ರಾಯಚೂರಿನಲ್ಲಿ ಕಾಡುತ್ತಿದೆ ಡೆಂಗ್ಯೂ ಭೀತಿ : ಶಂಕಿತ ಪ್ರಕರಣಗಳು ಪತ್ತೆ
ಸ್ವಚ್ಛತೆಯಿಲ್ಲದೇ ಅವ್ಯವಸ್ಥೆಯಿಂದ ಕೂಡಿದ ರಾಯಚೂರು ಜಿಲ್ಲೆಯ ಸಿಂಧನೂರು ನಗರದಲ್ಲಿ ಶಂಕಿತ ಡೆಂಗ್ಯೂ ಪ್ರಕರಣಗಳು ಪತ್ತೆಯಾಗಿವೆ.
ಸಿಂಧನೂರಿನ ನಗರದ ಇಲ್ಲಿನ ವಾರ್ಡ್ ನಂ.೧ ರಲ್ಲಿ ಹಲವು ಶಂಕಿತ ಡೆಂಗ್ಯೂ ಪ್ರಕರಣಗಳು ಪತ್ತೆಯಾಗಿದ್ದು, ಖಾಸಗಿ ಆಸ್ಪತ್ರೆಗಳಲ್ಲಿ ಪಾಲಕರು ತಮ್ಮ ತಮ್ಮ ಮಕ್ಕಳಿಗೆ ಚಿಕಿತ್ಸೆ ಕೊಡಿಸುತ್ತಿದ್ದಾರೆ. ನಗರದ ವಾರ್ಡ್ ನಂ.೧ ರಲ್ಲಿ ಮುಸರತ್ (5 ವರ್ಷ) , ಮಸೂದ್ ( ಮೂರುವರೆ ವರ್ಷ), ಮದೀಯಾ ( 5 ತಿಂಗಳು), ಮಹ್ಮದ್ ಅಲಿ ( 5 ವರ್ಷ) ಹುಸೇನ್ (6 ತಿಂಗಳು) ಫತೀಶಾ ( 8. ವರ್ಷ), ಮಹ್ಮದ್ ಆಬೀಜ್ (8 ವರ್ಷ) ಫೌಜೀಯಾ (8 ವರ್ಷ) , ಭಕ್ಷು (14) ವರ್ಷ, ನಗ್ಮಾ (6) ವರ್ಷ, ಸಾದೀಯಾ ( 10) ವರ್ಷ, ರಾಜ್ ಮಹ್ಮದ್ (7 ವರ್ಷ), ಸುಮಯ್ಯ ( 6 ವರ್ಷ) , ಸೂಫಿಯಾನ್ ( 8 ವರ್ಷ) ಎನ್ನುವ ಮಕ್ಕಳಿಗೆ ಶಂಕಿತ ಡೆಂಗ್ಯೂ ಕಾಣಿಸಿಕೊಂಡಿದೆ.
ನಗರದ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಕುಟುಂಬ ಮೂಲಗಳು ಸ್ಪಷ್ಟ ಪಡಿಸಿವೆ. ಈಗಾಗಲೇ ಶಂಕಿತ ಡೆಂಗ್ಯೂ ಪ್ರಕರಣಗಳು ಕಂಡು ಬಂದ ಮನೆಗಳಿಗೆ ನರ್ಸ್ಗಳು ಭೇಟಿ ನೀಡಿ, ವರದಿ ಸಿದ್ಧಪಡಿಸಿ ಮೇಲಾಧಿಕಾರಿಗಳಿಗೆ ನೀಡಿದ್ದಾರೆ. ಆದರೂ ಡೆಂಗ್ಯೂ ನಿಯಂತ್ರಣ ಹಿನ್ನೆಲೆಯ ಕಾರ್ಯ ಚುರುಕಾಗಿ ನಡೆದಿಲ್ಲ.
ಕಳೆದ ಹಲವು ದಿನಗಳಿಂದ ಸಿಂಧನೂರು ನಗರದಲ್ಲಿ ಡೆಂಗ್ಯೂ ಕಾಣಿಸಿಕೊಳ್ಳುತ್ತಿದೆ, ಅದರಲ್ಲಿಯೂ ಚಿಕ್ಕ ಮಕ್ಕಳ ರಕ್ತದಲ್ಲಿ ಪ್ಲೆಟ್ಲೆಟ್ ನಲ್ಲಿ ಕೌಂಟ್ ಕಡಿಮೆಯಾಗುತ್ತಿದ್ದು, ಮಕ್ಕಳು ಜ್ವರದಿಂದ ಬಳಲುತ್ತಿದ್ದಾರೆ, ಜ್ವರದಿಂದ ಬಳಲಿ ಖಾಸಗಿ ಆಸ್ಪತ್ರೆಯಲ್ಲಿ ಖರ್ಚು ಮಾಡುತ್ತಿದ್ದಾರೆ, ನಗರದಲ್ಲಿ ಸ್ವಚ್ಛತೆಗೆ
ಅಧಿಕಾರಿಗಳು ಹೆಚ್ಚು ಮುತುವರ್ಜಿ ವಹಿಸಬೇಕೆಂದು ಎಂದು ನಾಗರಿಕರು ಆಗ್ರಹಿಸಿದ್ದಾರೆ,ನಗರದಲ್ಲಿ ಕಳೆದ 1 ವರ್ಷದಿಂದ ಫಾಗಿಂಗ್ ಮಾಡಿಲ್ಲ. ನಗರಸಭೆಯವರಿಗೆ ತಿಳಿಸಿದಾಗ್ಯೂ ಕಾಳಜಿ ವಹಿಸುತ್ತಿಲ್ಲ, ರಿಪೇರಿ ನೆಪದಲ್ಲಿ ವಾರ್ಡಗಳಲ್ಲಿ ಎಲ್ಲಿ ಬೇಕೆಂದರಲ್ಲಿ ಗುಂಡಿಗಳು ಬಿದ್ದಿವೆ, ಸ್ವಚ್ಛತೆ ಇಲ್ಲದೆ ತ್ಯಾಜ್ಯವನ್ನು ಸ್ವಚ್ಛಗೊಳಿಸದೇ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ. ಇದರಿಂದಾಗಿ ಸಾಂಕ್ರಾಮಿಕ ರೋಗಗಳು ಹರಡುವ ಭೀತಿಯಲ್ಲಿ ಜನರಿದ್ದಾರೆ. ಕೂಡಲೇ ಆರೋಗ್ಯ ಇಲಾಖೆಯ ಅಧಿಕಾರಿಗಳು ಹಾಗೂ ನಗರಸಭೆ ಅಧಿಕಾರಿಗಳು ಜನರ ಆರೋಗ್ಯ ಕಾಪಾಡುವಲ್ಲಿ ಗಮನಹರಿಸಬೇಕು ಎಂದು ನಿವಾಸಿಗಳು ಆಗ್ರಹಿಸಿದ್ದಾರೆ.