ಬೆಂಗಳೂರಿಗೂ ಬಂತು ಕೊರೊನಾ ವೈರಸ್ : ರಾಜ್ಯದೆಲ್ಲೆಡೆ ಕಟ್ಟೆಚ್ಚರ…!
ವಿಶ್ವವನ್ನೇ ಬೆಚ್ಚಿಬೀಳಿಸಿದ ಕೊರೊನಾ ವೈರಸ್ ಸೋಂಕು ಭಾರತಕ್ಕೂ ಪ್ರವೇಶಿಸಿ ಸದ್ಯ ಸಿಲಿಕಾನ್ ಸಿಟಿ ಬಾಗಿಲನ್ನೂ ದಾಟಿದೆ.
ಹೌದು… ವಿಶ್ವದೆಲ್ಲೆಡೆ 3000ಕ್ಕೂ ಅಧಿಕ ಜನರನ್ನ ಬಲಿಪಡೆದ ಕೊರೊನಾ ವೈರಸ್ ಕಳೆದ ಎರಡು ಮೂರು ದಿನಗಳಿಂದೆ ಭಾರತಕ್ಕೂ ಪ್ರವೇಶ ಮಾಡಿ ದೇಶದ ಜನತೆ ಆತಂಕಗೊಂಡಿದ್ದು ಗೊತ್ತೇ ಇದೆ. ಆದರೆ ಈ ಮಹಾಮಾರಿ ಸೋಂಕು ಸದ್ಯ ರಾಜ್ಯಕ್ಕೆ ಕಾಲಿಟ್ಟಿದ್ದು ರಾಜ್ಯದ ಜನತೆಯಲ್ಲಿ ಪ್ರಾಣಭಯ ಶುರುವಾಗಿದೆ.
ಮೊನ್ನೆಯಷ್ಟೇ ತೆಲಂಗಾಣ ಮೂಲದ ಓರ್ವ ಹಾಗೂ ದೆಹಲಿಯ ವ್ಯಕ್ತಿಗೆ ಕೊರೊನಾ ವೈರಸ್ ಸೋಂಕು ಹರಡಿರುವುದು ದೃಢಪಟ್ಟಿತ್ತು. ಈಗ ಈ ಮಹಾಮಾರಿ ಸೋಂಕು ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದ ಹೈದರಾಬಾದ್ ಮೂಲದ ಟೆಕ್ಕಿಯಲ್ಲಿ ಕಾಣಿಸಿಕೊಂಡಿದ್ದು, ಸದ್ಯ ಆತನಿಗೆ ಚಿಕಿತ್ಸೆ ನೀಡಲಾಗುತ್ತಿದೆ.
ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಆರೋಗ್ಯಾಧಿಕಾರಿಗಳು ತಪಾಸಣೆ ಮುಂದುವರೆಸಿದ್ದಾರೆ. ಜನವರಿ 20ರಿಂದ ಇಲ್ಲಿವರೆಗೆ ಒಟ್ಟು 34,490 ಪ್ರಯಾಣಿಕರ ಆರೋಗ್ಯ ತಪಾಸಣೆ ನಡೆಸಲಾಗಿದೆ. ಈ ಪೈಕಿ ಬೆಂಗಳೂರಿನ 369 ಮಂದಿ 19 ಕೊರೊನಾ ಸೋಂಕಿತ ದೇಶಗಳಿಗೆ ಭೇಟಿ ಕೊಟ್ಟವರು ಎಂದು ತಿಳಿದು ಬಂದಿದೆ. ಬೆಂಗಳೂರಿನ 369 ಮಂದಿ ಪೈಕಿ 269 ಮಂದಿಯನ್ನು ನಿಗಾ ಘಟಕದಲ್ಲಿ ಇರಿಸಲಾಗಿದೆ.
