ಹಂದಿಗಳಿಗೆ ಫ್ರೀಡಂ, ಜನರಿಗೆ ಲಾಕ್ಡೌನ್; ಕಲಬುರ್ಗಿಯಲ್ಲಿ ಮುಂದುವರೆಯುತ್ತಿದೆ ಲಾಕ್ಡೌನ್
ನಿಯಂತ್ರಣಕ್ಕೆ ಬಾರದ ವೈರಸ್, ಕಲ್ಯಾಣ ಕರ್ನಾಟಕದಲ್ಲಿ ಮಿತಿಮಿರುತ್ತಿರುವ ಸೋಂಕಿತರು, ಕಂಗೆಟ್ಟ ಜಲ್ಲಾ ಆಡಳಿತ, ಲಾಕ್ ಡೌನ್ ಅವದಿ ಹೆಚ್ಚಿಸಿದೆ. ಕಲ್ಬುರ್ಗಿಯಲ್ಲಿ ಕೊರೊನಾ ಸೋಂಕು ತಡೆಗೆ ಜಾರಿ ಮಾಡಲಾಗಿದ್ದ ಲಾಕ್ ಡೌನ್ ಅನ್ನ ಜುಲೈ 27ರವರೆಗೆ ವಿಸ್ತರಿಸಿ ಜಿಲ್ಲಾಧಿಕಾರಿ ಶರತ್ ಆದೇಶ ಹೊರಡಿಸಿದ್ದಾರೆ.
ಕೊರೊನಾ ಪ್ರಕರಣ ಹೆಚ್ಚಳ ಹಿನ್ನೆಲೆ ಸೋಂಕು ಹರಡುವಿಕೆ ನಿಯಂತ್ರಣಕ್ಕೆ ಜುಲೈ 14 ರಿಂದ 20 ವರೆಗೆ ಕಲಬುರಗಿ ನಗರ & ಜಿಲ್ಲೆಯ ನಗರ-ಸ್ಥಳೀಯ ಸಂಸ್ಥೆಗಳ ಪ್ರದೇಶದಲ್ಲಿ ಲಾಕ್ ಡೌನ್ ವಿಧಿಸಲಾಗಿತ್ತು. ಇದೀಗ ಲಾಕ್ ಡೌನ್ ಅವಧಿಯನ್ನು ಮತ್ತೆ ಜು.27ರ ವರೆಗೆ ವಿಸ್ತರಿಸಿ ಜಿಲ್ಲಾಧಿಕಾರಿ ಶರತ್ ಬಿ. ಅವರು ರವಿವಾರ ಆದೇಶ ಹೊರಡಿಸಿದ್ದಾರೆ.
ಲಾಕ್ ಡೌನ್ ಸಂದರ್ಭದಲ್ಲಿ ಅನುಮತಿ ನೀಡಲಾಗಿರುವ ಚಟುವಟಿಕೆಗಳು ಬೆಳಿಗ್ಗೆ 6 ರಿಂದ ಮಧ್ಯಾಹ್ನ 2 ಗಂಟೆ ವರೆಗೆ ತೆರೆಯಲು ಅವಕಾಶ ನೀಡಲಾಗಿದೆ. ಆಸ್ಪತ್ರೆ ಮತ್ತು ಔಷಧಿ ಅಂಗಡಿಗಳಿಗೆ ಈ ಸಮಯದ ನಿರ್ಬಂಧ ಅನ್ವಯವಾಗುವುದಿಲ್ಲ. ಕಲಬುರಗಿಯಲ್ಲಿ ಕೊರೋನಾ ಸೋಂಕು ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆ ಜಿಲ್ಲಾಧಿಕಾರಿ ಈ ಕ್ರಮ ಕೈಗೊಂಡಿದ್ದಾರೆ.
ಕಲಬುರ್ಗಿಯ ಜಿಲ್ಲಾ ಆಸ್ಪತ್ರೆ ಜಿಮ್ಸ್ನಲ್ಲಿ ವೈದ್ಯರು ಮತ್ತು ರೋಗಿಗಳಿಗಿಂತ ಹೆಚ್ಚಾಗಿ ಹಂದಿಗಳೇ ಬಿಂದಾಸ್ ಆಗಿ ಅಡ್ಡಾಡುತ್ತಿವೆ. ಸದ್ಯ ಜಿಮ್ಸ್ ಆಸ್ಪತ್ರೆಯಲ್ಲಿ ಹಂದಿಗಳು ಅಲೆದಾಡುತ್ತಿರುವ ಸುದ್ದಿಯಲ್ಲಿ ರಾಷ್ಟ್ರೀಯ ಸುದ್ದಿವಾಹಿನಿಯೊಂದು ಪ್ರಸಾರ ಮಾಡಿತ್ತು. ಈ ಸುದ್ದಿ ರಾಷ್ಟ್ರವ್ಯಾಪಿ ಪ್ರಸಾರವಾಗಿದೆ. ಈ ಬಗ್ಗೆ ಪ್ರಿಯಾಂಕ್ ಖರ್ಗೆ ಪ್ರತಿಕ್ರಿಸಿದ್ದು, “ಆಸ್ಪತ್ರೆಯಲ್ಲಿ ಹಂದಿಗಳು ಅಡ್ಡಾಡುವುದನ್ನು ರಾಷ್ಟ್ರವ್ಯಾಪಿ ಹೈಲೆಟ್ ಮಾಡಿದ ಬಿಜೆಪಿ ಸರ್ಕಾರಕ್ಕೆ ಅಭಿನಂದನೆ” ಎಂದು ವ್ಯಂಗ್ಯವಾಗಿ ಟೀಕಿಸಿದ್ದಾರೆ.
“ಜಿಮ್ಸ್ ಹಂದಿಗಳ ತಾಣವಾಗಿರುವುದು ರಾಷ್ಟ್ರೀಯ ವಾಹಿನಿಗಳಲ್ಲಿಯೂ ವರದಿಯಾಗಿದೆ. ಕಲ್ಯಾಣ ಕರ್ನಾಟಕ ರಾಷ್ಟ್ರೀಯ ಮಟ್ಟದಲ್ಲಿ ಹೈಲೈಟ್ ಆಗಿದೆ. ಹೀಗೆ ಹೈಲೈಟ್ ಆಗುವಂತೆ ಮಾಡಿರುವ ಬಿಜೆಪಿಗೆ ಅಭಿನಂದನೆ” ಎಂದು ಪ್ರಿಯಾಂಕ್ ಖರ್ಗೆ ಟ್ಟೀಟ್ ಮಾಡಿದ್ದಾರೆ.
“ದೇಶದಲ್ಲಿಯೇ ಮೊದಲ ಕೊರೊನಾ ಸಾವಿನ ವರದಿಯಾದದ್ದು ಕಲಬುರ್ಗಿಯಲ್ಲಿ. ಇಷ್ಟಾದರೂ ಆಸ್ಪತ್ರೆಗಳಲ್ಲಿ ಸ್ವಚ್ಛತೆಗೆ ಆದ್ಯತೆ ನೀಡಿಲ್ಲ. ನಾವೆಲ್ಲಾ ಏನು ಪಾಠ ಕಲಿತಿದ್ದೇವೆ. ಬೇರೆಯವರಿಗೆ ಏನು ಸಂದೇಶ ರವಾನಿಸಿದ್ದೇವೆ. ಸ್ಟಾಂಡರ್ಡ್ ಅಪರೇಷನ್ ಪ್ರೊಸಿಜರ್ ನಿಯಮ ಪಾಲನಿಯಾಗಿದೆಯೇ. ಕೊರೊನಾ ನಿಯಂತ್ರಣಕ್ಕೆ ಆದ್ಯತೆ ನೀಡುವ ಬದಲಿಗೆ, ಬಿಜೆಪಿ ಸರ್ಕಾರ ಲಾಭ ಮಾಡಿಕೊಳ್ಳೋದರಲ್ಲಿ ಬಿಜಿಯಾಗಿದೆ” ಎಂದು ಪ್ರಿಯಾಂಕ್ ಕಿಡಿಕಾರಿದ್ದಾರೆ.