ಪೋಷಕರಿಂದ ತಪ್ಪಿಸಿಕೊಂಡು ರಾತ್ರಿಯಿಡಿ ಕಾಫಿ ತೋಟದಲ್ಲಿ ಕಾಲಕಳೆದ ಮಗು!
ಕಾಫಿ ತೋಟದಲ್ಲಿ ಮಲಗಿಸಿ ಕೆಲಸ ಮಾಡುತ್ತಿದ್ದ ಪೋಷಕರಿಂದ ತಪ್ಪಿಸಿಕೊಂಡ ಒಂದುವರೆ ವರ್ಷದ ಮಗುವೊಂದು ಇಡೀ ರಾತ್ರಿ ಕಾಫಿತೋಟದಲ್ಲೇ ಕಾಲ ಕಳೆದ ಘಟನೆ ಕೊಡಗು ಜಿಲ್ಲೆ ವಿರಾಜಪೇಟೆ ತಾಲೂಕಿನ ವೆಸ್ಟ್ ನೆಮ್ಮಲೆ ಗ್ರಾಮದಲ್ಲಿ ನಡೆದಿದೆ.
ತಮಿಳುನಾಡಿನ ತಿರುವಣ್ಣಾಮಲೈನಿಂದ ಕೂಲಿ ಕೆಲಸಕ್ಕೆ ಬಂದಿರುವ ನಾಗರಾಜು ಮತ್ತು ಸೀತಾ ದಂಪತಿಯ ಮಗು ನಿತ್ಯಾಶ್ರಿ ಇಡೀ ರಾತ್ರಿ ಕಾಫಿತೋಟದಲ್ಲೇ ಕಾಲ ಕಳೆದಿರೋದು. ನಿನ್ನೆ ಸಂಜೆ ವೆಸ್ಟ್ ನೆಮ್ಮಲೆ ಗ್ರಾಮದ ರಾಜಕುಶಾಲಪ್ಪ ಅವರ ತೋಟದಲ್ಲಿ ಕೆಲಸ ಮಾಡುತ್ತಿದ್ದ ಈ ದಂಪತಿ ಮಗುವನ್ನು ಸೀರೆಯೊಂದರಲ್ಲಿ ಜೋಲಿ ಕಟ್ಟಿ ಮಲಗಿಸಿದ್ದಾರೆ. ಬಳಿಕ ಬಂದು ನೋಡಿದಾಗ ಮಗು ನಾಪತ್ತೆಯಾಗಿದೆ. ಕೂಡಲೇ ಮಗುವನ್ನು ಎಲ್ಲೆಡೆ ಹುಡುಕಾಡಿದ್ರೂ ಸಿಕ್ಕಿಲ್ಲ. ತಕ್ಷಣವೇ ಪೊಲೀಸ್ರಿಗೂ ಮಾಹಿತಿ ನೀಡಿದ್ದಾರೆ. ಪೊಲೀಸ್ರು ಸ್ಥಳಕ್ಕೆ ಬರುವಷ್ಟರಲ್ಲಿ ಕತ್ತಲೆಯಾಗಿದ್ದರಿಂದ ಟಾರ್ಚ್ ಹಾಕಿ ಅರಣ್ಯ ಇಲಾಖೆಯವರ ಸಹಾಯ ಪಡೆದು ಹುಡುಕಾಡಿದ್ದಾರೆ.
ಆದ್ರೂ ಮಗು ಮಾತ್ರ ಪತ್ತೆಯಾಗಿರಲಿಲ್ಲ. ಪುನಃ ಇಂದು ಬೆಳಗ್ಗೆ ಪೊಲೀಸರು ಮತ್ತು ಅರಣ್ಯ ಇಲಾಖೆ ಸಿಬ್ಬಂದಿಗಳು ಹುಡುಕಾಡಿದಾಗ ಮಗು ನಿತ್ಯಾಶ್ರಿ ಕಾಫಿ ತೋಟದ ಎತ್ತರವಾದ ಪ್ರದೇಶದ ಮರದ ಬುಡದಲ್ಲಿ ಅಸ್ವಸ್ಥಳಾಗಿ ಕುಳಿತಿರುವುದು ಗೊತ್ತಾಗಿದೆ. ಕೂಡಲೇ ಮಗುವನ್ನು ಆಸ್ಪತ್ರೆಗೆ ಕರೆದೊಯ್ಯುದು ಚಿಕಿತ್ಸೆ ಕೊಡಿಸಿ ಬಳಿಕ ಪೋಷಕರ ಮಡಿಲು ಸೇರಿಸಿದ್ದಾರೆ. ಒಟ್ಟಿನಲ್ಲಿ ಪೋಷಕರ ಬೇಜವಾಬ್ದಾರಿತನಕ್ಕೆ ಒಂದುವರೆ ವರ್ಷದ ಮಗು ಮಾತ್ರ ಇಡೀ ರಾತ್ರಿ ಕಾಡಿನಲ್ಲಿ ಕಳೆದಿದ್ದು ಮಾತ್ರ ಆಶ್ಚರ್ಯ ಮತ್ತು ವಿಪರ್ಯಾಸವೇ ಸರಿ.