ಗಡಿ ಸಂಘರ್ಷ: ಸರ್ವಪಕ್ಷಗಳ ಸಭೆ ಕರೆದ ಪ್ರಧಾನಿ ಮೋದಿ
ಭಾರತ-ಚೀನಾ ಗಡಿ ಪ್ರದೇಶವಾಗ ಗಲ್ವಾನ್ ಕಣಿವೆಯಲ್ಲಿ ಸಂಭವಿಸಿದ ಘರ್ಷಣೆಯಲ್ಲಿ 20 ಭಾರತೀಯ ಯೋಧರು ಹತ್ಯೆಯಾಗಿದ್ದಾರೆ. ಗಡಿ ಭಾಗದಲ್ಲಿ ಪರಿಸ್ಥಿತಿ ಉಲ್ಬಣಗೊಂಡಿದೆ. ಹಾಗಾಗಿ ಗಡಿ ಸಂಘರ್ಷದ ಬಗ್ಗೆ ಚರ್ಚಿಸಲು ಪ್ರಧಾನಿ ಮೋದಿಯವರು ಇಂದು (ಶುಕ್ರವಾರ) ಸಂಜೆಸರ್ವಪಕ್ಷಗಳ ಸಭೆ ಕರೆದಿದ್ದಾರೆ.
ಇಂದು ಸಂಜೆ 5 ಗಂಟೆಗೆ ವಿಡಿಯೋ ಕಾನ್ಫರೆನ್ಸ್ನಲ್ಲಿ ಸರ್ವಪಕ್ಷ ನಡೆಯಲಿದ್ದು, ಸಭೆಯಲ್ಲಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ, ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸೇರಿದಂತೆ 20 ಪಕ್ಷಗಳ ಮುಖ್ಯಸ್ಥರು ಭಾಗಿಯಾಗಲಿದ್ದಾರೆ. ಆದರೆ, ಸಭೆಗೆ ಆಮ್ ಆದ್ಮಿ ಪಕ್ಷಕ್ಕೆ ಆಹ್ವಾನ ನೀಡಿಲ್ಲ ಎಂದು ವರದಿಗಳಿಂದ ತಿಳಿದುಬಂದಿದೆ.
ಸಭೆಯಲ್ಲಿ, ಭಾರತ-ಚೀನಾ ಗಡಿ ಉದ್ವಿಗ್ನತೆಯ ಸದ್ಯದ ಪರಿಸ್ಥಿತಿ ಬಗ್ಗೆ ಸಮಾಲೋಚನೆ ನಡೆಯಲಿದೆ. ಚೀನಾ ವಿಚಾರದಲ್ಲಿ ಮುಂದಿನ ನಡೆ ಮತ್ತು ಭಾರತದ ನಿಲುವು ಏನಾಗಿರಬೇಕು ಎಂಬುದರ ಬಗ್ಗೆ ಚರ್ಚಿಸಲಾಗುವುದು ಎಂದು ತಿಳಿದುಬಂದಿದೆ.
ಈಗಾಗಲೇ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ರಾಷ್ಟ್ರಪತಿ ಸೇರಿದಂತೆ ಎಲ್ಲಾ ರಾಜಕೀಯ ಪಕ್ಷಗಳ ನಾಯಕರಿಗೆ ಕರೆ ಮಾಡಿ ಸಭೆಯ ಉದ್ದೇಶದ ಬಗ್ಗೆ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ.
ಪೂರ್ವ ಲಡಾಖ್’ನ ಗಲ್ವಾನ್ ಗಡಿಯಲ್ಲಿ ಕಳೆದ ಎರಡು ತಿಂಗಳುಗಳಿಂದ ಬಿಕ್ಕಟ್ಟು ಏರ್ಪಟ್ಟಿದೆ. ಈ ಕುರಿತು ಎರಡೂ ದೇಶಗಳ ನಡುವೆ ಮಾತುಕತೆ ನಡೆದಿದ್ದು, ಸ್ಥಳದಿಂದ ಹಿಂದೆ ಸರಿಯುವ ಕುರಿತು ಒಮ್ಮತಕ್ಕೆ ಬರಲಾಗಿತ್ತು. ಆದರೆ, ಸೋಮವಾರ ರಾತ್ರಿ ಚೀನಾ ಮತ್ತು ಭಾರತೀಯ ಸೈನಿಕ ನಡುವೆ ಘರ್ಷಣೆ ನಡೆದಿದ್ದು, ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಿದೆ.
ಗಡಿಯಲ್ಲಿ ಚೀನಾ ಮತ್ತು ಭಾರತೀಯ ಯೋಧರು ಶಸ್ತ್ರಾಶ್ರಗಳನ್ನು ಬಳಸುವಂತಿಲ್ಲವೆಂದು 1962ರಲ್ಲಿ ನಡೆದ ಯುದ್ದದ ನಂತರ ಒಪ್ಪಂದ ಮಾಡಿಕೊಳ್ಳಲಾಗಿದೆ. ಅದರಂತೆ ಇಂದಿನವರೆಗೂ ಉಭಯ ರಾಷ್ಟ್ರಗಳ ಸೈನಿಕರು ಗಡಿಯಲ್ಲಿ ಶಸ್ತ್ರಾಸ್ತ್ರಗಳನ್ನು ಬಳಸುತ್ತಿಲ್ಲ. ಹಾಗಾಗಿ ಘರ್ಷಣೆಯಲ್ಲಿ ಭಾರತೀಯ ಯೋಧರ ಮೇಲೆ ದೊಣ್ಣೆ ಹಾಗೂ ಕಲ್ಲುಗಳಿಂದ ದಾಳಿ ನಡೆಸಲಾಗಿದೆ. ಕೂಡಲೇ ಭಾರತೀಯ ಯೋಧರು ಪ್ರತಿದಾಳಿಗೆ ನಡೆಸಿದ್ದು, ಎರಡು ಸೇನೆಗಳ ನಡುವೆ ಸುಮಾರು ಗಂಟೆಗಳ ಕಾಲ ಘರ್ಷಣೆ ನಡೆದಿದೆ.