶನ್ ಕೈಗೆತ್ತಿಕೊಂಡಿತ್ತು.

ಆದರೆ ಈ ಕಾರ್ಯಕ್ರಮಕ್ಕೆ ಜನರಿಂದ ಬಲವಂತವಾಗಿ ಗಿಡವೊಂದಕ್ಕೆ 42 ರೂ. ಪಡೆಯುತ್ತಾರೆ ಎಂದು ವಕೀಲರೊಬ್ಬರು ಹೈಕೋರ್ಟ್‌ಗೆ ಅರ್ಜಿ ನೀಡಿದ್ದು, ಹೈಕೋರ್ಟ್ ಅದರ ವಿಚಾರಣೆ ನಡೆಸಿ, ಆಧ್ಯಾತ್ಮದ ಹೆಸರಿನಲ್ಲಿ ಕಾನೂನು ಬಾಹಿರ ಚಟುವಟಿಕೆಗಳಿಗೆ ಉತ್ತೇಜನ ನೀಡುವುದಿಲ್ಲ, ಆಧ್ಯಾತ್ಮದ ವಿಚಾರಗಳು ಕೂಡಾ ಕಾನೂನಿನ ಚೌಕಟ್ಟಿಗೆ ಒಳಪಡಬೇಕು ಎಂದು ಚಾಟಿ ಬೀಸಿತ್ತು.

ಅಲ್ಲದೆ ಯೋಜನೆಗೆ ಈವರೆಗೆ ಯಾವ ಮಾರ್ಗದಲ್ಲಿ ಮತ್ತು ಎಷ್ಟು ಹಣ ಸಂಗ್ರಹ ಮಾಡಿದ್ದೀರಿ ಎಂಬುದನ್ನು ಬಹಿರಂಗಪಡಿಸುವಂತೆ ಹೈಕೋರ್ಟ್ ಹೇಳಿತ್ತು.

ಇದನ್ನೂ ಓದಿ: ಸಂಪುಟ ವಿಸ್ತರಣೆಗೆ ಬಿಜೆಪಿಯಲ್ಲಿ ಭಿನ್ನಮತ: ಮಂಡಳಿ ಅಧ್ಯಕ್ಷಗಿರಿಗೆ ಬಿಜೆಪಿ ಶಾಸಕರ ನಕಾರ

ಈಶಾ ಫೌಂಡೇಶನ್ ಸರ್ಕಾರಿ ಭೂಮಿಯಲ್ಲಿ ಗಿಡಗಳನ್ನು ನೆಡುತ್ತಿದೆ. ಸರ್ಕಾರವು ಇದರ ಸಾಧಕ ಬಾಧಕಗಳನ್ನು ಅಧ್ಯಯನ ಮಾಡದೆ ಒಂದು ಖಾಸಗಿ ಸಂಸ್ಥಗೆ ಹೇಗೆ ಅನುಮತಿ ನೀಡಿದೆ ಎಂದು ಹೈಕೋರ್ಟ್‌ನಲ್ಲಿ ಅರ್ಜಿದಾರ ವಕೀಲರು ಪ್ರಶ್ನಿಸಿದ್ದರು.

ಇದಕ್ಕೆ ರಾಜ್ಯ ಸರ್ಕಾರ ಕೂಡಾ ಚಂದಾ ಎತ್ತಲು ಯಾವುದೇ ಸಂಸ್ಥಗಳಿಗೆ ಅನುಮತಿ ನೀಡಿಲ್ಲ ಎಂದು ಪ್ರಮಾಣ ಪತ್ರವನ್ನು ಹೈಕೋರ್ಟಿಗೆ ಸಲ್ಲಿಸಿತ್ತು. ಈಶ ಪ್ರತಿಷ್ಠಾನವು ತನ್ನ ಅಭಿಯಾನದಲ್ಲಿ 10,626 ಕೋಟಿ ರೂ. ದೇಣಿಗೆ ಸಂಗ್ರಹಿಸುವ ನಿರೀಕ್ಷೆಯಿದ್ದು, ಜನರಿಂದ ಭಾರೀ ಪ್ರಮಾಣದ ಹಣ ಸಂಗ್ರಹಿಸುವುದು ಕಳವಳಕಾರಿಯಾಗಿದೆ ಎಂದು ದೂರುದಾರ ವಕೀಲರು ವಾದಿಸಿದ್ದರು.

ನನ್ನ ಮೇಲಿನ ಆರೋಪದಲ್ಲಿ ಹುರುಳಿಲ್ಲ, ನಾವು ಯಾವುದೇ ಸರ್ಕಾರಿ ಭೂಮಿಯಲ್ಲಿ ಗಿಡಗಳನ್ನು ನೆಡುತ್ತಿಲ್ಲ. ಅಲ್ಲದೆ ರೈತರಿಂದ ಹಣವನ್ನು ಪಡೆಯುತಿಲ್ಲ ಎಂದು ಹೇಳಿದ್ದಾರೆ. ಇದುವರೆಗೆ 123 ದೇಶಗಳು ಈ ಅಭಿಯಾನಕ್ಕೆ ಪ್ರಾಯೋಜಕತ್ವ ನೀಡುತ್ತಿದೆ ಎಂದಿರುವ ಅವರು, ವಿಶ್ವದಾದ್ಯಂತ ಸ್ಪಂದನೆ ದೊರಕಿರುವುದನ್ನು ದೂರುದಾರರು ಗಮನಿಸಬೇಕು ಹಾಗೂ ಇನ್ನುಳಿದಂತೆ ನ್ಯಾಯಾಲಯ ತನ್ನ ನಿರ್ಧಾರ ತೆಗೆದುಕೊಳ್ಳುತ್ತದೆ ಎಂದು ಜಗ್ಗಿ ವಾಸುದೇವ್ ಹೇಳಿದ್ದಾರೆ.

