ಚಲಿಸುತ್ತಿದ್ದ ಮೂರು ಲಾರಿಗಳ ನಡುವೆ ಸರಣಿ ಅಪಘಾತ : ಓರ್ವ ಚಾಲಕ ಸಾವು
ಚಲಿಸುತ್ತಿದ್ದ ಮೂರು ಲಾರಿಗಳ ನಡುವೆ ಸರಣಿ ಅಪಘಾತ ಸಂಭವಿಸಿದ ಪರಿಣಾಮ ಒಬ್ಬರು ಮೃತಪಟ್ಟರುವ ದುರ್ಘಟನೆ ತಾಲ್ಲೂಕಿನ ಚಿಕ್ಕಗೊಂಡನಹಳ್ಳಿ ಬಳಿಯ ಮಂಗಳೂರು-ಸೊಲ್ಲಾಪುರ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ.
ಗದಗ ಜಿಲ್ಲೆಯ ಹಳ್ಳಿಗುಡಿಯಿಂದ ಈರುಳ್ಳಿ ತುಂಬಿಕೊಂಡು ಬೆಂಗಳೂರಿಗೆ ಹೋಗುತ್ತಿದ್ದ ಲಾರಿಗೆ, ಹೊಸಪೇಟೆಯಿಂದ ಚಿತ್ರದುರ್ಗಕ್ಕೆ ಬರುತಿದ್ದ ಕ್ಯಾಂಟರ್ ಹಾಗೂ ಚಿತ್ರದುರ್ಗದಿಂದ ಹೋಗುತ್ತಿದ್ದ ಮತ್ತೊಂದು ಮಿನಿ ಲಾರಿ ಡಿಕ್ಕಿ ಹೊಡೆದಿದೆ. ಘಟನೆಯಲ್ಲಿ ಹರಿಯಾಣ ಮೂಲದ ಲಾರಿ ಚಾಲಕ ಸಾವನ್ನಪ್ಪಿದ್ದು, ಮೃತನ ಹೆಸರು ಈವರೆಗೆ ಪತ್ತೆಯಾಗಿಲ್ಲ.
ಲಾರಿಯ ಚಾಲಕ ಸೇರಿದಂತೆ ಏಳು ರೈತರು ಲಾರಿಯಲ್ಲೇ ಸಿಲುಕಿದ್ದು, ತಲೆ ಹಾಗೂ ಕೈಕಾಲುಗಳಿಗೆ ಗಂಭೀರ ಗಾಯಗಳಾಗಿವೆ. ಪೊಲೀಸರು ಹರಸಾಹಸ ಪಟ್ಟು ಲಾರಿಯಲ್ಲಿ ಸಿಲುಕಿದ್ದವರನ್ನು ರಕ್ಷಣೆ ಮಾಡಿದ್ದಾರೆ.
ಗಾಯಾಳುಗಳನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಈ ಸಂಬಂಧ ತುರುವನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.