ದಿಟ್ಟ ಪ್ರತಿಭಟನೆಗಳಿಗೆ ಮಣಿಯುತ್ತಿರುವ ಸರಕಾರ : ಪೌರತ್ವ ಕಾಯ್ದೆಯಲ್ಲಿ ಬದಲಾವಣೆ- ಶಾ…
ಪೌರತ್ವ ತಿದ್ದುಪಡಿ ಮಸೂದೆಯು ಕಾಯ್ದೆಯಾಗಿ ಬದಲಾದ ನಂತರ ಉದ್ಭವಿಸಿರುವ ಭಾರೀ ಪ್ರತಿಭಟನೆಗಳು ಕೇಂದ್ರ ಸರ್ಕಾರಕ್ಕೆ ದೊಡ್ಡ ತಲೆನೋವಾಗಿ ಪರಿಣಮಿಸಿವೆ. ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇರುವ ಪ್ರತಿಭಟನೆಗಳು ಒಂದೆಡೆಯಾದರೆ, ಇನ್ನೊಂದೆಡೆ ದೇಶ-ವಿದೇಶದ ಗಣ್ಯರು ಸೇರಿದಂತೆ ಬಿಜೆಪಿಯ ಮಿತ್ರಪಕ್ಷಗಳೇ ಕಾಯ್ದೆಯ ವಿರುದ್ಧ ಮಾತನಾಡಲು ಶುರುಮಾಡಿವೆ.
ಎಲ್ಲಕ್ಕಿಂತ ಹೆಚ್ಚಾಗಿ ಬಿಜೆಪಿ ನೆಲೆ ಕಂಡುಕೊಳ್ಳಲು ಯತ್ನಿಸುತ್ತಿರು ಈಶಾನ್ಯ ಭಾರತದಲ್ಲಿ ಪ್ರತಿರೋಧ ಮುಗಿಲು ಮುಟ್ಟಿದೆ. ಅಸ್ಸಾಂನಲ್ಲಿ ಅಧಿಕಾರ ಹಂಚಿಕೊಂಡಿರುವ ಬಿಜೆಪಿಯ ಮಿತ್ರಪಕ್ಷ ಎಜಿಪಿ ಕಾಯ್ದೆ ವಿರೋಧಿಸಿ ಸುಪ್ರೀಂ ಮೆಟ್ಟಿಲೇರುವ ಸೂಚನೆ ನೀಡಿದೆ. ಬಿಜೆಪಿಯ ಮುಖಂಡರು ಸರಣಿ ರಾಜೀನಾಮೆ ನೀಡುತ್ತಿದ್ದಾರೆ. ಇದೆಲ್ಲವೂ ಅಮಿತ್ ಶಾ ಮತ್ತು ನರೇಂದ್ರ ಮೋದಿಯವರನ್ನು ಕಂಗೆಡಿಸಿದೆ. ಹಾಗಾಗಿ ಗೃಹ ಸಚಿವ ಅಮಿತ್ ಶಾ ಕಾಯ್ದೆಯಲ್ಲಿ ಬದಲಾವಣೆ ತರುವುದಾಗಿ ಸುಳಿವು ನೀಡಿದ್ದಾರೆ.
ನಾವು ಇದರ ಬಗ್ಗೆ ಮಾತನಾಡುತ್ತೇವೆ, ಪೌರತ್ವ ತಿದ್ದುಪಡಿ ಕಾಯ್ದೆಯಲ್ಲಿ (ಸಿಎಎ) ಕೆಲವು ಬದಲಾವಣೆಗಳಾಗಬಹುದು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ. ಅಸ್ಸಾಂ ಮತ್ತು ಈಶಾನ್ಯದ ಇತರ ರಾಜ್ಯಗಳ ಜನರಿಗೆ ಅವರ ಸಂಸ್ಕೃತಿ, ಭಾಷೆ, ಸಾಮಾಜಿಕ ಗುರುತು ಮತ್ತು ರಾಜಕೀಯ ಹಕ್ಕುಗಳ ಮೇಲೆ ದುಷ್ಪರಿಣಾಮಗಳು ಬೀರುವುದಿಲ್ಲ ಎಂದು ಭರವಸೆ ನೀಡಲು ಬಯಸುತ್ತೇನೆ ಎಂದು ಅವರು ಹೇಳಿದ್ದಾರೆ ಎಂದು ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ.
ಈಶಾನ್ಯ ರಾಜ್ಯಗಳಲ್ಲಿ ಶನಿವಾರ ಹಿಂಸಾಚಾರ ಮುಂದುವರೆದಿದ್ದು, ಹಲವಾರು ಅಗ್ನಿಶಾಮಕ ಘಟನೆಗಳು ನಡೆದಿದ್ದು, ಪ್ರತಿಭಟನೆಯಲ್ಲಿ ಮೂವರು ಸಾವನಪ್ಪಿದ್ದಾರೆ ಮತ್ತು ಒಬ್ಬ ವ್ಯಕ್ತಿ ಹತ್ಯೆ ಮಾಡಲಾಗಿದೆ ಎಂಬ ವರದಿಗಳು ಬಂದ ನಂತರ ಅಮಿತ್ ಶಾ ಮೇಲಿನ ಹೇಳಿಕೆ ನೀಡಿದ್ದಾರೆ.
“ಈಶಾನ್ಯ ರಾಜ್ಯದ ಜನರನ್ನು ರಕ್ಷಿಸುವುದು ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಸರ್ಕಾರದ ಜವಾಬ್ದಾರಿಯಾಗಿದೆ” ಎಂದು ವರು ಜಾರ್ಖಂಡ್ನ ಗಿರಿಡಿಹ್ನಲ್ಲಿ ಶನಿವಾರ ನಡೆದ ಚುನಾವಣಾ ರ್ಯಾಲಿಯಲ್ಲಿ ಹೇಳಿದ್ದಾರೆ.
