ಪಟಾಕಿಗಳಂತೆ ಸಿಡಿದ ಗ್ಯಾಸ್ ಸಿಲಿಂಡರ್ : ಸಿಲಿಂಡರ್ ಸ್ಫೋಟಕ್ಕೆ ಅಲ್ಲಿ ಏನಾಯ್ತು….?
ದೀಪಾವಳಿ ಹಬ್ಬವಂತು ಸದ್ಯಕ್ಕೆ ಆಚರಿಸುತ್ತಿಲ್ಲ. ಆದ್ರು ಅಲ್ಲಿ ಜೋರಾಗಿ ಪಟಾಕಿಗಳು ಸಿಡಿದಂತಹ ಶಬ್ದ ಕೇಳಿಸಿದೆ. ನಿಜ ಅಲ್ಲಿನ ಜನರು ತಮ್ಮ ಪಾಡಿಗೆ ತಮ್ಮ ತಮ್ಮ ಕೆಲಸದಲ್ಲಿ ಮಗ್ನರಾಗಿದ್ರು. ಆಗ ಇದ್ದಕ್ಕಿದ್ದಂತೆ ಒಂದು ಜೋರಾದ ಶಬ್ಧವೊಂದು ಕೇಳಿ ಬಂದಿತ್ತು.. ದಿಢೀರ್ ಶಬ್ದಕ್ಕೆ ಎಲ್ಲರು ಒಂದು ಕ್ಷಣ ಬೆಚ್ಚಿ ಬೀಳುವಂತೆ ಆಗಿತ್ತು.
ಬೆಂಗಳೂರು ಹೊರವಲಯ ಆನೇಕಲ್ ತಾಲ್ಲೂಕಿನ ದೊಡ್ಡ ತೋಗೂರಿನ ಗೋದಾಮಿನಲ್ಲಿ ಸಿಲಿಂಡರ್ಗಳು ಸ್ಪೋಟಗೊಂಡು ಸುತ್ತಮುತ್ತಲಿನ ವಾಸಿಗಳು ಬೆಚ್ಚಿಬಿದ್ದಿದ್ದರು. ಸ್ಪೋಟದ ತೀವ್ರತೆಗೆ ಗೋಡೆಗಳು ಬಿರುಕುಬಿಟ್ಟಿದ್ದವು. ಸಿಲಿಂಡರ್ಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು. ಅನಧಿಕೃತವಾಗಿ ಸಿಲಿಂಡರ್ಗಳನ್ನು ದಾಸ್ತಾನು ಮಾಡಿದ್ದು, ಸೂಕ್ತ ಸುರಕ್ಷತಾ ಕ್ರಮಗಳನ್ನು ಅನುಸರಿಸದೆ ಗೋದಾಮಿನಲ್ಲಿ ಶೇಖರಣೆ ಮಾಡಿದ್ದೆ ಘಟನೆಗೆ ಕಾರಣ ಎನ್ನಲಾಗಿದೆ. ಹಾಗಾಗಿ ಅನಿಲ ಸೋರಿಕೆಯಾಗಿ ಸಿಲಿಂಡರ್ ಸ್ಪೋಟಗೊಂಡಿದ್ದು, ಅಲ್ಲಿ ಕೆಲಸ ಮಾಡುತ್ತಿದ್ದ ರಾಜಸ್ಥಾನ ಮೂಲದ ದಿನೇಶ್ ಮತ್ತು ಅನಿಲ್ ಎಂಬುವವರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ.
