ಶಿರೋಳದಲ್ಲಿ ದಲಿತ ಕುಟುಂಬದ ತಂದೆ-ಮಗನ ಜೋಡಿ ಕೊಲೆ ಪ್ರಕರಣ : ಕುಟುಂಬಸ್ಥರ ಪ್ರತಿಭಟನೆ
ಬಾಗಲಕೋಟೆ ಜಿಲ್ಲೆ ಮುಧೋಳ ಶಿರೋಳದಲ್ಲಿ ದಲಿತ ಕುಟುಂಬದ ತಂದೆ-ಮಗನ ಜೋಡಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳನ್ನು ಬಂಧಿಸುವಂತೆ ಆಗ್ರಹಿಸಿ ಮೃತ ಕುಟುಂಬಸ್ಥರು ಪ್ರತಿಭಟನೆ ನಡೆಸುತ್ತಿದ್ದಾರೆ.
ನಿನ್ನೆ ಶಿರೋಳ ಗ್ರಾಮದಲ್ಲಿ ತಂದೆ ಮಲೆಪ್ಪ ತಳಗೇರಿ,ಹಾಗೂ ಮಗ ವಿಠ್ಠಲ ತಳಗೇರಿ ಬರ್ಬರ ಕೊಲೆಯಾಗಿತ್ತು. ಮಾರಕಾಸ್ತ್ರಗಳಿಂದ ತಂದೆ -ಮಗನ ಜೋಡಿ ಕೊಲೆಗೈದು ದುಷ್ಕರ್ಮಿಗಳು ಪರಾರಿಯಾಗಿದ್ದಾರೆ. ಆದರೆ ಆರೋಪಿಗಳನ್ನು ಬಂಧಿಸದ ಪೊಲೀಸರು ಆರೋಪಿಗಳನ್ನು ಉಳಿಸುವಂತಹ ಕಾರ್ಯ ಮಾಡುತ್ತಿದ್ದಾರೆಂದು ಮೃತರ ಕುಟುಂಬಸ್ಥರು ಆರೋಪಿಸುತ್ತಿದ್ದಾರೆ. ಕುಟುಂಬಸ್ಥರು ಜಿಲ್ಲಾಡಳಿತ ಭವನದ ಮುಂದೆ ಶವವಿಟ್ಟು ಪ್ರತಿಭಟಿಸುವ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಪೊಲೀಸರು ಬೇರೆಡೆ ಶವ ಸ್ಥಳಾಂತರಿಸಿದ್ದಾರೆ.
ಇದರಿಂದ ಜಿಲ್ಲಾಸ್ಪತ್ರೆಯಿಂದ ಬೇರೆಡೆ ಶವ ಸ್ಥಳಾಂತರಿಸಿರೋ ಪೊಲೀಸರ ಕ್ರಮ ಖಂಡಿಸಿ,ನವನಗರ ಪೊಲೀಸ್ ಠಾಣೆಗೆ ಕುಟುಂಬಸ್ಥರು ಮುತ್ತಿಗೆ ಹಾಕಿದ್ದಾರೆ. ನಮ್ಗೆ ಶವ ಇಲ್ಲಿಗೆ ತಂದುಕೊಡಿ,ಶವ ಕಳ್ಳತನ ಮಾಡಿದ್ದೀರಿ, ನಮ್ಗೆ ಹೇಳದೇ ಹೇಗೆ ಬೇರೆಡೆ ಶವ ಸ್ಥಳಾಂತರಿಸಿದ್ದೀರಿ ಎಂದು ಪೊಲೀಸ್ ಠಾಣೆ ಎದುರು ಮೃತರ ಕುಟುಂಬಸ್ಥರು,ಡಿಎಸ್ ಎಸ್ ಸಂಘಟನೆ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದ್ದಾರೆ.
ಶವ ಬೇರೆಡೆ ಸ್ಥಳಾಂತರಿಸಿದ್ದಕ್ಕೆ ಪಿಎಸ್ಐ ತರಾಟೆಗೆ ತೆಗೆದುಕೊಂಡ ಕುಟುಂಬಸ್ಥರು, ಮುಖಂಡರು ದುಷ್ಕರ್ಮಿಗಳ ಪತ್ತೆ ಹಚ್ಚಿ, ಬಂಧಿಸಲು ಆಗ್ರಹಿಸಿದ್ದಾರೆ.