ಗುಜರಾತ್ ಹತ್ಯಾಕಾಂಡ ಮರುಕಳಿಸಬೇಕು ಎಂದಿದ್ದ ಹಿಂದೂ ಮಹಾಸಭಾ ಮುಖಂಡನ ಬಂಧನ
ಸಾಮಾಜಿಕ ಜಾಲತಾಣದಲ್ಲಿ ಗುಜರಾತ್ ಹತ್ಯಾಕಾಂಡ ಮರುಕಳಿಸಬೇಕು ಎಂತಂತಹ ಕೋಮುದ್ವೇಷದ ಪೋಸ್ಟ್ ಹಾಕಿದ್ದ ಹಿಂದೂ ಮಹಾಸಭಾ ಜಿಲ್ಲಾ ನಾಯಕ ಎಂ ಕುಮಾರಸ್ವಾಮಿ ಎಂಬವರನ್ನು ಚಿತ್ರದುರ್ಗದಲ್ಲಿ ಬಂಧಿಸಲಾಗಿದೆ.
ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಜಿಲ್ಲಾ ಕಾರ್ಯದರ್ಶಿ ಸೈಯದ್ ಸಾದತ್ ಎಂಬುವವರು ನೀಡಿದ ದೂರಿನ ಆಧಾರದಲ್ಲಿ ದೂರು ದಾಖಲಿಸಿರುವ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ಕೊರೊನಾ ಸಮಯದಲ್ಲಿ ಸುಳ್ಳು ಸುದ್ದಿಗಳು, ಕೋಮುದ್ವೇಷದ ಹೇಳಿಕೆಗಳು ಹೆಚ್ಚಾಗುತ್ತಿವೆ. ಕೊರೊನಾ ವಿರುದ್ಧದ ಬೇಕಾದರೆ ಹೋರಾಡಬಹುದು, ಸುಳ್ಳು ಸುದ್ದಿಗಳ ವಿರುದ್ಧ ಸಾಧ್ಯವಿಲ್ಲ ಎಂಬ ಮಾತುಗಳು ಕೇಳಿಬರುತ್ತಿವೆ. ಮುಖ್ಯಮಂತ್ರಿ ಯಡಿಯೂರಪ್ಪನವರೆ ಅಲ್ಪಸಂಖ್ಯಾತ ಮುಸ್ಲಿಂ ಬಾಂಧವರ ಕುರಿತಾಗಿ ಸುಳ್ಳು ಹರಡಿದರೆ ಕ್ರಮ ಖಚಿತ ಎಂದು ಹೇಳಿಕೆ ನೀಡಿದ್ದಾರೆ. ಇಂತಹ ಸಮಯದಲ್ಲಿಯೇ “ಚಿತ್ರದುರ್ಗದ ಅಖಿಲ ಭಾರತ ಹಿಂದೂ ಮಹಾಸಭಾದ ಮುಖಂಡ ಮತ್ತು ಬಿಜೆಪಿ ಕಾರ್ಯಕರ್ತ ಎಂದು ತನ್ನ ಫೇಸ್ಬುಕ್ ನಲ್ಲಿ ಬರೆದುಕೊಂಡಿರುವ ಎಂ ಕುಮಾರಸ್ವಾಮಿ ಎಂಬುವವರು ಏಪ್ರಿಲ್ 07ರಂದು “ಗುಜರಾತ್ ಹತ್ಯಾಕಾಂಡದಲ್ಲಿ ಕರಸೇವಕರು ಮಾಡಿದ ರೀತಿಯಲ್ಲಿ ನಾವು ತಯಾರಾಗಬೇಕು” ಎಂಬಂತಹ ಹೇಳಿಕೆಗಳನ್ನು ಫೇಸ್ಬುಕ್ನಲ್ಲಿ ಪೋಸ್ಟ್ ಮಾಡಿದ್ದರೆ.
ಇದನ್ನು ಗಮನಿಸಿದ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಜಿಲ್ಲಾ ಕಾರ್ಯದರ್ಶಿ ಸೈಯದ್ ಸಾದತ್ ಎಂಬುವವರು ಏಪ್ರಿಲ್ 10ರಂದು ಚಿತ್ರದುರ್ಗದ ನಗರ ಪೊಲೀಸ್ ಠಾಣೆಯಲ್ಲಿ ಕೋಮುದ್ವೇಷ ಹರಡುತ್ತಿದ್ದಾರೆ ಎಂದು ಆರೋಪಿಸಿ ದೂರು ದಾಖಲಿಸಿದ್ದರು. ಆರೋಪಿಯ ಫೇಸ್ಬುಕ್ ಸ್ಕ್ರೀನ್ ಶಾಟ್ಗಳನ್ನು ಕೂಡ ಲಗತ್ತಿಸಿದ್ದರು.
ಇದರನ್ವಯ ಪೊಲೀಸರು ಮೊ.ನಂ 92/2020ರಂತೆ ಐಪಿಸಿ ಕಲಂ 153(A), 505(1)C, 505(2), 188, 269, 270 ರ ಅಡಿಯಲ್ಲಿ ಜಾಮೀನು ರಹಿತ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಎಂದಿನಂತೆ ಫೇಸ್ಬುಕ್ ನೋಡುತ್ತಿರುವಾಗ ಕುಮಾರಸ್ವಾಮಿಯವರ ಅನ್ಯ ಧರ್ಮದ ವಿರುದ್ಧದ ಕೋಮುಪ್ರಚೋದಿತ ಪೋಸ್ಟ್ಗಳು ಕಾಣಿಸಿಕೊಂಡವು. ಹಾಗಾಗಿ ಅವುಗಳ ಸ್ಕ್ರೀನ್ ತೆಗೆದುಕೊಂಡು ಪೊಲೀಸರಿಗೆ ದೂರು ಸಲ್ಲಿಸಿದೆ. ಆ ಪೋಸ್ಟ್ಗಳು ಅತ್ಯುಗ್ರವಾಗಿದ್ದರಿಂದ ಕೂಡಲೇ ಪೊಲೀಸರು ದೂರು ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಒಪ್ಪಿಸಿದ್ದಾರೆ. ಈ ಘಟನೆ ಇತರರಿಗೂ ಪಾಠವಾಗಬೇಕಿದೆ .
– ಸೈಯದ್ ಸಾದತ್