Sushant Singh Rajput: ಆತ್ಮಹತ್ಯೆ ಸಮಸ್ಯೆಗೆ ಪರಿಹಾರವಲ್ಲ ಎಂದ ನಟನೇ ಆತ್ಮಹತ್ಯೆಗೆ ಶರಣು!
ಸಮಸ್ಯೆ ಎದುರಾದಾಗ ಅದನ್ನು ಎದುರಿಸಿ ನಿಲ್ಲಬೇಕು.. ಗೆಲ್ಲಬೇಕು.. ಅದನ್ನು ಬಿಟ್ಟು ಸಾವಿಗೆ ಶರಣಾಗೋದು ಪರಿಹಾರವಲ್ಲ! ಹೀಗಂತ ಛಿಚ್ಚೋರೆ ಸಿನಿಮಾದ ತನ್ನ ಪಾತ್ರದ ಮೂಲಕ ಲಕ್ಷಾಂತರ ಜನರಿಗೆ ಸಂದೇಶ ಸಾರಿದ ನಟ ಇಂದು ನೇಣಿಗೆ ಶರಣಾಗಿದ್ದಾರೆ. ಆ ಕುರಿತ ರಿಪೋರ್ಟ್ ಇಲ್ಲಿದೆ.
ಸುಶಾಂತ್ ಸಿಂಗ್ ರಜಪೂತ್ ಬಾಲಿವುಡ್ ನ ಸ್ಫುರದ್ರೂಪಿ ನಟ. 34 ವರ್ಷದ ಈ ಯುವ ನಟ ಬಿ-ಟೌನ್ ನಲ್ಲಿ ಎಮರ್ಜಿಂಗ್ ಆಗುತ್ತಿದ್ದ ಸ್ಟಾರ್. ಇಂತಹ ನಟ ವಯಸ್ಸಲ್ಲದ ವಯಸ್ಸಲ್ಲಿ ಸಾವಿನ ಮನೆಯ ಬಾಗಿಲು ತಟ್ಟಿದ್ದಾರೆ. ಬಾಳಿ ಬದುಕಬೇಕಾದವನು ಶವವಾಗಿ ಮಲಗಿದ್ದಾರೆ. ಮುಂಬೈನ ಬಾಂದ್ರದಲ್ಲಿರುವ ನಿವಾಸದಲ್ಲಿ ಸುಶಾಂತ್ ಸಿಂಗ್ ನೇಣು ಬಿಗಿದುಕೊಂಡು ಸಾವಿಗೆ ಶರಣಾಗಿದ್ದಾರೆ. ಆತ್ಮಹತ್ಯೆಗೆ ಕಾರಣ ಏನಂತ ಇನ್ನೂ ತಿಳಿದುಬಂದಿಲ್ಲ. ಸುಶಾಂತ್ ಕಿರುತೆರೆ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ನಟ. ಪವಿತ್ರ ರಿಶ್ತಾ ಧಾರಾವಾಹಿ ಆತನನ್ನು ಮನೆ ಮನೆಗೆ ತಲುಪಿಸಿತ್ತು.
ಕಾಯ್ ಪೋ ಚೆ ಎಂಬ ಸಿನಿಮಾ ಮೂಲಕ ಬಿ-ಟೌನ್ಗೆ ಎಂಟ್ರಿ ಕೊಟ್ಟ ಸುಶಾಂತ್ ಮೊದಲ ಸಿನಿಮಾದಲ್ಲಿಯೇ ಭರವಸೆ ಮೂಡಿಸಿದ್ದರು. ತನ್ನ ಅದ್ಭುತ ನಟನೆಗಾಗಿ ಫಿಲಂಫೇರ್ ಬೆಸ್ಟ್ ಪ್ರಶಸ್ತಿಯನ್ನು ಸಹ ಮುಡಿಗೇರಿಸಿಕೊಂಡರು. ಧೋನಿ ಜೀವನಾಧಾರಿತ ಎಂ.ಎಸ್. ಧೋನಿ ಸಿನಿಮಾದಲ್ಲಿ ಮನೋಜ್ಞ ಅಭಿನಯ ನೀಡಿ ಚಿತ್ರರಸಿಕರ ಕಣ್ಮಣಿಯಾದರು. ಶುದ್ಧ ದೇಸಿ ರೊಮ್ಯಾನ್ಸ್, ಕೇದರನಾಥ್, ರಾಬ್ಟಾ ಹಾಗೂ ಛಿಚ್ಚೋರೆ ಸಿನಿಮಾಗಳಿಂದ ಕಮರ್ಷಿಯಲ್ ಆಗಿಯೂ ಗೆಲುವು ಕಂಡರು. ಬಾಲಿವುಡ್ ನಲ್ಲಿ ಇನ್ನೂ ಸಾಕಷ್ಟು ಭವಿಷ್ಯ ಇರುವಾಗಲೇ ಸಾವಿಗೆ ಶರಣಾಗಿದ್ದಾರೆ