ಈ ಬಗ್ಗೆ Environment Support Group ನ ಮುಖ್ಯಸ್ಥ ಲಿಯೋ ಎಫ್‌. ಸಲ್ಡಾನ ಮಾತನಾಡಿ, ಒಂದು ನದಿಯನ್ನು ಉಳಿಸುವುದು ಎಂದರೆ ಕೇವಲ ಮರಗಳನ್ನು ನೆಡವುದು ಮಾತ್ರವಲ್ಲ. ನದಿ ದಡದಲ್ಲಿ ಇರುವ ಪರಿಸರ ವೈವಿಧ್ಯತೆಯನ್ನು ಕೂಡಾ ಉಳಿಸುವುದಾಗಿದೆ. ಅಲ್ಲಿನ ಸೂಕ್ಷ್ಮ ಪರಿಸರಕ್ಕೆ ಏಟು ಕೊಟ್ಟು ಕೇವಲ ಮರಗಳನ್ನು ಮಾತ್ರ ನೆಟ್ಟರೆ ಅದು ಅಲ್ಲಿನ ಪರಿಸರಕ್ಕೆ ಹಾನಿಯುಂಟು ಮಾಡುತ್ತದೆ. ಒಟ್ಟಿನಲ್ಲಿ ಹೇಳಬೇಕೆಂದರೆ ಈ ಕಾಯಕ್ರಮ ಒಂದು ರಾಜಕೀಯವಾಗಿದೆ. 2019 ರಲ್ಲಿ ಮರ ನೆಡುತ್ತೇವೆ ’ಮಿಸ್‌ಕಾಲ್’ ಕೊಡಿ ಎಂದಿದ್ದರು. ಆ ಸಮಯದಲ್ಲಿ ಮಿಸ್‌ಕಾಲ್ ಮಾಡಿದ್ದ ಕೋಟ್ಯಾಂತರ ಸಂಖ್ಯೆಗಳನ್ನು ಬಿಜೆಪಿಯ ರಾಜಕೀಯ ಪ್ರಚಾರಕ್ಕೆ ಬಳಸಿಕೊಂಡಿರುವುದು ಸರಿಯಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.

ಹಿರಿಯ ಪರಿಸರ ಕಾರ್ಯಕರ್ತ ಹಾಗೂ ಗ್ರಾಮ ಸೇವಾ ಸಂಘದ ಅಧ್ಯಕ್ಷರಾದ ಸಿ. ಯತಿರಾಜುರವರು ಮಾತನಾಡಿ “ಈ ಒಟ್ಟು ಕಾರ್ಯಕ್ರಮ ಕಾರ್ಪೊರೇಟ್ ಕಂಪೆನಿಗಳಿಂದ ದುಡ್ಡು ವಸೂಲಿ ಮಾಡಲು ರೂಪಿಸಿರುವಂತದ್ದು. ಪರಿಸರಕ್ಕೆ ಹಾನಿ ಮಾಡುವ ಕಾರ್ಪೊರೇಟ್ ಕಂಪೆನಿಗಳ ಹಣದಿಂದ ಇವರು ಯಾವ ಪರಿಸರ ಸಂರಕ್ಷಣೆ ಮಾಡುತ್ತಾರೆ? ನದಿಯ ದಂಡೆಗಳನ್ನು ಹಸಿರೀಕರಣ ಮಾಡುವುದೇಂದರೆ ನದಿ ಉಳಿಯುವುದಿಲ್ಲ. ನದಿ ಪಾತ್ರವನ್ನು ಸಮಗ್ರವಾಗಿ ಅಧ್ಯಯನ ಮಾಡದೆ ಕೇವಲ ಒಂದೆರೆಡು ವರ್ಷದಲ್ಲಿ ನದಿ ಹಸಿರೀಕರಣ ಮಾಡುತ್ತೇವೆ ಎಂದರೆ ಅದೊಂದು ಮೋಸ. ಸಮುದಾಯದ ನೇತೃತ್ವ ಇಲ್ಲದೆ ಕಾರ್ಪೊರೇಟ್ ನೇತೃತ್ವದಲ್ಲಿ ನಡೆಯುವ ಈ ಕಾರ್ಯಕ್ರಮ ದೊಡ್ಡ ನಾಟಕ” ಎಂದು ಹೇಳಿದ್ದಾರೆ.


ಇದನ್ನೂ ಓದಿ:  ಸ್ವದೇಶಿ ಎಂದರೆ ವಿದೇಶಿ ವಸ್ತುಗಳನ್ನು ತಿರಸ್ಕರಿಸುವುದಲ್ಲ! ಹೊಸ ವ್ಯಾಖ್ಯಾನ ಕೊಟ್ಟ ಮೋಹನ್ ಭಾಗವತ್‌


ಇದನ್ನೂ ಓದಿ:  ರಾಮಮಂದಿರ ಬಿಜೆಪಿಗೆ ರಾಜಕೀಯ ದಾಳವಾಗಿದ್ದು ವಿಪರ್ಯಾಸ; ಮಂದಿರ ನಿರ್ಮಾಣ ಏಕತೆಯ ಪ್ರತಿಬಿಂಬವಾಗಲಿ: ಹೆಚ್‌ಡಿಕೆ

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights