ಚೆನ್ನೈ ಕಂಪ್ಲೀಟ್ ಲಾಕ್ಡೌನ್; ನೆರೆಯ ಜಿಲ್ಲೆಗಳಲ್ಲೂ ಲಾಕ್ಡೌನ್ ಘೋಷಿಸಿದ ಸರ್ಕಾರ
ಸಾರ್ವಜನಿಕ ಆರೋಗ್ಯ ತಜ್ಞರ ಸಮಿತಿಯ ಸಲಹೆಗಳ ಆಧಾರದ ಮೇಲೆ ಚೆನ್ನೈ, ತಿರುವಳ್ಳೂರು, ಕಾಂಚೀಪುರಂ ಮತ್ತು ಚೆಂಗಲ್ಪಟ್ಟುಗಳಲ್ಲಿ ಜೂನ್ 19 ರಿಂದ ಸಂಪೂರ್ಣ ಲಾಕ್ಡೌನ್ ಮಾಡಲಾಗುವುದು ಎಂದು ತಮಿಳುನಾಡು ಸರ್ಕಾರ ಸೋಮವಾರ (ಜೂನ್ 15) ಘೋಷಿಸಿದೆ.
ಜೂನ್ 30 ರವರೆಗೆ ಸಂಪೂರ್ಣ ಲಾಕ್ಡೌನ್ ಜಾರಿಯಲ್ಲಿರುತ್ತದೆ. ಈ ವೇಳೆಯಲ್ಲಿ ಕೆಲವು ವಿನಾಯತಿಗಳನ್ನು ನೀಡಲಾಗಿದೆ ಎಂದು ಸರ್ಕಾರ ಹೇಳಿದೆ.
- ಆಸ್ಪತ್ರೆಗಳು 24 ಗಂಟೆಗಳ ಕಾಲವೂ ಕಾರ್ಯನಿರ್ವಹಿಸುತ್ತವೆ.
- ರಾಜ್ಯ ಮತ್ತು ಕೇಂದ್ರ ಸರ್ಕಾರಿ ಕಚೇರಿಗಳು ಶೇಕಡಾ 33 ರಷ್ಟು ಉದ್ಯೋಗಿಗಳೊಂದಿಗೆ ಕಾರ್ಯನಿರ್ವಹಿಸಬಹುದು.
- ಕಂಟೈನ್ಮೆಂಟ್ ವಲಯಗಳಲ್ಲಿ ವಾಸಿಸುವ ಸಿಬ್ಬಂದಿಗಳು ಕಚೇರಿಗೆ ಬರಬೇಕಾಗಿಲ್ಲ. ಆದರೆ ಪೂರ್ವ ಅನುಮತಿ ಪಡೆಯಬೇಕು.·
- ಬ್ಯಾಂಕುಗಳು ಜೂನ್ 29 ಮತ್ತು ಜೂನ್ 30 ರಂದು ಮಾತ್ರ ತೆರೆಯಲಿದ್ದು, ಶೇಕಡಾ 33 ರಷ್ಟು ಉದ್ಯೋಗಿಗಳು ಮಾತ್ರ ಕಾರ್ಯನಿರ್ವಹಿಸುತ್ತಾರೆ.
- ಕಂಟೈನ್ಮೆಂಟ್ ವಲಯಗಳನ್ನು ಹೊರತುಪಡಿಸಿ ಎಲ್ಲಾ ಪ್ರದೇಶಗಳಲ್ಲಿ ಬೆಳಿಗ್ಗೆ 8 ರಿಂದ ಮಧ್ಯಾಹ್ನ 2 ರವರೆಗೆ ಪಡಿತರ ಅಂಗಡಿಗಳು ಕಾರ್ಯನಿರ್ವಹಿಸಲಿವೆ.
- ದಿನಸಿ ಮತ್ತು ತರಕಾರಿಗಳನ್ನು ಮಾರಾಟ ಮಾಡುವ ಅಂಗಡಿಗಳು ಬೆಳಿಗ್ಗೆ 6 ರಿಂದ ಮಧ್ಯಾಹ್ನ 2 ರವರೆಗೆ ತೆರೆಯಲು ಅವಕಾಶ ನೀಡಲಾಗಿದೆ.
- ಬೆಳಿಗ್ಗೆ 6 ರಿಂದ ರಾತ್ರಿ 8 ರ ನಡುವಿನ ಹೋಟೆಲ್ಗಳು ತೆರೆಯಲಿದ್ದು, ಪಾರ್ಸಲ್ಗೆ ಮಾತ್ರ ಅವಕಾಶವಿರುತ್ತದೆ.
- ಉದ್ಯೋಗದಾತರು ಕಾರ್ಮಿಕರಿಗೆ ಉಳಿಯಲು ಸ್ಥಳವನ್ನು ಒದಗಿಸಿದರೆ ಮಾತ್ರ ನಿರ್ಮಾಣ ಕಾರ್ಯಗಳಿಗೆ ಅನುಮತಿ. ಚೆನ್ನೈನ ಕಾರ್ಮಿಕರು ಆರ್ಟಿಪಿಸಿಆರ್ ಪರೀಕ್ಷೆಯನ್ನು ಕಡ್ಡಾಯವಾಗಿ ಮಾಡಿಸಬೇಕು.
ಅಲ್ಲದೆ, ಆಟೋ ರಿಕ್ಷಾ ಮತ್ತು ಟ್ಯಾಕ್ಸಿಗಳನ್ನು ಸರ್ಕಾರ ನಿಷೇಧಿಸಿದೆ. ನಾಲ್ಕು ಜಿಲ್ಲೆಗಳಲ್ಲಿ, ಎಲ್ಲಾ ಪಡಿತರ ಚೀಟಿದಾರರಿಗೆ ₹ 1,000 ಪರಿಹಾರ ಮತ್ತು ಅಸಂಘಟಿತ ವಲಯದ ಕಾರ್ಮಿಕರಿಗೆ ₹ 1,000 ಪರಿಹಾರ ನೀಡಲಾಗುವುದು ಎಂದು ಸರ್ಕಾರ ಘೋಷಿಸಿದೆ.