ಮದ್ಯ ವ್ಯಸನಿಗಳಿಗೆ ವಿಶೇಷ ಆಫರ್ ಕೊಟ್ಟ ಕೇರಳ ಸರ್ಕಾರ
ಕೊರೊನಾ ವೈರಸ್ ಹಿನ್ನೆಲೆಯಲ್ಲಿ ದೇಶಾದ್ಯಂತ ಲಾಕ್ಡೌನ್ ಘೋಷಿಸಿದ್ದು ವ್ಯಾಪಾರ ವಹಿವಾಟು ಕಂಪ್ಲೋಟ್ ಸ್ಥಗಿತಗೊಂಡಿದೆ. ದೇಶದ ಎಲ್ಲೆಡೆ ದಿನನಿತ್ಯದ ಆಹಾರ ಪದಾರ್ಥಗಳು ಹಾಗೂ ಮೆಡಿಕಲ್ ಸ್ಟೋರ್ಗಳನ್ನು ಹೊರತು ಪಡಿಸಿ ಯಾವುದೇ ಅಂಗಡಿಗಳು ತೆರೆದಿಲ್ಲ. ಅಂತೆಯೇ ಮದ್ಯದ ಅಂಗಡಿಗಳೂ ಬಂದ್ ಆಗಿವೆ. ಭಾರತದಲ್ಲಿ ಕೊರೊನಾ ಸೋಂಕಿತರ ಸಾವಿನ ಸಂಖ್ಯೆ 35ಕ್ಕೆ ಏರಿಕೆಯಾಗಿದೆ. ಕರ್ನಾಟಕದಲ್ಲಿ ಮೂವರು ಕೊರೊನಾ ವೈರಸ್ನಿಂದ ಸಾವಿಗೀಡಾಗಿದ್ದಾರೆ. ಆದರೆ, ಲಾಕ್ಡೌನ್ನಿಂದಾಗಿ ಮದ್ಯ ಸಿಗದೆ ಮದ್ಯ ವ್ಯಸನಿಗಳು ಮಾನಸಿಕ ಖಿನ್ನತೆಗೆ ಒಳಗಾಗಿದ್ದು, ಕರ್ನಾಟಕದಲ್ಲಿ 10 ದಿನಗಳಿಂದ ಮದ್ಯ ದೊರೆಯದೆ 7 ಜನರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೇರಳದಲ್ಲಿ ಈಗಾಗಲೇ 12 ಜನರು ಮದ್ಯವಿಲ್ಲದೆ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಕೊರೊನಾ ಸಾವಿಗಿಂತ ಮದ್ಯ ವ್ಯಸನಿಗಳ ಸಾವಿನ ಸಂಖ್ಯೆ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಮದ್ಯದ ವ್ಯಸನಕ್ಕೆ ಅಂಟಿಕೊಂಡಿದ್ದು, ಮದ್ಯ ಸಿಗದೇ ಖಿನ್ನತೆಗೆ ಒಳಗಾಗಿರುವವರಿಗೆ ವೈದ್ಯರು ನೀಡುವ ಸಲಹಾ ಚೀಟಿಯನ್ನು ಆಧರಿಸಿ ಅಬಕಾರಿ ಇಲಾಖೆಯಿಂದ ಮದ್ಯವನ್ನು ಖರೀದಿಸಲು ವಿಶೇಷ ಪಾಸ್ಗಳನ್ನು ನೀಡಲು ಕೇರಳ ಸರ್ಕಾರ ಮುಂದಾಗಿದೆ. ವೈದ್ಯರ ಸಂಘ ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದು, ಈ ನಡುವೆಯೂ ಸರ್ಕಾರ ಆದೇಶವನ್ನು ಹೊರಡಿಸಿದೆ.