ಆನ್ಲೈನ್ ಶಿಕ್ಷಣದ ಪಜೀತಿ; ವಿದ್ಯಾರ್ಥಿಗಳಿಗೆ ಬಸ್ ನಿಲ್ದಾಣವೇ ಗತಿ!
ಕೊರೊನಾದಿಂದಾಗಿ ಬಂದ್ ಆಗಿರುವ ಶಾಲಾ-ಕಾಲೇಜುಗಳ ಕಾರಣಕ್ಕೆ ಸರ್ಕಾರ ಆನ್ಲೈನ್ ಶಿಕ್ಷಣ ಜಾರಿ ಮಾಡಿದೆ. ಪೂರ್ವ ಯೋಜನೆ, ಮುಂದಾಲೋಚನೆ ಯಾವುದೂ ಇಲ್ಲದೆ ಜಾರಿಯಾದ ಆನ್ಲೈನ್ ತರಗತಿಗಳಿಂದ ವಿದ್ಯಾರ್ಥಿಗಳಿಗೆ ಉಪಯೋಗಕ್ಕಿಂತ ಸಮಸ್ಯೆಗಳೇ ಹೆಚ್ಚಾಗಿವೆ.
ಆನ್ಲೈನ್ ತರಗತಿಗಳಿಗೆ ಹಾಜರಾಗಲು ಬಹುಸಂಖ್ಯಾತ ಹಳ್ಳಿಗಳಲ್ಲಿ ನೆಟ್ವರ್ಕ್, ಇಂಟರ್ನೆಟ್ ಸಂಪರ್ಕವೇ ಸರಿಯಾಗಿಲ್ಲ. ಅಲ್ಲದೆ, ಹಲವು ಕುಟುಂಬಗಳು ಆಂಡ್ರಾಯ್ಡ್ ಫೋನ್ಗಳನ್ನೂ ಹೊಂದಿಲ್ಲ. ಇಂತಹ ಸಂದರ್ಭದಲ್ಲಿ ಆನ್ಲೈನ್ ಶಿಕ್ಷಣ ಜಾರಿಮಾಡಿರುವ ಸರ್ಕಾರ, ವಿದ್ಯಾರ್ಥಿಗಳನ್ನು ಬಸ್ ಸ್ಟಾಂಡ್ನಲ್ಲಿ ಕೂರುವ ಸ್ಥಿತಿ ತಂದು ನಿಲ್ಲಿಸಿದೆ.
ಕರಾವಳಿ ಹಾಗೂ ಪಶ್ಚಿಮ ಘಟ್ಟದ ಸಾಲಿನಲ್ಲಿರುವ ಬೆಟ್ಟ-ಗುಡ್ಡಗಳಿಂದ ಕೂಡಿರುವ ದಕ್ಷಿಣ ಕನ್ನಡ ಜಿಲ್ಲೆಯ ಹಳ್ಳಿಗಳಿರಲಿ, ಕೆಲವು ನಗರ ಪ್ರದೇಶಗಳಲ್ಲಿಯೂ ನೆಟ್ವರ್ಕ್ ಸಮಸ್ಯೆ ಇದ್ದೇಯಿದೆ. ಹೀಗಾಗಿ ಆನ್ಲೈನ್ ತರಗತಿಗಳನ್ನು ಅಂಟೆಂಡ್ ಮಾಡುವ ಸಲುವಾಗಿ ವಿದ್ಯಾರ್ಥಿಗಳು ಇಂಟರ್ನೆಟ್ ನೆಟ್ವರ್ಕ್ ಹುಡುಕುವ ಸಾಹಸ ಮಾಡಬೇಕಾಗಿದ್ದು, ವಿದ್ಯಾರ್ಥಿಗಳು ಮನೆ ಬಿಟ್ಟು ಬೀದಿ ಸುತ್ತಾಡಬೇಕಾದ ಸ್ಥಿತಿ ನಿರ್ಮಾಣಗೊಂಡಿದೆ.
ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಉಪ್ಪಿನಂಗಡಿ ಗ್ರಾಮದ ಪಾಲೆತ್ತಡಿ ಎಂಬಲ್ಲಿನ ವಿದ್ಯಾರ್ಥಿಗಳಿಗೆ ಬಸ್ ನಿಲ್ದಾಣವೇ ತರಗತಿಯಾಗಿದೆ. ಬೆಳಿಗ್ಗೆ ಎದ್ದು ಆನ್ ಲೈನ್ ಕ್ಲಾಸ್ ಗೆ ಹಾಜರಾಗಲು ಇಲ್ಲಿನ ಹತ್ತಾರು ವಿದ್ಯಾರ್ಥಿಗಳು ಈ ಬಸ್ ನಿಲ್ದಾಣದ ಬಳಿ ಬರುತ್ತಾರೆ. ಬೆಳಿಗ್ಗಿನಿಂದ ಮಧ್ಯಾಹ್ನದವರೆಗೆ ತರಗತಿ ಇರುವ ಕಾರಣ ಕುಳಿತುಕೊಳ್ಳಲು ಕುರ್ಚಿಗಳನ್ನೂ ಹೊತ್ತುಕೊಂಡು ಬರುತ್ತಾರೆ. ಬಸ್ ನಿಲ್ದಾಣದಲ್ಲಿ ಪ್ರಯಾಣಿಕರು ಹೆಚ್ಚಾಗಿ ಇಲ್ಲದ ಕಾರಣ ಈ ವಿದ್ಯಾರ್ಥಿಗಳ ಕ್ಲಾಸ್ ಗಳಿಗೆ ಯಾವುದೇ ಅಡಚಣೆಯಾಗುತ್ತಿಲ್ಲ.
ಮೊಬೈಲ್ ನೆಟ್ವರ್ಕ್ಗಾಗಿ ಮನೆಯಿಂದ ಒಂದು, ಎರಡು ಕಿಲೋಮೀಟರ್ ಕಾಡಿನ ಹಾದಿಯಲ್ಲಿ ಬರುವ ಈ ವಿದ್ಯಾರ್ಥಿಗಳು ಮಧ್ಯಾಹ್ನದ ತನಕ ಬಸ್ ನಿಲ್ದಾಣದಲ್ಲೇ ನಿಂತು ಬಳಿಕ ತರಗತಿ ಮುಗಿದ ಬಳಿಕ ಮನೆಗೆ ಮರಳುತ್ತಾರೆ.
ಆದರೆ, ಈಗ ಕರಾವಳಿ ಭಾಗದಲ್ಲಿ ಸುರಿಯುತ್ತಿರುವ ಮಳೆ ಮತ್ತೋಂದು ಆತಂಕವನ್ನು ವಿದ್ಯಾರ್ಥಿಗಳಿಗೆ ತಂದೊಡ್ಡಿದೆ. ಕೊರೊನಾದಿಂದ ತಪ್ಪಿಸಿಕೊಳ್ಳ ಆನ್ಲೈನ್ ತರಗಳಿಗಾಗಿ ಬರುವ ವಿದ್ಯಾರ್ಥಿಗಳು ಮಳೆಯಿಂದಲೂ ಜಾಗೃತರಾಗಿ ತರಗತಿ ಮುಗಿಸಿ ಮನೆಗೆ ಮರಳುವುದು ಮತ್ತೊಂದು ಸಾಹಸವಾಗಿದೆ.
ಸರಕಾರಿ ಸ್ವಾಮ್ಯದ ಬಿಎಸ್ಎನ್ಎಲ್ ಸೇರಿದಂತೆ ಈ ಭಾಗದಲ್ಲಿ ಯಾವ ನೆಟ್ವರ್ಕ್ಗಳೂ ವರ್ಕ್ ಆಗದ ಕಾರಣ ವಿದ್ಯಾರ್ಥಿಗಳು ಆನ್ಲೈನ್ ತರಗತಿಗಳಿಗಾಗಿ ಈ ಪಾಡು ಪಡುವಂತಾಗಿದೆ. ಜಿಲ್ಲೆಯ ಎಲ್ಲಾ ಊರಿನ ಸಮಸ್ಯೆಗಳೂ ಇದೊಂದೇ ಆಗಿರುವುದರಿಂದ ಎಲ್ಲರೂ ಈ ವಿಚಾರಕ್ಕೆ ಸಂಬಂಧಿಸಿದಂತೆ ಹೊಂದಿಕೊಂಡಿದ್ದಾರೆ.
ಇದನ್ನೂ ಓದಿ: ಬಿಎಸ್ಎನ್ಎಲ್ ಸಂಸ್ಥೆಯಲ್ಲಿರುವವರು ದೇಶದ್ರೋಹಿಗಳು: ಅನಂತ್ ಕುಮಾರ್ ಹೆಗ್ಡೆ ವಿವಾದಾತ್ಮಕ ಹೇಳಿಕೆ