ಮಲಯಾಳಂ ಚಿತ್ರರಂಗದ ಖ್ಯಾತ ಚಿತ್ರಕಥೆಗಾರ-ನಿರ್ದೇಶಕ ಸಚ್ಚಿ ನಿಧನ!
ಮಾಲಿವುಡ್ ಚಿತ್ರರಂಗದ ಖ್ಯಾತ ನಿರ್ದೇಶಕ ಕೆ.ಆರ್.ಸಚ್ಚಿದಾನಂದ್ (ಸಚ್ಚಿ) ಅವರು ಜೂನ್ 18ರಂದು ಹೃದಯಾಘಾತದಿಂದ ಇಹಲೋಕ ತ್ಯಜಿಸಿದ್ದಾರೆ.
ಕೆಲವು ದಿನಗಳ ಹಿಂದೆ ಹೃದಯಾಘಾತಕ್ಕೊಳಗಾಗಿ ಆಸ್ಪತ್ರೆಗೆ ದಾಖಲಾಗಿದ್ದ ಸಚ್ಚಿ ಅವರಿಗೆ ಚಿಕಿತ್ಸೆ ಫಲಕಾರಿಯಾಗದೆ, ಗುರುವಾರ ಮತ್ತೆ ಹೃದಯಾಘಾತ ಸಂಭವಿಸಿದ್ದು ವಿಧಿವಶರಾಗಿದ್ದಾರೆ.48 ವರ್ಷದ ನಿರ್ದೇಶಕ ಸಚ್ಚಿ ಇನ್ನು ನೆನಪಾಗಿಯಷ್ಟೇ ಉಳಿದಿದ್ದಾರೆ.
ಎರಡು ಮೂರು ದಿನಗಳ ಹಿಂದೆ ಸೊಂಟದ ಭಾಗದಲ್ಲಿ ದೊಡ್ಡ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಆದರೆ, ನಂತರ ಚೇತರಿಸಿಕೊಳ್ಳಲಿಲ್ಲ. ಅಲ್ಲದೆ, ಸಚ್ಚಿ ಅವರ ಮೆದುಳಿಗೂ ರಕ್ತ ಪೂರೈಕೆ ಸ್ಥಗಿತವಾಗಿ ಸಮಸ್ಯೆ ಎದುರಾಗಿತ್ತು. ಕಳೆದೆರಡು ದಿನಗಳಿಂದ ವೆಂಟಿಲೇಟರ್ ನೆರವಿನಲ್ಲಿಉಸಿರಾಟ ನಡೆಸಿದ್ದರು ಎಂದು ತಿಳಿದು ಬಂದಿದೆ.
ಅಯ್ಯಪ್ಪನುಂ-ಕೋಶಿಯುಂ, ಅನಾರ್ಕಲಿ ಸಿನಿಮಾಗಳನ್ನು ಒಳಗೊಂತೆ ಹಲವಾರು ಸೂಪರ್ ಹಿಟ್ ಪ್ರೇಮ ಕತೆಗಳನ್ನು ಒಳಗೊಂಡ ಸಿನಿಮಾಗಳನ್ನು ಸಿನಿ ಪ್ರೇಮಿಗಳಿಗೆ ನೀಡಿದ್ದರು. ಅಲ್ಲದೆ, ಸಮಾಜಕ್ಕೆ ಸಂದೇಶ ಸಾರುವ ಡ್ರೈವಿಂಗ್ ಲೈಸನ್ಸ್ ಕೂಡಾ ಸಿನಿಮಾ ಕ್ಷೇತ್ರದಲ್ಲಿ ಸಚ್ಚಿಯವರ ಕೊಡುಗೆಯಾಗಿದೆ.
ವಕೀಲ, ಕವಿ, ರಂಗಭೂಮಿ ಕಲಾವಿದ, ಕಥೆಗಾರ, ಸಂಭಾಷಣೆಗಾರ, ನಿರ್ದೇಶಕ, ನಿರ್ಮಾಪಕರಾಗಿ ಗುರುತಿಸಿಕೊಂಡಿದ್ದ ಸಚ್ಚಿ ಬಹುಮುಖ ಪ್ರತಿಭೆಯಾಗಿದ್ದರು. ಕೇರಳ ಹೈಕೋರ್ಟಿನಲ್ಲಿ 8 ವರ್ಷಗಳ ಕಾಲ ಕ್ರಿಮಿನಲ್ ಲಾಯರ್ ಆಗಿದ್ದರು.