ರಸ್ತೆ ಅಪಘಾತದಲ್ಲಿ ರಾಮನಗರ ಖಾಸಗಿ ವಾಹಿನಿಯ ವರದಿಗಾರ ಹನುಮಂತು ನಿಧನ…!
ರಸ್ತೆ ಅಪಘಾತದಲ್ಲಿ ರಾಮನಗರದ ಜಿಲ್ಲೆಯ ಖಾಸಗಿ ವಾಹಿನಿಯ ವರದಿಗಾರ ಹನುಮಂತು ಇಂದು ನಿಧನರಾಗಿದ್ದಾರೆ.
ರಾಮನಗರದ ಜಿಲ್ಲಾ ಕಾರಾಗೃಹದ ಬಳಿ ವರದಿ ಮಾಡಿ ಹಿಂದಿರುಗುತ್ತಿದ್ದ ವೇಳೆ ಅಪಘಾತ ನಡೆದಿದೆ. ರಾಮನಗರದ ಶಂಕರ್ ನಾಟಿಕೋಳಿ ಡಾಬಾ ಬಳಿ ವೇಗವಾಗಿ ಬಂದ ಹಿಂದಿನಿಂದ ಬಂದ ಎಟಿಎಂಗೆ ಹಣ ತುಂಬುವ ವಾಹನ ಹನುಮಂತ ಅವರ ಬೈಕಿಗೆ ಡಿಕ್ಕಿ ಹೊಡೆದಿದೆ. ಈ ಸಂದರ್ಭ ತಲೆಗೆ ಪೆಟ್ಟು ಬಿದ್ದು, ಅತಿಯಾದ ರಕ್ತಸ್ರಾವದಿಂದ ಸಾವನ್ನಪ್ಪಿದ್ದಾರೆ. ರಾಮನಗರದ ಜೈಲಿನಲ್ಲಿರುವ ವಿಚಾರಣಾಧೀನ ಖೈದಿಗಳನ್ನು ಪರಪ್ಪನ ಅಗ್ರಹಾರ ಸ್ಥಳಾಂತರಿಸುವ ಕುರಿತು ತಮ್ಮ ಕೊನೆಯ ವರದಿಯನ್ನು ನೀಡಿದ್ದರು. ಮರಣೋತ್ತರ ಪರೀಕ್ಷೆಗೆ ರಾಮನಗರ ಜಿಲ್ಲಾಸ್ಪತ್ರೆಗೆ ಮೃತದೇಹವನ್ನು ರವಾನೆ ಮಾಡಲಾಗಿದೆ.
ಹನುಮಂತು ಅವರು ಕಳೆದ 6 ವರ್ಷಗಳಿಂದ ರಾಮನಗರ ವರದಿಗಾರರಾಗಿ ಕಾರ್ಯನಿರ್ವಹಿಸುತ್ತಿದ್ದರು. ಅವರಿಗೆ ವಿವಾಹವಾಗಿ ಮೂರು ವರ್ಷವಾಗಿದ್ದು, ಒಂದು ವರ್ಷದ ಮಗುವಿದೆ. ಹನುಮಂತು ಅವರ ನಿಧನಕ್ಕೆ ರಾಮನಗರ ಜಿಲ್ಲಾ ಪತ್ರಕರ್ತ ಸಹೋದ್ಯೋಗಿಗಳು ಕಂಬನಿ ಮಿಡಿದಿದ್ದಾರೆ.
ಅಪಘಾತದಿಂದ ದುರ್ಮರಣಕ್ಕೀಡಾದ ರಾಮನಗರ ಜಿಲ್ಲೆಯ ಪಬ್ಲಿಕ್ ಟಿವಿ ವರದಿಗಾರ ಹನುಮಂತು ಅವರ ಅಕಾಲ ನಿಧನಕ್ಕೆ ತೀವ್ರ ಕಂಬನಿ ಮಿಡಿಯುತ್ತೇನೆ.
ಅವರ ಕುಟುಂಬ ವರ್ಗದವರಿಗೆ ದುಃಖ ಭರಿಸುವ ಶಕ್ತಿಯನ್ನು ಕರುಣಿಸಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ. ಹನುಮಂತು ಅವರ ಕುಟುಂಬಕ್ಕೆ 5 ಲಕ್ಷ ರೂಪಾಯಿಗಳ ವೈಯಕ್ತಿಕ ನೆರವು ನೀಡುತ್ತೇನೆ.
1/2 pic.twitter.com/UnU0wvdEke— H D Kumaraswamy (@hd_kumaraswamy) April 21, 2020
ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ಹಾಗೂ ರಾಮನಗರ ಶಾಸಕರಾದ ಅನಿತಾ ಕುಮಾರಸ್ವಾಮಿ ಅವರು ವರದಿಗಾರ ಹನುಮಂತು ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. ಹನುಮಂತು ಅವರ ಕುಟುಂಬಕ್ಕೆ ವೈಯಕ್ತಿಕ 5 ಲಕ್ಷ ಪರಿಹಾರ ಘೋಷಿಸಿದ್ದು, ಆರೋಗ್ಯ ಸಮಸ್ಯೆ ಇರುವ ಹನುಮಂತು ಅವರ ಮಗುವಿನ ಸಂಪೂರ್ಣ ಚಿಕಿತ್ಸೆಯ ಹೊಣೆ ಹೊರುವುದಾಗಿ ತಿಳಿಸಿದ್ದಾರೆ.