ಲಾಕ್ಡೌನ್ ಸಮಯದಲ್ಲಿ ಸರ್ಕಾರ ಮಾಡಿದ್ದೇನೆ; ಕೊರೊನಾ ನಿಯಂತ್ರಣದಲ್ಲಿ ಸರ್ಕಾರ ವಿಫಲ; ನೆಟ್ಟಿಗರ ಆಕ್ರೋಶ
ಲಾಕ್ಡೌನ್ ಸಮಯದಲ್ಲಿ ಸರಕಾರದಲ್ಲಿರುವವರು ಏನ್ಮಾಡಿದ್ರಿ, ಆಸ್ಪತ್ರೆಗಳಲ್ಲಿ ಸೋಂಕಿತರಿಗೆ ಚಿಕಿತ್ಸೆ ಏಕೆ ಸಿಗ್ತಿಲ್, ಸರಕಾರಕ್ಕೆ ಜನಾಕ್ರೋಶದಿಂದ ಪ್ರಶ್ನೆ ಮಾಡುತ್ತಿದ್ದಾರೆ.. ರಾಜ್ಯದಲ್ಲಿ ಕೊರೊನಾ ಖೇಕೆ ಹೆಚ್ಚಾಗಿರುವ ವಿಚಾರವಾಗಿ ನೆಟ್ಟಿಗರು ಹಾಗೂ ಸಾರ್ವಜನಿಕರು ಸರಕಾರಕ್ಕೆ ಹಿಡಿಶಾಪ ಹಾಕುತ್ತಿದ್ದಾರೆ.
ಪರಿಸ್ಥಿತಿ ಕೈಮೀರಬಹುದು ಎಂಬ ಅಂದಾಜಿಲ್ಲದೇ ನಿರ್ಲಕ್ಷ್ಯ ತೋರಿದ್ದೇ ಇಂದಿನ ದುರ್ಗತಿಗೆ ಕಾರಣ ಎಂದು ಹಲವಾರು ಮಂದಿ ಟ್ವಿಟರಿನಲ್ಲಿ ಯಡಿಯೂರಪ್ಪ ಸರಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಟ್ವಿಟರ್ನಲ್ಲಿ ಭಾರೀ ಸದ್ದು ಮಾಡಿರುವ #covid19karnataka ಎಂಬ ಹ್ಯಾಶ್ ಟ್ಯಾಗ್ ಬಳಸಿ ಜನ ಸರಕಾರಕ್ಕೆ ನಾನಾ ಪ್ರಶ್ನೆಗಳನ್ನು ಕೇಳಿದ್ದಾರೆ.
ಮುಖ್ಯವಾಗಿ ಲಾಕ್ಡೌನ್ ಸಮಯದಲ್ಲಿ ಆಸ್ಪತ್ರೆ, ಬೆಡ್ಡುಗಳೂ ಸೇರಿದಂತೆ ಎಲ್ಲ ಅಗತ್ಯ ಮೂಲ ಸೌಕರ್ಯ ಅಣಿ ಮಾಡಿಕೊಳ್ಳುವಲ್ಲಿ ಸರಕಾರ ವಿಫಲವಾಯಿತು ಎಂದು ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬೆಂಗಳೂರಿನಲ್ಲಿ ಚಿಕಿತ್ಸೆ ಸಿಗದೇ ಜನ ಮೃತರಾಗುತ್ತಿರುವುದರ ಬಗ್ಗೆಯಂತೂ ಸಾರ್ವಜನಿಕರು ಸರಕಾರವನ್ನು ಜಾಲಾಡಿದ್ದಾರೆ.
ಖಾಸಗಿ ಆಸ್ಪತ್ರೆಗಳ ಜೊತೆ ಮೊದಲೇ ಮಾತುಕತೆ ನಡೆಸಿ ಸಿದ್ಧತೆ ಮಾಡಿಕೊಳ್ಳುವುದನ್ನು ಬಿಟ್ಟು ಯುದ್ಧಕಾಲೇ ಶಸ್ತ್ರಾಭ್ಯಾಸ ಎಂಬಂತೆ ಪರಿಸ್ಥಿತಿ ವಿಕೋಪಕ್ಕೆ ಹೋದಾಗ ಮಾತುಕತೆ ನಡೆಸಿರುವ ಸರಕಾರದ ಕ್ರಮವನ್ನು ಹಲವರು ಟೀಕಿಸಿದ್ದಾರೆ. ಇದೆಲ್ಲದರ ನಡುವೆ ಮತ್ತೊಮ್ಮೆ ಲಾಕ್ಡೌನ್ ಮಾಡುವುದರ ಪರ ವಿರೋಧದ ಮಾತುಗಳು ಸಹ ಕೇಳಿಬಂದಿದೆ. ಕೇಸುಗಳು ಕಡಿಮೆ ಇದ್ದಾಗ ಬಂದ್ ಮಾಡಿ ಉಲ್ಭಣಿಸಿರುವಾಗ ಎಲ್ಲವನ್ನೂ ತೆರೆದು ಕುಳಿತಿರುವ ಸರಕಾರದ ಕ್ರಮವನ್ನೂ ಜನ ಆಲೋಚನೆ ಮಾಡಿದ್ದಾರೆ.
ಈ ಮಧ್ಯೆ ಬೆಂಗಳೂರಿನಂತಹ ದೊಡ್ಡ ಪಟ್ಟಣದ ಸಮಸ್ಯೆಗಳ ಮೇಲುಸ್ತುವಾರಿ ಮೂವರು ಸಚಿವರ ನಡುವಿನ ಮುಸುಕಿನ ಗುದ್ದಾಟವಾಗಿರುವ ಕುರಿತಾಗಿಯೂ ಜನ ತೀಕ್ಷ್ಣವಾಗಿ ಪ್ರತಿಕ್ರಿಯೆ ನೀಡಿದ್ದಾರೆ. ಒಟ್ಟಿನಲ್ಲಿ ಪರಿಸ್ಥಿತಿ ಅಂಕೆ ಮೀರಿರುವ ಸಂದರ್ಭದಲ್ಲಿ ರಾಜ್ಯದ ಜನ ಸರಕಾರವನ್ನು ಕೇಳುತ್ತಿರುವುದಿಷ್ಟೇ… ಇಷ್ಟು ದಿನ ಏನ್ಮಾಡ್ತಿದ್ರಿ?