ಹಾಲಿನ ಕವರ್ ನೀಡಿದ್ರೆ ಮೊಸರು, ಚೀಸ್, ಮಜ್ಜಿಗೆ, ಲಸ್ಸಿ ಮೇಲೆ ರಿಯಾಯಿತಿ…
ದೇಶದಾದ್ಯಂತ ಪ್ಲಾಸ್ಟಿಕ್ ಬಳಕೆ ನಿಷೇಧಕ್ಕೆ ಕೇಂದ್ರ ಸರ್ಕಾರ ಮುಂದಾಗಿದೆ. ʼಸೇ ನೋ ಟು ಪ್ಲಾಸ್ಟಿಕ್ʼ ಅಭಿಯಾನದ ಮುಂದಿನ ಹಂತವಾಗಿ ಪಶುಸಂಗೋಪನೆ ಮತ್ತು ಮೀನುಗಾರಿಕಾ ಸಚಿವಾಲಯ ಮಹತ್ವದ ನಿರ್ಧಾರ ಕೈಗೊಳ್ಳುತ್ತಿದೆ.
ಯೋಜನೆ ಪ್ರಕಾರ, ಹಾಲು ಹಾಗೂ ಹಾಲಿನ ಉತ್ಪನ್ನಗಳನ್ನು ಪ್ಯಾಕ್ ಮಾಡಲು ಬಳಸುವ ಪ್ಲಾಸ್ಟಿಕನ್ನು ಮರು ಬಳಕೆ ಮಾಡಲು ಸಚಿವಾಲಯ ಮುಂದಾಗಿದೆ. ಗ್ರಾಹಕರು ಹಾಲು ಹಾಗೂ ಹಾಲಿನ ಉತ್ಪನ್ನದ ಪ್ಯಾಕಿಂಗ್ ಗೆ ಬಳಸಿರುವ ಪ್ಲಾಸ್ಟಿಕನ್ನು ವಾಪಸ್ ನೀಡಬೇಕು. ಹೀಗೆ ಮಾಡಿದ ಗ್ರಾಹಕರಿಗೆ ಹಾಲು, ಮೊಸರು, ಚೀಸ್, ಮಜ್ಜಿಗೆ, ಲಸ್ಸಿ ಮೇಲೆ ರಿಯಾಯಿತಿ ಸಿಗುವ ಸಾಧ್ಯತೆಯಿದೆ.
ಇದ್ರಿಂದ ಹಾಲಿನ ಉತ್ಪನ್ನಕ್ಕೆ ಬಳಸುವ ಪ್ಲಾಸ್ಟಿಕ್ ಮರುಬಳಕೆ ಮಾಡಲು ಸುಲಭವಾಗಲಿದೆ. ಹಾಗೆ ಪರಿಸರ ಮಾಲಿನ್ಯ ತಪ್ಪಿಸಬಹುದು. ಮುಂದಿನ ಅಕ್ಟೋಬರ್ 2 ರಿಂದ ಈ ಯೋಜನೆ ಜಾರಿಗೆ ಬರುವ ಸಾಧ್ಯತೆ ಹೆಚ್ಚಿದೆ. ಆಗಸ್ಟ್ 15ರಂದು ದೇಶವನ್ನುದ್ದೇಶಿಸಿ ಮಾತನಾಡಿದ್ದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಪ್ಲಾಸ್ಟಿಕ್ ಬಳಕೆ ಕಡಿಮೆ ಮಾಡುವಂತೆ ಮನವಿ ಮಾಡಿದ್ದರು.