ಬೆಂಗಳೂರಿನಲ್ಲಿ ಮಾರಣಾಂತಿಕ ಕೊರೊನಾ ಪತ್ತೆಯಾದ ಹಿನ್ನೆಲೆ, ಆರೋಗ್ಯಾಧಿಕಾರಿಗಳು ಸಂಪೂರ್ಣವಾಗಿ ಎಚ್ಚೆತ್ತುಕೊಂಡಿದ್ದಾರೆ. ರಾಜ್ಯದ ಪ್ರೇಕ್ಷೇಣಿಯ ಸ್ಥಳಗಳಿಗೆ ಬರುವ ಪ್ರವಾಸಿಗರನ್ನು ಸ್ಕ್ಯಾನರ್ ಬಳಕೆ ಮಾಡಿ ಪರಿಶೀಲನೆ ಮಾಡಲಾಗುತ್ತಿದೆ. ಹಡಗು ಮೂಲಕ ಬರುವ ಜನರ ತಪಾಸಣೆ ಹಾಗೂ ವಿಮಾನ ನಿಲ್ದಾಣಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದೆ.
ಇನ್ನು, ಹೈದರಾಬಾದ್ ಮೂಲದ ಟೆಕ್ಕಿ ಜೊತೆ ಪ್ರಯಾಣಿಸಿದ ಮತ್ತು ಆತನ ಜೊತೆ ಇದ್ದ ಎಲ್ಲರನ್ನೂ ತಪಾಸಣೆ ಮಾಡಲಾಗುತ್ತಿದೆ. ದುಬೈನಿಂದ ಬೆಂಗಳೂರಿಗೆ ಬಂದ ವಿಮಾನದಲ್ಲಿನ ಸಹ ಪ್ರಯಾಣಿಕರು, ಬೆಂಗಳೂರಿನಲ್ಲಿ ಒಂದು ದಿನ ಆತ ಸಂಪರ್ಕಿಸಿದ್ದ ವ್ಯಕ್ತಿಗಳು, ಹೈದರಾಬಾದ್ಗೆ ಪ್ರಯಾಣಿಸಿದ ಸಹ ಪ್ರಯಾಣಿಕರು ಎಲ್ಲರನ್ನೂ ಸಂಪರ್ಕಿಸಲಾಗಿದೆ. ಜೊತೆಗೆ ಒಂದು ದಿನ ಬೆಂಗಳೂರಿನ ಪಿಜಿಯಲ್ಲಿ ಇದ್ದವರು. ಹೀಗೆ ಒಟ್ಟು 80 ಜನರ ಪಟ್ಟಿ ತಯಾರಿಸಿ ಅವರೆಲ್ಲರನ್ನೂ ಸಂಪರ್ಕಿಸಲಾಗಿದೆ. ಈಗಾಗಲೇ ಆರೋಗ್ಯ ಇಲಾಖೆ ಸಿಬ್ಬಂದಿ ವಿಮಾನ ಮತ್ತು ಬಸ್ ಟಿಕೆಟ್ ಮಾಹಿತಿ ಪಡೆದು ಎಲ್ಲರನ್ನೂ ಸಂಪರ್ಕಿಸಿದ್ದಾರೆ. ಈಗ ಎಲ್ಲಾ 80 ಜನರಲ್ಲಿ ಯಾರಿಗೂ ರೋಗ ಲಕ್ಷಣಗಳು ಇಲ್ಲ ಎಂಬುದು ತಿಳಿದು ಬಂದಿದೆ.
ಜೊತೆಗೆ ಸಾಂಸ್ಕೃತ ನಗರಿ ಮೈಸೂರಿನಲ್ಲೂ ಕಟ್ಟೆಚ್ಚರ ವಹಿಸಲಾಗುತ್ತಿದೆ. ಸಂಕಿತರನ್ನ ರಕ್ತದ ಮಾದರಿಯನ್ನ ಪರೀಕ್ಷೆ ಮಾಡಲಾಗುತ್ತಿದೆ.