ನಾಳೆ ಬಜೆಟ್ : ಭಾರೀ ನಿರೀಕ್ಷೆಯಲ್ಲಿ ರಾಜ್ಯದ ಜನ – ಹೊಸ ದಾಖಲೆ ಸೃಷ್ಟಿಸುವರಾ ಸಿಎಂ..?
ಸಾಕಷ್ಟು ಕಸರತ್ತು ಮೂಲಕ ರಾಜ್ಯದ ಅಧಿಕಾರದ ಗದ್ದುಗೆ ಏರಿದ ಬಿಜೆಪಿಗೆ ನಾಳೆ ಮಂಡನೆಯಾಗಲಿರುವ ಬಜೆಟ್ ನ್ನು ಜನ ಸ್ವೀಕರಿಸುವ ನಿರಾಖರಿಸುವ ಸವಾಲು ಎದುರಾಗಿದೆ.
ಪ್ರತೀ ವರ್ಷ ಬಜೆಟ್ ಮಂಡನೆ ಹತ್ತಿರವಾಗುತ್ತಿದ್ದಂತೆ ದೊಡ್ಡ ದೊಡ್ಡ ಕಂಪನಿ ಮಾಲೀಕರಿಂದ ಸಣ್ಣ ಪುಟ್ಟ ಜನರಲ್ಲೂ ಅಧಿಕ ನಿರೀಕ್ಷೆ ಇರುತ್ತದೆ. ಯಾವ ವಸ್ತುಗಳ ಬೆಲೆ ಏರಲಿದೆ, ಯಾವ ವಸ್ತುಗಳು ಅಗ್ಗವಾಗಲಿವೆ ಎಂಬ ಕುರಿತು ಜನಸಾಮಾನ್ಯರ ನಡುವೆಯೇ ಚರ್ಚೆ ಆರಂಭವಾಗಿರುತ್ತದೆ. ಆದರೆ, ಇದಕ್ಕೆಲ್ಲ ಉತ್ತರ ದೊರೆಯುವುದು ಬಜೆಟ್ ಮಂಡನೆ ನಂತರವೇ. ಆದರೂ ಈ ಬಾರಿ ಬಜೆಟ್ ಮಂಡಿಸಲಿರುವ ಸಿಎಂ ಯಡಿಯೂರಪ್ಪ ಯಾವೆಲ್ಲಾ ಕ್ಷೇತ್ರಗಳಿಗೆ ಹೆಚ್ಚಿನ ಆಧ್ಯತೆ ಕೊಡಲಿದ್ದಾರೆ…? ಯಾವೆಲ್ಲಾ ಕ್ಷೇತ್ರಗಳನ್ನು ಕಡೆಗಣಿಸಲಿದ್ದಾರೆ..? ಎನ್ನುವ ಸಾಧ್ಯತೆಯ ಕಡೆಗೆ ಕೊಂಚ ಗಮನ ಹರಿಸೋಣ.
ನಾಳೆ ರಾಜ್ಯ ಸರ್ಕಾರದ ಬಜೆಟ್ ಮಂಡನೆಯಾಗಲಿದೆ. ಈ ಹಿನ್ನೆಲೆಯಲ್ಲಿ ಸಿಎಂ ಯಡಿಯೂರಪ್ಪ ಇಂದು ಸಂಜೆ ಶಾಸಕಾಂಗ ಪಕ್ಷದ ಸಭೆ ಕರೆದಿದ್ದಾರೆ. ಶಾಸಕರಿಗೆ ಭೋಜನ ನೆಪದಲ್ಲಿ ಸಿಎಂ ಯಡಿಯೂರಪ್ಪ ಶಾಸಕಾಂಗ ಪಕ್ಷದ ಸಭೆ ನಡೆಸಲಿದ್ದಾರೆ. ನಾಳೆ ಬಿಜೆಪಿ ಸರ್ಕಾರದ ಈ ಅವಧಿಯ ಮೊದಲ ಪೂರ್ಣ ಬಜೆಟ್ ಮಂಡನೆ ಆಗುತ್ತಿರುವ ಹಿನ್ನೆಲೆಯಲ್ಲಿ ಸಿಎಂ ಪಕ್ಷದ ಶಾಸಕರ ಜೊತೆ ಬಜೆಟ್ ಕುರಿತು ಅನೌಪಚಾರಿಕ ಚರ್ಚೆ ನಡೆಸಲಿದ್ದಾರೆ. ಇಂದು ಸಂಜೆ 7ಕ್ಕೆ ಖಾಸಗಿ ಹೋಟೆಲ್ ನಲ್ಲಿ ಬಿಜೆಪಿ ಶಾಸಕಾಂಗ ಪಕ್ಷದ ಸಭೆ ನಡೆಯಲಿದೆ. ಉಭಯ ಸದನಗಳಲ್ಲಿ ಬಜೆಟ್ ಮೇಲಿನ ಚರ್ಚೆಯಲ್ಲಿ ಭಾಗವಹಿಸುವಿಕೆ ಹಾಗೂ ವಿಪಕ್ಷಗಳ ಹೋರಾಟಕ್ಕೆ ತಂತ್ರ ರೂಪಿಸುವುದರ ಬಗ್ಗೆ ಇಂದಿನ ಸಭೆಯಲ್ಲಿ ಚರ್ಚಿಸಲಾಗುತ್ತದೆ.
ನಾಳೆ ವಿಧಾನಸಭೆಯಲ್ಲಿ ಮುಂದಿನ ಸಾಲಿನ ಆಯವ್ಯಯ ಹಾಗೂ ಕೃಷಿಗೆ ಪ್ರತ್ಯೇಕ ಬಜೆಟ್ ಮಂಡಿಸುತ್ತಿದ್ದು ಅನೇಕ ಜನಪ್ರಿಯ ಕಾರ್ಯಕ್ರಮಗಳನ್ನು ಪ್ರಕಟಿಸಲು ಸಿದ್ಧತೆ ಸಿಎಂ ನಡೆಸಿದ್ದಾರೆ. ದೇಶದ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಮಕ್ಕಳಿಗಾಗಿ ಹಾಗೂ 2ನೇ ಬಾರಿಗೆ ಕೃಷಿಗೆ ಪ್ರತ್ಯೇಕ ಬಜೆಟ್ ರೂಪಿಸಿದ ಹೆಗ್ಗಳಿಕೆಗೂ ಯಡಿಯೂರಪ್ಪ ಪಾತ್ರವಾಗುತ್ತಿದ್ದಾರೆ. ಕೃಷಿ ಮತ್ತು ಅದಕ್ಕೆ ಪೂರಕವಾದ ಇಲಾಖೆಗಳ ಅನುದಾನವನ್ನೆಲ್ಲ ಒಟ್ಟುಗೂಡಿಸಿ ಕೃಷಿ ಬಜೆಟ್ ಸಿದ್ಧಪಡಿಸಿದ್ದಾರೆ. ಕೃಷಿ ಬಜೆಟ್ ಓದಿದ ನಂತರ ಸಾಮಾನ್ಯ ಬಜೆಟ್ ಮಂಡಿಸಲಿದ್ದಾರೆ. ಎರಡು ಪುಸ್ತಕಗಳು ಸೇರಿ 110 ಪುಟಗಳನ್ನು ಮೀರಲಿವೆ. ಯಡಿಯೂರಪ್ಪ ಮಂಡಿಸುತ್ತಿರುವ 6ನೇ ಬಜೆಟ್ ಇದಾಗಿದೆ. ಜೆಡಿಎಸ್ ಮತ್ತು ಬಿಜೆಪಿ ಸರ್ಕಾರದಲ್ಲಿ ಉಪಮುಖ್ಯಮಂತ್ರಿಯಾಗಿ ಎರಡು ಬಜೆಟ್ ಮಂಡಿಸಿದ್ದ ಅವರು, ಮುಖ್ಯಮಂತ್ರಿಯಾಗಿ 4ನೇ ಬಜೆಟ್ ಮಂಡಿಸುತ್ತಿದ್ದಾರೆ. ಕೇಂದ್ರ ಸರ್ಕಾರದ ಬಜೆಟ್ಗಿಂತ ಮುನ್ನವೇ ರಾಜ್ಯದ ಬಜೆಟ್ ರೂಪಿಸುತ್ತಿದ್ದು ಕೇಂದ್ರದ ಮೇಲೆ ಒತ್ತಡ ತರುವ ತಂತ್ರ ಇದಾಗಿದೆ.
ಮೂಲಗಳ ಪ್ರಕಾರ ತೆರಿಗೆ ಭಾರ, ಸಬ್ಸಿಡಿ ಖೊತಾ, ಮಠ ಮಾನ್ಯಗಳಿಗೆ ಅನುದಾನ ಕಟ್ ಆಗುವ ಸಾಧ್ಯತೆ ಇದೆ. ಜೊತೆಗೆ ಇದು ಯಡಿಯೂರಪ್ಪ ಮಂಡಿಸಲಿರುವ ಬಜೆಟ್ನ ಹೈಲೈಟ್ಸ್ ಆಗುವ ಸಾಧ್ಯತೆ ಇದೆ. ಕರ್ನಾಟಕ ಬಜೆಟ್ ಫೈನಲ್ ಆಗಿದ್ದು, ಇಂದು ಪ್ರಿಂಟ್ಗೆ ಹೋಗಿದ್ದು. ನಾಳೆ ಬಜೆಟ್ ಮಂಡನೆಯಾಗಲಿದೆ. ಕೃಷಿ, ನೀರಾವರಿ ಕ್ಷೇತ್ರಕ್ಕೆ ಹೆಚ್ಚಿನ ಆದ್ಯತೆ ಕಡೆಗೆ ಯಡಿಯೂರಪ್ಪ ಗಮನ ಹರಿಸಿದ್ದಾರೆ ಎನ್ನಲಾಗಿದೆ.
ಬೆಂಗಳೂರಿನಲ್ಲಿ ಮಾಧ್ಯಮ ಸಂಪಾದಕರ ಜತೆ ಯಡಿಯೂರಪ್ಪ ಅನೌಪಚಾರಿಕ ಚರ್ಚೆ ನಡೆಸಿದ್ರು. ಈ ವೇಳೆ ರಾಜ್ಯ ಬಜೆಟ್ ಬಗ್ಗೆ ಕೆಲವು ಸುಳಿವುಗಳನ್ನ ನೀಡಿದ್ದಾರೆ. ಹಣಕಾಸು ಪರಿಸ್ಥಿತಿ ತೀರಾ ಹದಗೆಡದಿದ್ದರೂ, ಬಿಗಿ ಪರಿಸ್ಥಿತಿ ಇರುವುದನ್ನ ಯಡಿಯೂರಪ್ಪ ಒಪ್ಪಿಕೊಂಡಿದ್ದಾರೆ.ಯಡಿಯೂರಪ್ಪ ಬಜೆಟ್ ಮೊದಲಿನಂತೆ ಇರಲ್ಲ ಎನ್ನಲಾಗಿದ್ದು, ಈ ಬಾರಿ ಯಡಿಯೂರಪ್ಪ ಬಜೆಟ್ ಫುಲ್ ಟಫ್ ಬಜೆಟ್ ಆಗಿರಲಿದೆ ಅಂತಾ ಮೂಲಗಳು ತಿಳಿಸಿವೆ. ಕೆಲವು ವಸ್ತುಗಳ ತೆರಿಗೆ ಭಾರ ಹೆಚ್ಚಾಗುವ ಸಾಧ್ಯತೆ ಇದ್ದು, ಹಲವು ಸಬ್ಸಿಡಿಗಳು ಕಡಿಮೆ ಆಗುವ ಸಾಧ್ಯತೆ ಹೆಚ್ಚಿದೆ.
