ದೆಹಲಿ ಗಲಬೆಗೆ ಪ್ರಚೋದಿಸಿದ್ದು ಬಿಜೆಪಿ ಕಾರ್ಪೊರೇಟರ್; ಪ್ರತ್ಯಕ್ಷದರ್ಶಿಯಿಂದ ದೂರ!
ಬಿಜೆಪಿ ಕೌನ್ಸಿಲರ್ ಕನ್ಹಯ್ಯ ಲಾಲ್ ಎಂಬುವವರು ಈಶಾನ್ಯ ದೆಹಲಿಯ ಭಾಗೀರಥಿ ವಿಹಾರ್ನಲ್ಲಿ ನಡೆದ ಕೋಮು ಹಿಂಸಾಚಾರದ ಸಂದರ್ಭದಲ್ಲಿ ಮುಸ್ಲಿಮರನ್ನು ತೊಡೆದುಹಾಕಿ ಎಂದು ಆದೇಶ ನೀಡಿದ್ದರು. ಅವರು ಹೇಳಿದ್ದನ್ನು ಪ್ರತ್ಯಕ್ಷವಾಗಿ ನಾನೇ ನೋಡಿದ್ದೇನೆ ಎಂದು ಆ ಪ್ರದೇಶದ ನಿವಾಸಿಯೊಬ್ಬರು ದೆಹಲಿ ಪೊಲೀಸರಿಗೆ ದೂರು ಸಲ್ಲಿಸಿದ್ದಾರೆ.
ಈ ವರ್ಷದ ಫೆಬ್ರವರಿ ಕೊನೆಯ ವಾರದಲ್ಲಿ ನಡೆದ ಈಶಾನ್ಯ ದೆಹಲಿ ಗಲಭೆಗಳ ಕುರಿತ ಚಾರ್ಜ್ಶೀಟ್ಗಳಲ್ಲಿ ಬಿಜೆಪಿ ಮುಖಂಡರನ್ನು ಹೊರತುಪಡಿಸಿ ಉಳಿದವರನ್ನು ಸೇರಿಸುತ್ತಿರುವ ಪೊಲೀಸರ ಕ್ರಮಕ್ಕೆ ತದ್ವಿರುದ್ಧವಾಗಿ ಈ ದೂರು ದನಿಯೆತ್ತಿದೆ.
ಸ್ಥಳೀಯ ಬಿಜೆಪಿ ಮುಖಂಡರು ಗಲಭೆಗೆ ಕುಮ್ಮಕ್ಕು ನೀಡಿದ್ದರು ಎಂದು ಸ್ಥಳೀಯ ನಿವಾಸಿಗಳು ಸಲ್ಲಿಸಿರುವ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಹಲವು ದೂರುಗಳಲ್ಲಿ ಬಿಜೆಪಿ ನಾಯಕರಾದ ಕರವಾಲ್ ನಗರ ಶಾಸಕ ಮೋಹನ್ ಸಿಂಗ್ ಬಿಶ್ತ್, ಮುಸ್ತಾಬಾದ್ ಮಾಜಿ ಶಾಸಕ ಜಗದೀಶ್ ಪ್ರಧಾನ್, ಉತ್ತರ ಪ್ರದೇಶದ ಶಾಸಕ ನಂದ್ ಕಿಶೋರ್ ಗುಜ್ಜರ್, ದೆಹಲಿ ಬಿಜೆಪಿ ಮುಖಂಡ ಕಪಿಲ್ ಮಿಶ್ರಾ ಮತ್ತು ಸ್ವಯಂ ಘೋಷಿತ ಹಿಂದುತ್ವ ನಾಯಕಿ ರಾಗಿಣಿ ತಿವಾರಿ ಅವರ ಹೆಸರುಗಳನ್ನು ಉಲ್ಲೇಖಿಸಲಾಗಿದೆ.
ದೆಹಲಿ ಪೊಲೀಸರ ಚಾರ್ಜ್ಶೀಟ್ಗಳು ಕಪಿಲ್ ಮಿಶ್ರಾ ಅವರ ಹೆಸರನ್ನು ಹೇಗೆ ಬಿಟ್ಟುಬಿಟ್ಟಿವೆ ಎಂಬುದರ ಬಗ್ಗೆ ಈಗಾಗಲೇ ಸಾಕಷ್ಟು ವರದಿಯಾಗಿದೆ. ರಾಗಿಣಿ ತಿವಾರಿ ಅವರು ಗುಂಡುಗಳನ್ನು ಹಾರಿಸಿದರು ಮತ್ತು ಜನಸಮೂಹವನ್ನು ಹೇಗೆ ಪ್ರಚೋದಿಸಿದರು ಎಂದು ಪ್ರತ್ಯಕ್ಷದರ್ಶಿಗಳು ದೂರಿನಲ್ಲಿ ತಿಳಿಸಿದ್ದಾರೆ.
ಈ ಭಾಗವಾಗಿ, ಗಲಭೆಯ ಸಂದರ್ಭದಲ್ಲಿ ಪೂರ್ವ ದೆಹಲಿ ಮುನ್ಸಿಪಲ್ ಕಾರ್ಪೊರೇಶನ್ನ ಜೋಹ್ರಿಪುರದ ಬಿಜೆಪಿ ಕೌನ್ಸಿಲರ್ ಕನ್ಹಯ್ಯ ಲಾಲ್ ಗಲಭೆಯನ್ನು ಮುನ್ನೆಡಿಸಿದ್ದರು ಎಂದು ದೂರಲಾಗಿದೆ. ಈ ಕುರಿತು ಮಾರ್ಚ್ 11 ರಂದು ಗೋಕುಲ್ಪುರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.
