ದೆಹಲಿ ಹಿಂಸಾಚಾರ ವಿಚಾರಣೆ ಮಾರ್ಚ್ 12ಕ್ಕೆ ಮುಂದೂಡಿದ ದೆಹಲಿ ಹೈಕೋರ್ಟ್
ದೆಹಲಿ ಹಿಂಸಾಚಾರ ಮತ್ತು ರಾಜಕೀಯ ಮುಖಂಡರ ದ್ವೇಷಪೂರಿತ ಭಾಷಣಕ್ಕೆ ಸಂಬಂಧಿಸಿದಂತೆ ವಿಚಾರಣೆಯನ್ನು ಮಾರ್ಚ್ 12ಕ್ಕೆ ಮುಂದೂಡಿರುವ ದೆಹಲಿ ಹೈಕೋರ್ಟ್, ಅದರ ಒಳಗಾಗಿ ಪ್ರತಿಕ್ರಿಯೆ ಸಲ್ಲಿಸಲು ಕೇಂದ್ರ ಸರ್ಕಾರಕ್ಕೆ ಸೂಚಿಸಿದೆ.
ಈಶಾನ್ಯ ದೆಹಲಿಯ ಹಿಂಸಾಚಾರಕ್ಕೆ ಬಿಜೆಪಿ ಮುಖಂಡರು ಮಾಡಿದ ಪ್ರಚೋದನಕಾರಿ ದ್ವೇಷಪೂರಿತ ಭಾಷಣಗಳು ಕಾರಣ, ಅವರ ವಿರುದ್ಧ ಎಫ್ ಐ ಆರ್ ದಾಖಲಿಸಿಕೊಳ್ಳಬೇಕು ಎಂದು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯನ್ನು ದೆಹಲಿ ಹೈಕೋರ್ಟ್ ಮುಖ್ಯ ನ್ಯಾಯಾಧೀಶ ಡಿ ಎನ್ ಪಟೇಲ್ ಮತ್ತು ನ್ಯಾಯಮೂರ್ತಿ ಸಿ ಹರಿ ಶಂಕರ್ ಒಳಗೊಂಡ ಪೀಠ ಆಲಿಸಿತ್ತು.
ಕಳೆದ ಬುಧವಾರ ಇದೇ ವಿಚಾರವಾಗಿ ಸುಪ್ರೀಂ ಕೋರ್ಟ್ ನಲ್ಲಿ ನಡೆದ ವಿಚಾರಣೆಯಲ್ಲಿ, ಈ ಹಿಂದೆ ಈ ಪ್ರಕರಣದ ವಿಚಾರಣೆಯನ್ನು ಒಂದು ತಿಂಗಳ ಕಾಲ ಮುಂದೂಡಿದ್ದು ಸಮರ್ಥನೀಯವಲ್ಲ ಎಂದಿತ್ತಲ್ಲದೆ, ಶುಕ್ರವಾರ ವಿಚಾರಣೆ ಮಾಡಲು ಹೈಕೋರ್ಟ್ ಗೆ ಸೂಚಿಸಿತ್ತು.
ಬಿಜೆಪಿ ಮುಖಂಡರಾದ ಅನುರಾಗ್ ಠಾಕೂರ್, ಪರ್ವೇಶ್ ವರ್ಮ ಮತ್ತು ಕಪಿಲ್ ಮಿಶ್ರಾ ವಿರುದ್ಧ ಎಫ್ ಐ ಆರ್ ದಾಖಲಿಸುವಂತೆ ಮೊದಲು ಅರ್ಜಿ ಹಾಕಿದ್ದು ನಾಗರಿಕ ಹಕ್ಕುಗಳ ಕಾರ್ಯಕರ್ತ ಹರ್ಷ್ ಮಂದರ್. ಹಿಂಸಾಚಾರದ ಬಗ್ಗೆ ಸ್ವತಂತ್ರ ತನಿಖೆಗೂ ಅವರು ಅರ್ಜಿಯಲ್ಲಿ ಕೋರಿದ್ದರು.
ಮತ್ತೊಂದು ಪ್ರಕರಣದ ವಿಚಾರಣೆಯಲ್ಲಿ, ಕಳೆದ ವಾರ ದೆಹಲಿ ಹಿಂಸಾಚಾರದಲ್ಲಿ ಪ್ರಾಣ ಕಳೆದುಕೊಂಡವರ ಶವಪರೀಕ್ಷೆ ಮಾಡುವ ಎಲ್ಲ ಆಸ್ಪತೆಗಳು ಅದರ ವಿಡಿಯೋ ಮಾಡಬೇಕೆಂದು ಹೈಕೋರ್ಟ್ ಸೂಚಿಸಿದೆ.
ನ್ಯಾಯಮೂರ್ತಿಗಳಾದ ಸಿದ್ಧಾರ್ಥ್ ಮೃದುಲ್ ಮತ್ತು ಐ ಎಸ್ ಮೆಹ್ತಾ ಮೃತರ ದೇಹದ ಡಿ ಎನ್ ಎ ಶೇಖರಿಸಿ ಮತ್ತು ಗುರುತು ಪತ್ತೆ ಹಚ್ಚದ ಶವಗಳನ್ನು ಮುಂದಿನ ವಿಚಾರಣೆಯವರೆಗೆ ಸಂರಕ್ಷಿಸುವಂತೆ ಅಧಿಕಾರಿಗಳಿಗೆ ಆದೇಶಿಸಿದೆ.
ಗಲಭೆ ಸಮಯದಲ್ಲಿ ಕಾಣೆಯಾಗಿರುವ ತನ್ನ ಬಂಧು ವ್ಯಕ್ತಿಯ ಬಗ್ಗೆ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಿಚಾರಣೆ ನಡೆಸಿತ್ತು. ದೆಹಲಿ ಹಿಂಸಾಚಾರದಲ್ಲಿ ಸುಮಾರು 50ಕ್ಕೂ ಹೆಚ್ಚು ಜನ ಮೃತಪಟ್ತಿದ್ದು 500ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ.