ಚಂದ್ರಶೇಖರ್ ಆಜಾದ್ ಹಠಾತ್ ನೇತೃತ್ವದಲ್ಲಿ ಭಾರೀ ಪ್ರತಿಭಟನೆ….!
ಎಲ್ಲರ ಕೈಯಲ್ಲಿ ಸಂವಿಧಾನದ ಪೀಠಿಕೆ ಮತ್ತು ಬಾಬಾ ಸಾಹೇಬ್ ಅಂಬೇಡ್ಕರ್ರವರ ಫೋಟೊಗಳು. ಎಲ್ಲರ ಬಾಯಲ್ಲಿ ಜೈಭೀಮ್ ಘೋಷಣೆಗಳು.. ಆರಂಭದಲ್ಲಿ 144 ಸೆಕ್ಷನ್ ಹಾಕಿ ಪ್ರತಿಭಟನೆಗೆ ಅನುಮತಿ ನಿರಾಕರಿಸಿದ್ದ ಪೊಲೀಸರಿಂದ ಆನಂತರ ಮೌನವಾಗಿ ಅನುಮತಿ, ಭೀಮ್ ಆರ್ಮಿ ಮುಖ್ಯಸ್ಥ ಚಂದ್ರಶೇಖರ್ ಆಜಾದ್ ಹಠಾತ್ ಪ್ರತ್ಯಕ್ಷ. ಅವರ ನೇತೃತ್ವದಲ್ಲಿ ಭಾರೀ ಪ್ರತಿಭಟನೆ.. ಇದು ದೆಹಲಿಯಲ್ಲಿ ಪೌರತ್ವ ಕಾಯ್ದೆ ವಿರೋಧಿಸಿ ಕಂಡಬಂದ ದೃಶ್ಯಗಳು.
ಭೀಮ್ ಆರ್ಮಿ ಮುಖ್ಯಸ್ಥ ಚಂದ್ರಶೇಖರ್ ಆಜಾದ್ ರವರು ಸಂವಿಧಾನದ ಪೀಠಿಕೆಯನ್ನು ಓದುವ ಮೂಲಕ ಜಮಾ ಮಸೀದಿಯಿಂದ ಜಂತರ್ ಮಂತರ್ವರೆಗಿನ ಪೌರತ್ವ ಕಾಯ್ದೆ ತಿದ್ದುಪಡಿ ವಿರೋಧಿಸಿ ಬೃಹತ್ ಪ್ರತಿಭಟನಾ ಮೆರವಣಿಗೆಗೆ ಚಾಲನೆ ನೀಡಿದರು. ಭಾರಿ ಪೊಲೀಸ್ರ ಉಪಸ್ಥಿತಿಯ ನಡುವೆಯೂ ನಿಷೇಧಾಜ್ಞೆಯನ್ನು ಮುರಿದ ಅವರು ಮೆರವಣಿಗೆ ಆರಂಭಿಸಿದ್ದಾರೆ.
#WATCH Delhi: Protest at Jama Masjid against #CitizenshipAmendmentAct Bhim Army Chief Chandrashekhar Azad also present. Azad had been earlier denied permission for a protest march from Jama Masjid to Jantar Mantar pic.twitter.com/uXK1tvO4CT
— ANI (@ANI) December 20, 2019
“ಜೈ ಭೀಮ್” ಘೋಷಣೆಗಳು ಜಮಾ ಮಸೀದಿಯಲ್ಲಿ ಮುಗಿಲು ಮುಟ್ಟಿವೆ. ಸಾವಿರಾರು ಜನ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರಿಂದ ಅವರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸಪಡುತ್ತಿದ್ದಾರೆ. ಮೆರವಣಿಗೆ ಮುಂದೆ ಸಾಗಲು ಬಿಡದ ಪೊಲೀಸರು ಸದ್ಯ ಜಮಾ ಮಸೀದಿಯ ಬಾಗಿಲು ಬಂದ್ ಮಾಡಿದ್ದಾರೆ ಎನ್ನಲಾಗಿದೆ.
ಇದಕ್ಕೂ ಮೊದಲು ಭೀಮ್ ಆರ್ಮಿ ಮುಖ್ಯಸ್ಥ ಚಂದ್ರಶೇಖರ್ ಆಜಾದ್ ರವರನ್ನು ಬಂಧಿಸಲಾಗಿದೆ. ಇಂದಿನ ಪ್ರತಿಭಟನೆಯನ್ನು ಮುಂದೂಡಲಾಗಿದೆ ಎಂದು ಕೆಲವು ಟಿವಿ ವಾಹಿನಿಗಳು ಪ್ರಸಾರ ಮಾಡಿದ್ದವು. ಇದನ್ನು ನಿರಾಕರಿಸಿದ ಚಂದ್ರಶೇಖರ್ ದಯವಿಟ್ಟು ನನ್ನ ಬಂಧನದ ವದಂತಿಗಳನ್ನು ನಿರ್ಲಕ್ಷಿಸಿ. ನಾನು ಜಮಾ ಮಸೀದಿಯನ್ನು ತಲುಪುತ್ತಿದ್ದೇನೆ ಎಂದು ಟ್ವೀಟ್ ಮಾಡಿದ್ದರು.
ಅವರ ಸಹಾಯಕ ಕುಷ್ ಸಹ ’ಸುದ್ದಿ ವಾಹಿನಿಗಳು ತಮ್ಮ ಸುದ್ದಿಗಳನ್ನು ಸರಿಪಡಿಸಬೇಕು ಮತ್ತು ನಕಲಿ ಸುದ್ದಿಗಳನ್ನು ಹರಡಬಾರದು.ಭೀಮ್ ಆರ್ಮಿಯ ಮುಖ್ಯಸ್ಥ ಚಂದ್ರಶೇಖರ್ ಆಜಾದ್ ಅವರನ್ನು ಬಂಧಿಸಲಾಗಿಲ್ಲ. ಮಾರ್ಚ್ 1 ಗಂಟೆಗೆ ಜಮಾ ಮಸೀದಿಯಿಂದ ಮೆರವಣಿಗೆ ಹೊರಡಲಿದೆ’ ಎಂದು ಸ್ಪಷ್ಟಪಡಿಸಿದ್ದರು.
ಸದ್ಯ ಜಮಾ ಮಸೀದಿಯಲ್ಲಿಯೇ ಪ್ರತಿಭಟನಾಕಾರರು ಪ್ರತಿಭಟನೆಯನ್ನು ಆರಂಭಿಸಿದ್ದಾರೆ. ಕಪ್ಪು ಬ್ಯಾಂಡ್ ಧರಿಸಿ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗುತ್ತಿದ್ದಾರೆ. ಪೊಲೀಸರು ದ್ರೋನ್ ಕ್ಯಾಮರಗಳ ಮೂಲಕ ಪ್ರತಿಭಟನಾಕಾರರ ಮೇಲೆ ನಿಗಾ ಇರಿಸಿದ್ದಾರೆ. ದೆಹಲಿಯ ಹಲವು ಭಾಗಗಳಲ್ಲಿ ಇಂಟರ್ನೆಟ್ ಸ್ಥಗಿತಗೊಳಿಸಲಾಗಿದೆ.