ರಾಜ್ಯದಲ್ಲಿ ಮೂಢ ನಂಬಿಕೆ ನಿಷೇಧ ಕಾಯ್ದೆ ಜಾರಿ : ಮಾಟ ಮಂತ್ರಕ್ಕೆ ಬ್ರೇಕ್
ಇನ್ಮುಂದೆ ಮಾಟ ಮಂತ್ರ , ಸಿಡಿ ಹಾಯುವುದು , ಬೆತ್ತಲೆ ಸೇವೆ ಇಂತಹ ಮೂಢ ನಂಬಿಕೆಗಳಿಗೆ ರಾಜ್ಯ ಸರ್ಕಾರ ಬ್ರೇಕ್ ಹಾಕಿದೆ.
ಹೌದು… ರಾಜ್ಯದಲ್ಲಿ ಮೂಢ ನಂಬಿಕೆ ನಿಷೇಧ ಕಾಯ್ದೆಯನ್ನು ಜಾರಿಗೊಳಿಸಿ ರಾಜ್ಯ ಬಿಜೆಪಿ ಸರ್ಕಾರ ಮಹತ್ವದ ಆದೇಶ ಹೊರಡಿಸಿದೆ.
ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲಿ ರೂಪಿಸಲಾಗಿದ್ದ ಮಾಟ ಮಂತ್ರ ಮತ್ತು ವಾಮಾಚಾರ ನಿಯಂತ್ರಿಸುವ ಮಸೂದೆ 2017 ರ ಕಾಯ್ದೆಯನ್ನು ಯಾವುದೇ ಬದಲಾವಣೆಯಿಲ್ಲದೇ 2020 ರ ಜನವರಿ 4 ರಿಂದ ಜಾರಿಗೆ ಬರುವಂತೆ ರಾಜ್ಯ ಬಿಜೆಪಿ ಸರ್ಕಾರವು ಅಧಿಸೂಚನೆ ಹೊರಡಿಸಿದ್ದು, ಶೀಘ್ರವೇ ಕರ್ನಾಟಕ ರಾಜ್ಯಪತ್ರ ಹೊರಡಿಸಲಿದೆ .
ಎಂಜಲೆಲೆಯ ಮೇಲೆ ಉರುಳುವ ಮಡೆ ಸ್ನಾನ , ಸಿಡಿ ಹಾಯುವುದು , ಬೆತ್ತಲೆ ಸೇವೆ , ಋತುಮತಿಯಾದಾಗ ಮತ್ತು ಗರ್ಭಿಣಿಯನ್ನು ಊರ ಹೊರಗಿಡುವ ಪದ್ಧತಿ , ವಶೀಕರಣ , ವಾಮಾಚಾರ, ದೆವ್ವ ಬಿಡಿಸುವದು ಸೇರಿದಂತೆ ಹಲವು ಪದ್ಧತಿಗಳನ್ನು ನಿಷೇಧಿಸಲು ಸರ್ಕಾರ ಮುಂದಾಗಿದೆ . ನಿಯಮ ಉಲ್ಲಂಘಿಸಿದ ಅಪರಾಧಿಗಳಿಗೆ ಒಂದು ವರ್ಷದಿಂದ 7 ವರ್ಷದವರೆಗೆ ಜೈಲು ಶಿಕ್ಷೆ , 5 ರಿಂದ 50 ಸಾವಿರ ರೂಪಾಯಿವರೆಗೆ ದಂಡ ವಿಧಿಸಲಾಗುತ್ತದೆ .