ಇನ್ನೂ ಸಿಎಂ ಬಿಎಸ್ ವೈ ಮಂಡಿಸಲಿರುವ ಬಜೆಟ್ ಗೆ ಸಾಲದ ಭಾರ ಸವಾಲಾಗಿದೆ. ‘ ವಿಪರೀತ ಸಾಲ ಮತ್ತು ರಾಜ್ಯದ ಆರ್ಥಿಕ ಪರಿಸ್ಥಿತಿ ಉತ್ತಮವಿಲ್ಲದ್ದರಿಂದ ಯಾವುದೇ ಹೊಸ ಯೋಜನೆ ಪ್ರಕಟಿಸಬಾರದು. ಮತ್ತಷ್ಟು ಸಾಲವನ್ನೂ ತೆಗೆದುಕೊಳ್ಳವಾರದು’ ಎಂದು ಹಣಕಾಸು ಇಲಾಖೆ ಪಟ್ಟು ಹಿಡಿದಿದೆ. ಹಾಗಾಗಿ ಸಿಎಂ ಬಜೆಟ್ ಅದೆಷ್ಟು ಜನರಿಗೆ ಖುಷಿ ಕೊಡಲಿದೆ ಅನ್ನೋದೇ ಯಕ್ಷ ಪ್ರಶ್ನೆ. 7ನೇ ಬಜೆಟ್ ಮಂಡಿಸುವ ತಯಾರಿಯಲ್ಲಿರುವ ಯಡಿಯೂರಪ್ಪ ಅವರ ಉತ್ಸಾಹಕ್ಕೆ ಇದರ ಪರಿಣಾಮವಾಗಿ ಕಡಿವಾಣ ಬಿದ್ದಂತಾಗಿದೆ.
ಸಂಪನ್ಮೂಲ ಕ್ರೋಡೀಕರಣದ ವಿಚಾರದಲ್ಲಿ ದೇಶದಲ್ಲೆ ಕರ್ನಾಟಕ ಮುಂಚೂಣಿಯಲ್ಲಿದೆ. ಈ ನಡುವೆಯೂ ಆರ್ಥಿಕ ಸಂಕಷ್ಟ ಎದುರಾಗಲು ಹಲವಾರು ಕಾರಣಗಳಿವೆ. ಪ್ರಮುಖವಾಗಿ ಕಳೆದ ಐದಾರು ವರ್ಷದಲ್ಲಿ ದೂರದೃಷ್ಟಿಯಿಲ್ಲದೆ ಸಾಲ ತೆಗೆದುಕೊಳ್ಳಲಾಗಿದೆ. ಆಸ್ತಿ ಸೃಜಿಸುವುದರ ಬದಲು ವೋಟ್ ಬ್ಯಾಂಕ್ ರಾಜಕಾರಣಕ್ಕಾಗಿ ಜನಪ್ರಿಯ ಯೋಜನೆಗಳಿಗೆ ಮಣೆ ಹಾಕಲಾಗಿದೆ. ಜಿಎಸ್ಟಿ ಜಾರಿ ಬಳಿಕ ನಾನಾ ವಲಯದಲ್ಲಿನ ತೆರಿಗೆ ಪರಿಷ್ಕರಿಸುವ ಸ್ವಾತಂತ್ರ್ಯವನ್ನೂ ಕಳೆದುಕೊಳ್ಳಲಾಗಿದೆ. ಕೇಂದ್ರ ಸರಕಾರವೂ ಜಿಎಸ್ಟಿ ಪರಿಹಾರವನ್ನು ಸಕಾಲಕ್ಕೆ ಬಿಡುಗಡೆ ಮಾಡುತ್ತಿಲ್ಲ. ಇಷ್ಟು ಸಾಲದೆಂಬಂತೆ ಕೇಂದ್ರದ ಸಹಾಯಾನುದಾನ ಕಡಿತಗೊಳ್ಳುತ್ತಿದೆ. ಹೀಗಾಗಿ ಈ ಬಾರಿ ಯಡಿಯೂರಪ್ಪ ಬಜೆಟ್ ಫುಲ್ ಟಫ್ ಬಜೆಟ್ ಆಗಿರಲಿದೆ ಅಂತಾ ಮೂಲಗಳು ತಿಳಿಸಿವೆ. ಬಜೆಟ್ ನ ನಿಖರ ಮಾಹಿತಿಗೆ ನಾಳೆಯವರೆಗೂ ಕಾಯಲೇಬೇಕು.