ಹಿಂಸಾಚಾರದ ಮೊದಲ ದಿನವಾದ ಫೆಬ್ರವರಿ 24 ರಂದು ಭಾಗೀರತಿ ವಿಹಾರ್ನ ಗಾಲಿ ಸಂಖ್ಯೆ 1/3 ರಲ್ಲಿ “ಜೈ ಶ್ರೀ ರಾಮ್”, “ಆಗ್ ಲಾಗಾವೊ” “ಮಾರೊ” ಎಂದು ಘೋಷಣೆಗಳನ್ನು ಕೂಗುತ್ತಾ ಕನ್ಹಯ್ಯ ಲಾಲ್ ಜನರನ್ನು ಪ್ರಚೋದಿಸಿದ್ದರು ಎಂದು ಪ್ರತ್ಯಕ್ಷದರ್ಶಿಗಳು ದೂರಿನಲ್ಲಿ ತಿಳಿಸಿದ್ದಾರೆ.
“24.02.2020 ರಂದು ನಾನು ನನ್ನ ಮನೆಯಲ್ಲಿದ್ದೆ. ರಾತ್ರಿ 8-9 ರ ಸುಮಾರಿಗೆ ನಾನು ದೊಡ್ಡ ಶಬ್ದ ಮತ್ತು ಗದ್ದಲವನ್ನು ಕೇಳಿ ಮನೆಯಿಂದ ಹೊರಬಂದೆ. ಪಾಲ್ ಚೌಕ್ನ ಶಿವ ಮಂದಿರದ ಕಡೆಗೆ ಸುಮಾರು 100-150 ಜನರು ‘ಜೈ ಶ್ರೀ ರಾಮ್’, ‘ಕಾ ** ಒ ಕೋ ಸಬಕ್ ಸಿಖಾವೊ’ (ಮುಸ್ಲಿಮರಿಗೆ ಪಾಠ ಕಲಿಸಿ) ‘ಆಗ್ ಲಗಾವೊ (ಬೆಂಕಿ ಹಚ್ಚಿ)’ ಎಂದು ಜಪಿಸುತ್ತಿರುವುದನ್ನು ನಾನು ನೋಡಿದೆ. ‘ಮಾರೊ (ಕೊಲ್ಲು)’ ಎಂದು ಕೂಗುತ್ತಾ
ಜನಸಮೂಹವು ಕತ್ತಿಗಳು, ತ್ರಿಶೂಲಗಳು, ದೊಡ್ಡ ಕೊಡಲಿಗಳು ಮತ್ತು ಪಿಸ್ತೂಲ್ಗಳನ್ನು ಹೊತ್ತೊಯ್ಯುತ್ತಿತ್ತು” ಎಂದು ಪ್ರತ್ಯಕ್ಷದರ್ಶಿಯೊಬ್ಬರು ಹೇಳಿದ್ದಾರೆ.
ಜನಸಮೂಹವನ್ನು ಮುನ್ನಡೆಸುತ್ತಿದ್ದ ಯೋಗೇಂದ್ರ ಜೀನ್ಸ್ವಾಲಾ ಮತ್ತು ಕೌನ್ಸಿಲರ್ ಕನ್ಹಯ್ಯ ಲಾಲ್ ಅವರನ್ನು ನಾನು ನೋಡಿದಾಗ ಕನ್ಹಯ್ಯ ಲಾಲ್ ಜನಸಮೂಹವನ್ನು ಯೋಗೇಂದ್ರ ಜೀನ್ಸ್ವಾಲಾ ಅವರ ಅಂಗಡಿಯ ಕಡೆಗೆ ಕರೆತಂದರು ಮತ್ತು ಅವರು ಅಲ್ಲಿಯೇ ನಿಲ್ಲಿಸಿದರು. ಇಡೀ ಜನಸಮೂಹ ಜೋರಾಗಿ ಘೋಷಣೆಗಳನ್ನು ಕೂಗಲಾರಂಭಿಸಿತು. ತಮ್ಮ ಬೀದಿಯ ನಿವಾಸಿಗಳು ತಮ್ಮ ಮನೆಗಳನ್ನು ರಕ್ಷಿಸಲು ರಾತ್ರಿಯಿಡೀ ಕಾವಲು ಕಾಯುತ್ತಿದ್ದರು ಎಂದು ದೂರುದಾರ ನೆನಪಿಸಿಕೊಳ್ಳುತ್ತಾರೆ.
ಆದರೆ ಮಾರ್ಚ್ 11 ರಂದೇ ಭಾಗೀರಥಿ ವಿಹಾರ್ನ ಸ್ಥಳೀಯ ನಿವಾಸಿಗಳು ದೂರು ಸಲ್ಲಿಸಿದರೂ ಈ ಕುರಿತು ತನಿಖೆಯಾಗಲಿ, ಚಾರ್ಜ್ಶೀಟ್ನಲ್ಲಿ ಬಿಜೆಪಿ ಮುಖಂಡರ ಹೆಸರನ್ನಾಗಲಿ ಪೊಲೀಸರು ಕೈಬಿಟ್ಟಿದ್ದು ಆಶ್ಚರ್ಯ ಮೂಡಿಸುತ್ತಿದ್ದು, ಪೊಲೀಸರು ಸ್ಪಷ್ಟವಾಗಿ ಪಕ್ಷಪಾತ ಮಾಡುತ್ತಿದ್ದಾರೆ ಎಂಬ ಆರೋಪಗಳು ಕೇಳಿಬಂದಿವೆ.