ರಾಜ್ಯ ಬೊಕ್ಕಸ ಖಾಲಿಯಾಗಿರೋದು ಸತ್ಯ – ಸಿಎಂ ಪುತ್ರ ವಿಜಯೇಂದ್ರ ಸ್ಪಷ್ಟ
ನನ್ನ ಗಮನದ ಪ್ರಕಾರ ರಾಜ್ಯ ಬೊಕ್ಕಸ ಖಾಲಿಯಾಗಿರೋದು ಸತ್ಯ ಎಂದು ಮೈಸೂರಿನ ವರುಣಾದಲ್ಲಿ ಸಿಎಂ ಪುತ್ರ ವಿಜಯೇಂದ್ರ ಹೇಳಿದ್ದಾರೆ. ಈ ಹೇಳಿಕೆ ಸದ್ಯ ಎಲ್ಲರ ಕೆಂಗೆಣ್ಣಿಗೆ ಗುರಿಯಾಗಿದೆ.
ಆದ್ರೆ ಈ ಬಗ್ಗೆ ಅಧಿಕೃತ ಅಂಕಿಅಂಶಗಳು ನನ್ನಲ್ಲಿ ಇಲ್ಲ. ಬೊಕ್ಕಸದಲ್ಲಿ ಹಣವಿಲ್ಲದಿರೋದು ಯಡ್ಯೂರಪ್ಪನವರ ಕೈಕಟ್ಟಿ ಹಾಕಿದಂತಾಗಿರೋದು ನಿಜ. ಜನಪರ ಯೋಜನೆ ಜಾರಿಗೆ ತರಲು ಯಡ್ಯೂರಪ್ಪರಿಂದ ಸಾಧ್ಯವಾಗುತ್ತಿಲ್ಲ. ಇದು ಸಹಜವಾಗಿ ಯಡ್ಯೂರಪ್ಪರಿಗೆ ಬೇಸರ ತರಿಸಿದೆ. ಈ ಬೇಸರದ ಮಾತು ಕೆಲವರಿಗೆ ಅಸಹಾಯಕತೆ ದೃಷ್ಟಿಯಲ್ಲಿ ಕಾಣುತ್ತಿದೆ. ಯಡ್ಯೂರಪ್ಪರವರು ಅಸಹಾಯಕರಾಗಿಲ್ಲ. ಭವಿಷ್ಯದಲ್ಲಿ ಅವರು ಬೊಕ್ಕಸ ತುಂಬಿಸಿ ಜನಪರ ಯೋಜನೆಗಳನ್ನ ಜಾರಿ ಮಾಡುವ ವಿಶ್ವಾಸ ಇದೆ.
5 ವರ್ಷದ ಕಾಂಗ್ರೆಸ್ ಆಡಳಿತ 1.5 ವರ್ಷ ಮೈತ್ರಿ ಆಡಳಿತದಲ್ಲಿ ಬರಿ ಹಗಲು ದರೋಡೆ ನಡೆದಿದೆ. ಇದರಿಂದಾಗಿ ರಾಜ್ಯದ ಬೊಕ್ಕಸ ಸಂಪೂರ್ಣ ಖಾಲಿಯಾಗಿದೆ. ಹೀಗಾಗಿ ರಾಜ್ಯದ ಬೊಕ್ಕಸ ಖಾಲಿಯಾಗಿದೆ. ಆದ್ರೂ ಸಹ ನೆರೆ ಪರಿಹಾರಕ್ಕೆ 1500 ಸಾವಿರ ಕೋಟಿ ಖರ್ಚು ಮಾಡಿದ್ದಾರೆ. ಕೇಂದ್ರದಿಂದ ಹಣ ಬರೋದು ವಿಳಂಬವಾಗಿದೆ. ಶೀಘ್ರದಲ್ಲೆ ಪರಿಹಾರ ಬರುವ ನಿರೀಕ್ಷೆ ಇದೆ ಎಂದಿದ್ದಾರೆ.
ಇದೇ ವೇಳೆ ಕೆ.ಆರ್.ಪೇಟೆ ಕ್ಷೇತ್ರದಲ್ಲಿ ಉಪಚುನಾವಣೆಗೆ ಸ್ಪರ್ಧೆ ವಿಚಾರವನ್ನು ನಯವಾಗಿಯೇ ತಳ್ಳಿಹಾಕಿದ ವಿಜಯೇಂದ್ರ ವರುಣಾ ಕ್ಷೇತ್ರದಲ್ಲಿ ಇಷ್ಟೊಂದು ಪ್ರೀತಿ ತೋರಿಸುವಾಗ ಬೇರೆ ಕಡೆ ಹೋಗೋ ಮಾತೇಲ್ಲಿ ಎಂದಿದ್ದಾರೆ.
ವರುಣಾ ಕ್ಷೇತ್ರದ ಜನರನ್ನ ನೋಡಿ ತುಂಬಾ ದಿನ ಆಗಿತ್ತು. ಕ್ಷೇತ್ರದ ಕಾರ್ಯಕರ್ತರನ್ನ ಭೇಟಿ ಮಾಡಿ ಮಾತನಾಡಿಸಬೇಕಿತ್ತು. ಹಾಗಾಗಿ ಇಂದು ವರುಣಾ ಕ್ಷೇತ್ರದಲ್ಲಿ ಸಭೆ ಆಯೋಜನೆ ಮಾಡಿದ್ದೇವೆ. ಈ ಹಿಂದೇಯೂ ಸಭೆ ಆಯೋಜಿಸಿ ಕಾರಣಾಂತರಗಳಿಂದ ಮುಂದೂಡಿದ್ದೆ. ಸದ್ಯ ಮತ್ತೆ ವರುಣಾದಲ್ಲಿ ಸ್ಪರ್ಧಿಸುವ ವಿಚಾರ ಈಗ ಚರ್ಚೆ ಬೇಡ. ಪಕ್ಷ ಸಂಘಟನೆಗಾಗಿ ವರುಣ ಕ್ಷೇತ್ರಕ್ಕೆ ಭೇಟಿ ಕೊಟ್ಟಿದ್ದೇನೆ ಎಂದು ಸಿಎಂ ಪುತ್ರ ವಿಜಯೇಂದ್ರ ಹೇಳಿದ್ದಾರೆ.