ಪೌರತ್ವ ತಿದ್ದುಪಡಿ ಕಾನೂನು ಜಾರಿಯಾದ ನಂತರ ತಮ್ಮ ಮೊದಲ ಚುನಾವಣಾ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಅಮಿತ್ ಶಾ, ಈ ವಿಷಯದ ಬಗ್ಗೆ ಚರ್ಚಿಸಲು ಮೇಘಾಲಯದ ಮುಖ್ಯಮಂತ್ರಿ ಕಾನ್ರಾಡ್ ಸಂಗ್ಮಾ ಮತ್ತು ಅವರ ಕ್ಯಾಬಿನೆಟ್ ಮಂತ್ರಿಗಳು ಶುಕ್ರವಾರ ಭೇಟಿಯಾಗಿದ್ದರು. “ಮೇಘಾಲಯದಲ್ಲಿ ಸಮಸ್ಯೆ ಇದೆ ಎಂದು ಅವರು ಹೇಳಿದರು ಎಂದು ತಿಳಿಸಿದ್ದಾರೆ.
ಯಾವುದೇ ಸಮಸ್ಯೆ ಇಲ್ಲ ಎಂದು ಅವರಿಗೆ ಅರ್ಥಮಾಡಿಸಲು ನಾನು ಪ್ರಯತ್ನಿಸಿದೆ. ಆದರೂ, ಕಾಯ್ದೆಯಲ್ಲಿ ಕೆಲವು ಬದಲಾವಣೆಗಳು ಬೇಕೆಂದ ಅವರು ನನ್ನನ್ನು ವಿನಂತಿಸಿದರು. ಕ್ರಿಸ್ಮಸ್ ನಂತರ ಬಿಡುವಾಗಲಿದ್ದು ಆಗ ನನ್ನ ಬಳಿಗೆ ಬರಲು ನಾನು ಸಂಗ್ಮಾ ಜಿ ಅವರನ್ನು ಕೇಳಿದ್ದೇನೆ ಮತ್ತು ಮೇಘಾಲಯಕ್ಕೆ ರಚನಾತ್ಮಕ ಪರಿಹಾರದ ಬಗ್ಗೆ ನಾವು ಯೋಚಿಸಬಹುದು. ಯಾರಿಗೂ ಭಯಪಡಬೇಕಾಗಿಲ್ಲ ಎಂದು ಅಮಿತ್ ಶಾ ಹೇಳಿದ್ದಾರೆ.
ಆನಂತರ ಅಮಿತ್ ಶಾರವರು ತಮ್ಮ ಭಾಷಣದುದ್ದಕ್ಕೂ ಕಾಂಗ್ರೆಸ್ ಪಕ್ಷವನ್ನು ತೀವ್ರವಾಗಿ ಟೀಕಿಸಿದ್ದಾರೆ. ಟ್ರಿಪಲ್ ತಲಾಖ್ ನಿಷೇಧ, 370 ನೇ ವಿಧಿಯನ್ನು ರದ್ದುಪಡಿಸುವುದು ಮತ್ತು ಧಾರ್ಮಿಕವಾಗಿ ಕಿರುಕುಳಕ್ಕೊಳಗಾದ ಅಲ್ಪಸಂಖ್ಯಾತರಿಗೆ ಪೌರತ್ವ ನೀಡುವ ಪ್ರಮುಖ ಕ್ರಮಗಳನ್ನು ಅಲ್ಪಸಂಖ್ಯಾತ ವಿರೋಧಿಗಳೆಂದು ಬ್ರಾಂಡ್ ಮಾಡುವ ಅಭ್ಯಾಸವನ್ನು ಕಾಂಗ್ರೆಸ್ ಮಾಡುತ್ತಿದೆ, ಇದು ವೋಟ್ ಬ್ಯಾಂಕ್ ರಾಜಕೀಯ ಎಂದು ಅಮಿತ್ ಶಾ ಆರೋಪಿಸಿದ್ದಾರೆ. ಆ ಮೂಲಕ ತಾವು ಪೌರತ್ವ ಕಾಯ್ದೆಯಲ್ಲಿ ತಿದ್ದುಪಡಿ ತಂದರೂ ಸಹ ಅದು ಕಾಂಗ್ರೆಸ್ ಅನುಕೂಲಕರವಾಗಬಾರದೆಂಬ ಎಚ್ಚರಿಕೆಯನ್ನು ಅಮಿತ್ ಶಾ ವಹಿಸದಂತೆ ಕಾಣುತ್ತಿದೆ.
ಏನೇ ಆದರೂ ಪೌರತ್ವ ತಿದ್ದುಪಡಿ ಕಾಯ್ದೆಯ ವಿರುದ್ಧ ದೇಶಾದ್ಯಂತ ಹೋರಾಟ ನಡೆಸುತ್ತಿರುವ ಜನರಿಗೆ ಕೇಂದ್ರ ಸರ್ಕಾರ ಸ್ವಲ್ಪ ಮಟ್ಟಿಗೆ ಮಣಿದ ಹಾಗೆ ಕಾಣುತ್ತಿದೆ. ಪ್ರತಿಭಟನೆಗಳು ಮುಂದುವರಿದಿದ್ದು ಕೇಂದ್ರ ಸರ್ಕಾರ ಏನು ಮಾಡಲಿದೆ ಎಂಬುದು ಸ್ವಲ್ಪ ದಿನದಲ್ಲಿಯೇ ಗೊತ್ತಾಗಲಿದೆ.