ನನ್ನದು ಕಾಂಗ್ರೆಸ್ ವಿರುದ್ಧದ ದಂಗೆಯಲ್ಲ; ಪಕ್ಷ ತೊರೆಯುವುದಿಲ್ಲ: ಸಚಿನ್ ಪೈಲಟ್
ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ವಿರುದ್ಧ ಒಂದು ತಿಂಗಳಿನಿಂದ ಬಂಡಾಯವೆದ್ದಿದ್ದ ರಾಜಸ್ಥಾನದ ಮಾಜಿ ಉಪಮುಖ್ಯಮಂತ್ರಿ ಸಚಿನ್ ಪೈಲಟ್ ಕಾಂಗ್ರೆಸ್ ಹಿರಿಯ ಮುಖಂಡರೊಂದಿಗಿನ ಮಾತುಕತೆಯ ನಂತರ ಇಂದು ವಾಪಸ್ ಜೈಪುರಕ್ಕೆ ಮರಳಿದ್ದಾರೆ. ಭಾರೀ ಬೆಂಬಲಿದರ ಹರ್ಷೋದ್ಘಾರದ ಸ್ವಾಗತದ ನಡುವೆ ಬಂದಿಳಿದ ಅವರು ಪಕ್ಷದೊಳಗಿನ ಭಿನ್ನಾಭಿಪ್ರಾಯ ದಂಗೆಯಲ್ಲ, ನನಗೆ ಯಾವುದೇ ಬೇಡಿಕೆಗಳಿಲ್ಲ ಎಂದು ಘೋಷಿಸಿದ್ದಾರೆ.
ಮೂರು ಜನರ ಪ್ಯಾನೆಲ್ ರಚಿಸಿದ ಸೋನಿಯಾ ಗಾಂಧಿ ಮತ್ತು ಹಿರಿಯ ಕಾಂಗ್ರೆಸ್ ನಾಯಕರಿಗೆ ಧನ್ಯವಾದಗಳು. ನನಗೆ ಯಾವುದೇ ಕೆಟ್ಟ ಭಾವನೆಗಳಿಲ್ಲ. ನಾನು ಸರ್ಕಾರದ ಭಾಗವಾಗುವುದಿಲ್ಲ, ನನಗೆ ಯಾವುದೇ ಬೇಡಿಕೆಗಳಿಲ್ಲ. ನಮ್ಮ ಕಾಂಗ್ರೆಸ್ ಕುಟುಂಬದ ಹಿರಿಯ ಸದಸ್ಯರು ಸಮಸ್ಯೆಯನ್ನು ಬಗೆಹರಿಸುತ್ತಾರೆ ಎಂಬ ಭರವಸೆಯಿದೆ. ಆದರೆ ನನ್ನ ಜೊತೆ ಬಂದಿದ್ದ ಇತರ ಶಾಸಕರ ವಿರುದ್ಧ ರಾಜಕೀಯ ಮಾಡಬಾರದು ಎಂದು ಅವರು ಆಗ್ರಹಿಸಿದ್ದಾರೆ.
ಈ ನಡುವೆ ಅಶೋಕ್ ಗೆಹ್ಲೋಟ್ ಜೈಸಲ್ಮೇರ್ಗೆ ತೆರಳಿದ್ದಾರೆ. ಇಂದು ರಾತ್ರಿಯೂ ಅಲ್ಲೇ ಉಳಿದು ನಾಳೆ ಜೈಪುರಕ್ಕೆ ಆಗಮಿಸುವುದಾಗಿ ತಿಳಿಸಿದ್ದಾರೆ. ಇಂದು ಸಚಿನ್ ಪೈಲಟ್ ಭೇಟಿಯಾಗುವುದನ್ನು ತಪ್ಪಿಸಲು ಸಿಎಂ ದೂರ ಉಳಿದಿದ್ದಾರೆ ಎನ್ನಲಾಗುತ್ತಿದೆ.
ನನ್ನ ಭಿನ್ನಾಭಿಪ್ರಾಯಗಳನ್ನು ಆಲಿಸಲು ಸಮಿತಿ ರಚಿಸಲಾಗುತ್ತಿದೆ. ಇದಕ್ಕೆ ಪ್ರಿಯಾಂಕಾ ಗಾಂಧಿಯವರು ಒಪ್ಪಿದ್ದಾರೆ. ಒಂದು ಕುಟುಂಬದ ಸದಸ್ಯರಾದ ಮೇಲೆ ಮತ್ತೆ ಭಿನ್ನಾಭಿಪ್ರಾಯವಿರಲು ಸಾಧ್ಯವೇ ಎಂದು ಸಚಿನ್ ಪ್ರಶ್ನಿಸಿದ್ದಾರೆ.
ಇನ್ನು ಸಚಿನ್ ಪೈಲಟ್ಗೆ ಹಿಂದಿನಂತೆಯೇ ಉಪಮುಖ್ಯಮಂತ್ರಿ ಮತ್ತು ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಸ್ಥಾನ ನೀಡಲಾಗುತ್ತದೆಯೇ ಎಂಬ ಚರ್ಚೆಗಳು ಆರಂಭವಾಗಿದೆ. ಅವರಂತೂ ನನಗೆ ಯಾವುದೇ ಬೇಡಿಕೆಗಳಿಲ್ಲ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ರಾಜಸ್ಥಾನದಲ್ಲಿ ಬಿಜೆಪಿಗೆ ಬಿಕ್ಕಟ್ಟು; ಬಿಜೆಪಿ ಶಾಸಕರು ಗುಜರಾತ್ ರೆಸಾರ್ಟ್ಗೆ ಶಿಫ್ಟ್