ಕಳೆದ ಐದು ದೇವಾ ರಾಮ್ ಎಂಬ ವ್ಯಕ್ತಿ ರಾಜರೆಡ್ಡಿ ಎಂಬುವವರ ಮನೆಯನ್ನು ಬಾಡಿಗೆ ತೆಗೆದುಕೊಂಡು ಅನಧಿಕೃತವಾಗಿ ಸಿಲಿಂಡರ್ ದಾಸ್ತಾನು ಜೊತೆಗೆ ರಿಪಿಲ್ಲಿಂಗ್ ಮಾಡಿ ಮಾರಾಟ ಮಾಡುತ್ತಿದ್ದ. ಆತನ ಬಳಿ ಕೆಲಸ ಮಾಡುತ್ತಿದ್ದ ದಿನೇಶ್ ಮತ್ತು ಅನಿಲ್ ಸಿಲಿಂಡರ್ ದಾಸ್ತಾನು ಮಾಡುವ ವೇಳೆ ಘಟನೆ ಸಂಭವಿಸಿದೆ. ಅನಿಲ ಸೊರಿಕೆಯಾಗಿ ಸಿಲಿಂಡರ್ಗಳು ಸ್ಪೋಟಗೊಂಡಿದ್ದರಿಂದ ಭಾರಿ ಅನಾಹುತ ಸಂಭವಿಸಬೇಕಿತ್ತು. ಅದೃಷ್ಟವಶಾತ್ ಯಾವುದೇ ಜೀವ ಹಾನಿ ಸಂಭವಿಸಿಲ್ಲ. ಆದ್ರೆ ಸ್ಫೊಟದ ವೇಳೆ ಬೆಂಕಿ ತಾಗಿ ಸಣ್ಣ ಪುಟ್ಡ ಗಾಯಗಳಾಗಿದ್ದು, ಚಿಕಿತ್ಸೆ ಪಡೆಯುತ್ತಿರುವುದಾಗಿ ಗಾಯಾಳು ದಿನೇಶ್ ತಿಳಿಸಿದ್ದಾನೆ.
ಇನ್ನೂ ಗ್ಯಾಸ್ ಸಿಲಿಂಡರ್ ಸ್ಫೋಟದಿಂದ ಮನೆಯ ಸಿಮೆಂಟ್ ತಗಡಿನ ಶಿಟ್ಗಳು ಹಾರಿ ಹೋಗಿದ್ದವು. ಗೋಡೆಗಳು ಬಿರುಕು ಬಿಟ್ಟಿದ್ದವು. ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಅಗ್ನಿಶಾಮಕದಳದ ಸಿಬ್ಬಂದಿ ಸಿಲಿಂಡರ್ಗಳನ್ನು ಪರಿಶೀಲನೆ ನಡೆಸಿ ತೆರವುಗೊಳಿಸಿದ್ದಾರೆ. ಜೊತೆಗೆ ಸ್ಥಳಕ್ಕಾಗಮಿಸಿದ ಪೊಲೀಸರು ಸ್ಥಳದಲ್ಲಿ ಸೇರಿದ ಜನರನ್ನು ಚದುರಿಸಿ ಯಾವುದೇ ಆನಹುತ ಸಂಭವಿಸದಂತೆ ಕ್ರಮ ಕೈಗೊಂಡಿದ್ದಾರೆ. ಘಟನೆಯಿಂದ ಸುತ್ತಮುತ್ತಲಿನ ವಾಸಿಗಳು ಆತಂಕಗೊಂಡಿದ್ದು, ಅಗ್ನಿಶಾಮಕದಳದ ಅಧಿಕಾರಿಗಳು ಸ್ಥಳಕ್ಕೆ ಬಂದು ಸಿಲಿಂಡರ್ಗಳನ್ನು ತೆರವುಗೊಳಿಸಿದ ಬಳಿಕ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.
ಅಂದಹಾಗೆ ನಿರ್ಜನ ಪ್ರದೇಶದಲ್ಲಿ ಸಿಲಿಂಡರ್ ದಾಸ್ತಾನು ಮತ್ತು ಮಾರಾಟ ಮಾಡಬೇಕು ಎಂಬ ಕಟ್ಟುನಿಟ್ಟಿನ ನಿಯಮವಿದ್ರು. ಗೋದಾಮಿನ ಮಾಲೀಕ ಕಾನೂನು ಬಾಹಿರವಾಗಿ ಜನವಸತಿ ಸಮೀಪವೇ ಆಕ್ರಮವಾಗಿ ಸಿಲಿಂಡರ್ ಗೋದಾಮು ಹೊಂದಿದ್ದು, ಮೇಲ್ನೋಟಕ್ಕೆ ಆಕ್ರಮ ಎಂದು ಕಂಡುಬಂದಿದ್ದು,ಮನೆಯ ಮಾಲೀಕ ರಾಜ ರೆಡ್ಡಿ ಎಂಬುವವರನ್ನು ವಶಕ್ಕೆ ಪಡೆದಿರುವ ಎಲೆಕ್ಟ್ರಾನಿಕ್ ಸಿಟಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸುತ್ತಿದ್ದು, ದಂಧೆಯ ಪ್ರಮುಖ ಆರೋಪಿಗಾಗಿ ಬಲೆ ಬೀಸಿದ್ದಾರೆ.