ಮಹೇಶ್ ಬಾಬು ಸಿನಿಮಾದಲ್ಲಿ ಕನ್ನಡದ ಕಲಾವಿದರಿಗೆ ಹೆಚ್ಚಿನ ಆಧ್ಯತೆ! ಏನಿದರ ಲೆಕ್ಕಾಚಾರ?
ಟಾಲಿವುಡ್ನ ‘ಪ್ರಿನ್ಸ್’ ಎಂದೇ ಖ್ಯಾತಿ ಪಡೆದಿರುವ ಮಹೇಶ್ ಬಾಬು, ಇತ್ತೀಚೆಗೆ ಬ್ಯಾಕ್ ಟು ಬ್ಯಾಕ್ ಹಿಟ್ ಸಿನಿಮಾಗಳನ ಮೂಲಕ ದಕ್ಷಿಣ ಭಾರತೀಯ ಸಿನಿ ಅಂಗಳದಲ್ಲಿ ಹೆಸರು ಮಾಡಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ಬಿಡುಗಡೆಯಾದ ಅವರ ‘ಭರತ್ ಅನೇ ನೇನು’, ‘ಮಹರ್ಷಿ’, ‘ಸರಿಲೇರು ನೀಕೆವ್ವರು’ ಚಿತ್ರಗಳು ಭರ್ಜರಿ ಕಮಾಯಿ ಮಾಡಿವೆ.
ಸಿನಿಮಾಗಳ ಯಶಸ್ಸಿನ ಹಾದಿಯಲ್ಲಿರುವ ಮಹೇಶ್ ಬಾಬು ಈಗ ‘ಸರ್ಕಾರು ವಾರಿ ಪಾಟ” ಸಿನಿಮಾ ನಿರ್ಮಾಣದಲ್ಲಿ ಬಿಸಿ ಆಗುತ್ತಿದ್ದಾರೆ. ಕೆಲ ದಿನಗಳ ಹಿಂದೆ ಸಿನಿಮಾ ಸೆಟ್ ಏರಲಿದೆ ಎಂದು ಅಧಿಕೃತವಾಗಿ ಘೋಷಿಸಲಾಗಿತ್ತು. ಆದರೆ, ಮಧ್ಯೆ ಲಾಕ್ಡೌನ್ ಹೇರಿದ್ದರಿಂದಾಗಿ ಸಿನಿಮಾ ಸೆಟ್ಟೇರುವುದನ್ನುಮುಂದೂಡಲಾಗಿತ್ತು. ಇನ್ನೇನು ಕೆಲವೇ ದಿನಗಳಲ್ಲಿ ಸಿನಿಮಾ ಸೆಟ್ ಏರಲಿದೆ.
ಇದೆಲ್ಲದರ ನಡುವೆ, ‘ಸರ್ಕಾರು ವಾರಿ ಪಾಟ’ ಸಿನಿಮಾ ಸುತ್ತ ಮತ್ತೊಂದು ಸುದ್ದಿ ಸ್ಯಾಂಡಲ್ವುಡ್ ಸುತ್ತ ಗಿರಕಿ ಹೊಡೆಯುತ್ತಿದೆ. ಅದೇನೆಂದರೆ, ಈ ಸಿನಿಮಾದಲ್ಲಿ ಸ್ಯಾಂಡಲ್ವುಡ್ ಕಲಾವಿದರಿಗೆ ಹೆಚ್ಚಿನ ಪಾತ್ರಗಳನ್ನು ನೀಡಲಾಗುತ್ತಿದೆ ಎಂದು ಹೇಳಲಾಗುತ್ತಿದೆ.
ಟಾಲಿವುಡ್ ಅಂಗಳದಲ್ಲಿ ‘ಸರ್ಕಾರು ವಾರಿ ಪಾಟ’ ಚಿತ್ರಕ್ಕೆ ಕಲಾವಿದರ ಆಯ್ಕೆ ನಡೆಯುತ್ತಿದೆ. ಸಿನಿಮಾದ ಪ್ರಮುಖ ಪಾತ್ರಗಳಿಗೆ ಕನ್ನಡದ ನಟರನ್ನೇ ಆಯ್ಕೆ ಮಾಡಿಕೊಳ್ಳುವ ಕುರಿತು ಚರ್ಚೆ ನಡೆಯುತ್ತಿದೆ ಎಂದು ಟಾಲಿವುಡ್ ಮೂಲಗಳು ತಿಳಿಸಿವೆ.
ಸಿನಿಮಾದ ಮುಖ್ಯ ಪಾತ್ರವೊಂದಕ್ಕೆ ಸುದೀಪ್ ಅಥವಾ ಉಪೇಂದ್ರ ಅವರನ್ನು ಅಪ್ರೋಚ್ ಮಾಡುವುದಕ್ಕೆ ನಿರ್ಮಾಪಕರು ನಿರ್ಧಾರ ಮಾಡಿದ್ದು, ಇತರ ಪ್ರಮುಖ ಪಾತ್ರಗಳಿಗೂ ಕನ್ನಡದ ಕಲಾವಿದರೇ ಇರಲಿ ಎಂಬ ಇಂಗಿತ ವ್ಯಕ್ತವಾಗಿದೆ ಎಂದು ಹೇಳಲಾಗಿದೆ.
ಟಾಲಿವುಡ್ನ ಸುಪರ್ ಹಿಟ್ ಹೀರೋಗಳ ಸಿನಿಮಾಗಳು ಕನ್ನಡ ಚಿತ್ರರಂಗಗಳಲ್ಲಿ ಭರ್ಜರಿಯಾಗಿ ಶೋ ಅಗುವುದರ ಜೊತೆಗೆ ಅಷ್ಟೇ ಪ್ರಮಾಣದಲ್ಲಿ ಆದಾಯವನ್ನೂ ಗಳಿಸುತ್ತವೆ. ಆ ಕಾರಣಕ್ಕಾಗಿ, ಸಿನಿಮಾದಲ್ಲಿ ಕನ್ನಡದ ಕಲಾವಿದರು ಇದ್ದರೆ ಸಿನಿಮಾಕ್ಕೆ ಮತ್ತಷ್ಟು ಪ್ಲಸ್ ಪಾಯಿಂಟ್ ಆಗಲಿದೆ. ಒಂದುವೇಳೆ, ಸಿನಿಮಾವನ್ನು ಡಬ್ ಮಾಡಿದರೂ ಇನ್ನಷ್ಟು ಲಾಭವೇ ಆಗಲಿದೆ ಎಂಬುದು ನಿರ್ಮಾಪಕರ ಲೆಕ್ಕಾಚಾರವಾಗಿದೆ ಎನ್ನಲಾಗಿದೆ. ಸದ್ಯ ಸಿನಿಮಾಕ್ಕೆ ಉಪೇಂದ್ರ, ಸುದೀಪ್ ಹೆಸರುಗಳು ಹರಿದಾಡುತ್ತಿದ್ದು, ಮುಂದಿನ ದಿನಗಳಲ್ಲಿ ಇನ್ನೂ ಯಾವೆಲ್ಲ ಕನ್ನಡ ಕಲಾವಿದರು ಈ ಸಿನಿಮಾದಲ್ಲಿ ಇರಲಿದ್ದಾರೆ ಎಂಬುದು ಕಾದುನೋಡೇಕು.