Lockdown: ಬಡ ಕಾರ್ಮಿಕರ ಮೇಲೆ ಬಾಡಿಗೆ ಮನೆ ಮಾಲೀಕನ ದೌರ್ಜನ್ಯ
ಕೂಲಿ ಕಾರ್ಮಿಕರು ಲಾಕ್ಡೌನ್ ಸಂದರ್ಭದಲ್ಲಿ ಮನೆ ಬಾಡಿಗೆ ಕಟ್ಟಲಾರದೆ ಇರುವುದರಿಂದಾಗಿ ಮನೆಯನ್ನು ಬಾಡಿಗೆ ನೀಡಿದ್ದ ಮನೆ ಮಾಲೀಕ ಮನೆಯ ಮೂಲ ಸೌಕರ್ಯಗಳನ್ನು ಒದಗಿಸದೆ ದೌರ್ಜನ್ಯ ಎಸಗಿರುವ ಅಮಾನವೀಯ ಘಟನೆ ಮಾಲೂರು ತಾಲೂಕಿನ ಕರಿನಾಯಕನಹಳ್ಳಿಯಲ್ಲಿ ನಡೆದಿದೆ.
ದೇಶಾದ್ಯಂತ ಲಾಕ್ಡೌನ್ ವಿಧಿಸಿದ್ದು ಎಲ್ಲಾ ರೀತಿಯ ವ್ಯವಹಾರ ಚಟುವಟಿಕೆಗಳನ್ನು ಸ್ಥಗಿತಗೊಳಿಸಲಾಗಿದೆ. ಇದರಿಂದಾಗಿ ಜನರ ಆದಾಯ ಮೂಲವೇ ನಿಂತುಹೋಗಿದೆ. ಅದರಲ್ಲಿಯೂ ದಿನಗೂಲಿ ಮಾಡಿ ಬದುಕುತ್ತಿದ್ದ ವಲಸೆ ಕೂಲಿ ಕಾರ್ಮಿಕರು ನಿರ್ಗತಿಕರಾಗಿದ್ದಾರೆ. ಉದ್ಯೋಗ ಹರಸಿ ಬಹುದೂರದ ಊರುಗಳಿಂದ ನಗರ ಪಟ್ಟಣಗಳಿಗೆ ಗುಳೆ ಬಂದಿದ್ದ ಕಾರ್ಮಿಕರು ಆರೋಗ್ಯದ ಆತಂಕದಿಂದ ತಮ್ಮೂರಿಗೂ ಹೋಗಲಾದರೆ, ಕೂಲಿ ಮಾಡುತ್ತಿದ್ದ ಸ್ಥಳಗಳಲ್ಲಿ ಇದ್ದುಕೊಂಡು ಒಂದೊತ್ತಿನ ಊಟಕ್ಕೂ ಪರದಾಡುವಂತಾಗಿದೆ.
ಹಾಗಾಗಿ ಬಾಡಿಗೆ ಮನೆಯಲ್ಲಿರುವ ಬಾಡಿಗೆದಾರರನ್ನು ಮೂರು ಲಾಕ್ಡೌನ್ ಮುಗಿಯುವವರೆಗೂ ಬಾಡಿಗೆಯನ್ನು ಕೇಳುವಂತಿಲ್ಲ ಹಾಗೂ ಮನೆ ಖಾಲಿ ಮಾಡಿಸುವಂತಿಲ್ಲ ಎಂದು ಸರ್ಕಾರ ಆದೇಶ ನೀಡಿದೆ.
ವಲಸೆ ಕಾರ್ಮಿಕರು ಪರಿತಪಿಸುತ್ತಿರುವ ಈ ಸಂದರ್ಭದಲ್ಲಿ ಮಾಲೂರು ತಾಲ್ಲೂಕಿನ ಕರಿನಾಯಕನಹಳ್ಳಿಯಲ್ಲಿ ಬಹುದೂರದ ಊರುಗಳಿಂದ ವಲಸೆ ಬಂದು ಬಾಡಿಗೆ ಮನೆಯಲ್ಲಿರುವ ಕಾರ್ಮಿಕರಿಗೆ ಮನೆಯ ಮಾಲಿಕರಾದ ಪ್ರಸನ್ನ ಕುಮಾರ್ ಮನೆ ಖಾಲಿ ಮಾಡುವಂತೆ ರಗಳೆ ಮಾಡಿದ್ದಾರೆ. ಅಲ್ಲದೆ, ಮನೆಗಳಲ್ಲಿ ಕರೆಂಟ್ ಕಟ್ ಮಾಡಿ, ಕುಡಿಯಲು ಮತ್ತು ಬಳಕೆಗೆ ನೀರನ್ನು ಸಹ ಬಿಡುದೆ ಹಿಂಸೆ ನೀಡಿದ್ದಾರೆ.
ಘಟನೆಯ ಬಗ್ಗೆ ತಿಳಿದ ಯುವಶಕ್ತಿ ಕರ್ನಾಟಕ ನಿರಾಶ್ರಿತ ಮಕ್ಕಳ ಆಶ್ರಮದ ಮುಖ್ಯಸ್ಥರು ಮಾಲೂರು ಪೋಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ದೂರು ದಾಖಲಿಸಿಕೊಂಡ ಪೊಲೀಸರು ಸ್ಥಳಕ್ಕೆ ಭೇಟಿ ಕೊಟ್ಟು ಮನೆ ಮಾಲೀಕರಿಗೆ ಎಚ್ಚರಿಕೆಯನ್ನು ನೀಡಿ ಸಮಸ್ಯೆಯನ್ನು ಬಗೆಯಹಿಸಿದ್ದಾರೆ ಎಂದು ತಿಳಿದುಬಂದಿದೆ.