Cricket Ranaji : ಮತ್ತೆ ಸೆಮಿಫೈನಲ್ ನಲ್ಲಿ ಅಂತ್ಯಗೊಂಡ ಕರ್ನಾಟಕದ ಹೋರಾಟ…
ಕರ್ನಾಟಕದ ಪ್ರಸಕ್ತ ಸಾಲಿನ ರಣಜಿ ಅಭಿಯಾನ ಸೆಮಿಫೈನಲ್ ಹಂತದಲ್ಲಿಯೇ ಕೊನೆಗೊಂಡಿದೆ. ಕಳೆದೆರಡು ವರ್ಷಗಳಂತೆಯೇ ರಾಜ್ಯ ತಂಡವು ಇದೇ ಹಂತದಲ್ಲಿ ಎಡವಿದೆ.
ಈಡನ್ ಗಾರ್ಡನ್ಸ್ನಲ್ಲಿ ನಡೆದ ಸೆಮಿಫೈನಲ್ ಗೆಲ್ಲಲು ಬಂಗಾಳ ಒಡ್ಡಿದ 352 ರನ್ನುಗಳ ಸವಾಲಿನ ಎದುರು 177 ರನ್ನುಗಳಿಗೆ ಕುಸಿಯವ ಮೂಲಕ ಕರ್ನಾಟಕ ತಂಡವು ಭಾರೀ ಅಂತರದ ಸೋಲು ಅನುಭವಿಸಿತು.
ಮೂರು ವಿಕೆಟ್ ನಷ್ಟಕ್ಕೆ 98 ರನ್ನುಗಳ ಮೊತ್ತದಿಂದ ಮಂಗಳವಾರ ನಾಲ್ಕನೇ ದಿನದಾಟ ಶುರುವಿಟ್ಟುಕೊಂಡ ಕರ್ನಾಟಕ ಆರಂಭದಲ್ಲಿಯೇ ಆಘಾತ ಅನುಭವಿಸಿತು.
ತಂಡವನ್ನು ಕೈಹಿಡಿಯುತ್ತಾರೆ ಎಂದು ನಂಬಲಾಗಿದ್ದ ದೇವದತ್ ಪಡಿಕ್ಕಲ್ (62) ಮತ್ತು ಮನೀಶ್ ಪಾಂಡೆ (12) ಬೇಗ ನಿರ್ಗಮಿಸಿದರು.
ಈ ಅವಳಿ ಆಘಾತದಿಂದ ಕರ್ನಾಟಕ ಚೇತರಿಸಿಕೊಳ್ಳಲಿಲ್ಲ. ಬಾಲಂಗೋಚಿಗಳಾದ ಮಿಥುನ್ (38) ಮತ್ತು ಗೌತಮ್ (22) ಕೊಂಚ ಕೊಸರಾಡಿದರಾದರೂ ಅದರಿಂದ ಫಲಿತಾಂಶ ಬದಲಾಗಲಿಲ್ಲ. ಮುಕೇಶ್ ಕುಮಾರ್ ಆರು ವಿಕೆಟ್ ಕಿತ್ತರು.
ಈ ಜಯದೊಂದಿಗೆ ಪಶ್ಚಿಮ ಬಂಗಾಳ ತಂಡ ಹದಿಮೂರು ವರ್ಷಗಳ ನಂತರ ದೇಶೀಯ ಪ್ರಭುತ್ವದ ರಣಜಿ ಟ್ರೋಫಿಯ ಪ್ರಶಸ್ತಿ ಸುತ್ತಿಗೆ ಪ್ರವೇಶ ಪಡೆದುಕೊಂಡಂತಾಗಿದೆ.