‘ದ್ವೇಷದ ರಾಜಕಾರಣ ಆರೋಪ ಆಡಳಿತ ಪಕ್ಷದ ಮೇಲೆ ಬರುವುದು ಸಹಜ’ ಕೆ.ಎಸ್.ಈಶ್ವರಪ್ಪ
ಬಿಜೆಪಿ ನಾಯಕರ ಮೇಲೆ ಸೇಡಿನ ರಾಜಕಾರಣದ ಆರೋಪ ವಿಚಾರವಾಗಿ ಸ್ಪಂದಿಸಿದ ಶಿವಮೊಗ್ಗದಲ್ಲಿ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ, ಇವೆಲ್ಲವೂ ರಾಜಕಾರಣದಲ್ಲಿ ಇದ್ದದ್ದೆ. ನಾವು ಕೂಡ ಬಹಳಷ್ಠು ಈ ಹಿಂದೆ ಅನುಭವಿಸಿದ್ದೇವೆ.
ದ್ವೇಷದ ರಾಜಕಾರಣ ಆರೋಪ ಆಡಳಿತ ಪಕ್ಷದ ಮೇಲೆ ಬರುವುದು ಸಹಜ. ಕಾಂಗ್ರೆಸ್ ಜೆಡಿಎಸ್ ಸರ್ಕಾರ ಅಧಿಕಾರದಲ್ಲಿದ್ದಾಗ ನಾವೂ ಕೂಡ ಅನುಭವಿಸಿದ್ದೇವೆ. ಡಿ.ಕೆ.ಶಿವಕುಮಾರ್ ಅವರನ್ನು ಇಡಿ ಅವರು ವಶಕ್ಕೆ ಪಡೆದಿದ್ದಾರೆ. ವಿಚಾರಣೆಯನ್ನೂ ನಡೆಸಲಿದ್ದಾರೆ. ಯಾವುದು ಸತ್ಯ, ಯಾವುದು ಅಸತ್ಯ, ಯಾವುದು ನ್ಯಾಯ, ಯಾವುದು ಅನ್ಯಾಯ ಎಂಬುದು ನ್ಯಾಯಾಲಯ ತೀರ್ಮಾನ ಮಾಡಲಿದೆ. ಇದನ್ನು ರಾಜ್ಯದ ಆರುವರೆ ಕೋಟಿ ಜನರು ಗಮನಿಸುತ್ತಿದ್ದಾರೆ.
ಡಿ.ಕೆ.ಶಿ. ಅವರ ತಾಯಿ ಕಣ್ಣೀರು ಹಾಕಿದ್ದನ್ನು ನಾನು ನೋಡಿದ್ದೇನೆ. ಈ ಪರಿಸ್ಥಿತಿ ಯಾರಿಗೂ ಬರಬಾರದು. ನಮ್ಮಲ್ಲಿ ಸಂವಿಧಾನ ಇರುವುದರಿಂದ ಯಾರು ತಪ್ಪಿತಸ್ಥರಲ್ಲ ಅವರಿಗೆ, ನ್ಯಾಯ ಸಿಕ್ಕೆ ಸಿಗುತ್ತೆ ಎಂಬ ವಿಶ್ವಾಸ ನನಗಿದೆ ಎಂದರು.
ಇನ್ನೂ ನೆರೆ ನಿಭಾಯಿಸುವಲ್ಲಿ ನಮ್ಮ ಸರ್ಕಾರ ಶಕ್ತಿ ಮೀರಿ ಪ್ರಯತ್ನಿಸುತ್ತಿದೆ. ರಾಜ್ಯದಲ್ಲಿ ಅತಿ ಹೆಚ್ಚು ಪ್ರವಾಹ ಬಂದಿದೆ. ಇದನ್ನು ಸರ್ವಶಕ್ತರಾಗಿ ನಿಭಾಯಿಸಲು ನಮ್ಮ ಅಧಿಕಾರಿಗಳು ಸಂಪೂರ್ಣವಾಗಿ ತಯಾರಾಗಿದ್ದಾರೆ. ಜನರು ಕೂಡ ಸವಾಲು ಎದುರಿಸಲು ತಯಾರಾಗಿದ್ದಾರೆ. ನಾಳೆ ಪ್ರಧಾನಿ ಮೋದಿಯವರು ರಾಜ್ಯಕ್ಕೆ ಆಗಮಿಸಲಿದ್ದಾರೆ. ಕೇಂದ್ರದಿಂದ ಪರಿಹಾರ ಸಿಗುವ ಭರವಸೆ ಇದೆ ಎನ್ನುವ ಭರವಸೆ ನೀಡಿದರು.
ಮಹಾರಾಷ್ಟ್ರದಲ್ಲಿ ಮಳೆ ಹೆಚ್ಚಾದರೆ ಅನಿವಾರ್ಯವಾಗಿ ಕರ್ನಾಟಕದಲ್ಲಿ ಪ್ರವಾಹ ಬರುತ್ತದೆ. ಪ್ರವಾಹವನ್ನು ನಾವು ಸಮರ್ಥವಾಗಿ ಎದುರಿಸಬೇಕಾಗಿದೆ. ಪ್ರಾಥಮಿಕವಾಗಿ ಸಂತ್ರಸ್ಥರಿಗೆ ಹತ್ತು ಸಾವಿರ ರೂಪಾಯಿ ಪರಿಹಾರ ಘೋಷಿಸಿದ್ದು, ಹತ್ತು ಸಾವಿರ ಪರಿಹಾರವನ್ನು ಶೇಕಡಾ 99 ರಷ್ಟು ಸಂತ್ರಸ್ಥರಿಗೆ ಈಗಾಗಲೇ ಹಂಚಿಕೆ ಮಾಡಲಾಗಿದೆ ಎಂದರು.
ಶಿಕ್ಷಕರ ವರ್ಗಾವಣೆಯಲ್ಲಿ ಹಿಂದಿನ ಸರ್ಕಾರ ಸಮಸ್ಯೆ ಮಾಡಿಟ್ಟಿದೆ. ಶಿಕ್ಷಕಿಯ ಪುತ್ರನಾದ ಸುರೇಶ್ ಕುಮಾರ್ ಶಿಕ್ಷಣ ಸಚಿವರಾಗಿದ್ದು, ಈ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲಿದ್ದಾರೆ. ಆದಷ್ಟು ಬೇಗನೆ ದಂಪತಿಗಳ ವರ್ಗಾವಣೆ ಸಮಸ್ಯೆ ಪರಿಹರಿಸುವುದಾಗಿ ಭರವಸೆ ನೀಡಿದರು.